ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ದುರ್ಬಳಕೆ, ಹಲವರಿಗೆ ವಂಚನೆ
ಧಾರವಾಡ, ಜೂನ್ 19: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರೇಳಿಕೊಂಡು ವ್ಯಕ್ತಿಯೊಬ್ಬ ಹಲವು ಜನರಿಂದ ಹಣ ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸಚಿವೆ ಬೆಂಗಳೂರಿನಲ್ಲಿ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, "ಊಟಿ ಮತ್ತು ಚೆನ್ನೈನಲ್ಲಿರುವ ನನ್ನ ಕಚೇರಿ ಮತ್ತು ನನ್ನ ಹೆಸರನ್ನು ಕೆಲವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಒಬ್ಬ ವ್ಯಕ್ತಿ ಈ ಬಗ್ಗೆ ಕರೆ ಮಾಡಿ ನನಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಬೆಂಗಳೂರಿನ ಸಂಜಯ್ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ . ತಕ್ಷಣ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರನ್ನು ಬಂಧಿಸಬೇಕು. ಇದರ ಹಿಂದೆ ಯಾರ ಕೈವಾಡಿವಿದೆ ಎನ್ನುವುದರ ಕುರಿತು ತನಿಖೆ ಮಾಡಲು ಪೊಲೀಸರಿಗೆ ತಿಳಿಸಿದ್ದೇನೆ," ಎಂದರು.
ಪ್ರಸ್ತುತ ಮಾಹಿತಿಯ ಪ್ರಕಾರ ಪ್ರಕಾಶ್ ಎಂಬ ವ್ಯಕ್ತಿ ತಾನೂ ಶೋಭಾ ಕರಂದ್ಲಾಜೆ ಆಪ್ತ ಎಂದು ಹೇಳಿಕೊಂಡು ಜನರಿಗೆ ವಂಚಿಸುತ್ತಿದ್ದಾರೆ. ಕೇಂದ್ರ ಸರಕಾರದ ಟೆಂಡರ್ಗಳನ್ನು ಕೊಡಿಸುವುದಾಗಿ ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾನೆ. ಊಟಿ, ಚೆನ್ನೈ ಉದ್ಯಮಿಗಳು, ಕೃಷಿಕರಿಗೆ ಪ್ರಕಾಶ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ. ತನಿಖೆಯಲ್ಲಿ ಆತನಿಗೂ ಸಚಿವರಿಗೂ ಯಾವದೇ ಸಂಪರ್ಕವಿಲ್ಲ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ:
ಇಂದು ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಎರಡು ಮೂರು ರಾಜ್ಯಗಳಿಗೆ ಸೀಮಿತವಾಗಿದೆ. ಆದ್ದರಿಂದಲೇ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ರಾಜ್ಯದಲ್ಲಿ ಅನಾವಶ್ಯಕ ಗಲಬೆ ಸೃಷ್ಠಿಸುತ್ತಿದ್ದಾರೆ. ಅವರು ಪಾಕಿಸ್ತಾನ ಮತ್ತು ಚೀನಾಗೆ ಹೋಗಿ ಅಲ್ಲಿನ ಮುಖಂಡರ ಜೊತೆಗೆ ಚರ್ಚೆ ಮಾಡಿ, ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎನ್ನುವ ಮಾಹಿತಿ ಬರುತ್ತಿದೆ. ದೇಶದೊಳಗೆ ಇರುವ ದೇಶವಿರೋಧಿ ಸಂಘಟನೆಗಳೊಂದಿಗೂ ಸಂಬಂಧ ಇದೆ . ಬಿಜೆಪಿ ಸೋಲಿಸಲು ಇಂತಹ ದೇಶದ್ರೋಹಿಗಳ ಜೊತೆಗೆ ಕೈ ಜೋಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ

ಕಾನೂನು ಕೈಗೆತ್ತಿಕೊಂಡ್ರೆ ಕ್ರಮ
ದೇಶದಲ್ಲಿ ನಡೆಯುತ್ತಿರುವ ಅಗ್ನಿಪಥ್ ಹೋರಾಟದ ಹಿಂದೆ ದೊಡ್ಡ ಷಡ್ಯಂತ್ರವಿದೆ. ಪ್ರತಿಭಟನೆಯ ಹೆಸರಲ್ಲಿ ಸಾರ್ವಜನಿಕ ಆಸ್ತಿ ನಾಶ ಮಾಡಲಾಗುತ್ತಿದೆ. ಆದರೆ ಇದಕ್ಕೆಲ್ಲಾ ಅಧಿಕಾರ ಕೊಟ್ಟವರು ಯಾರು?. ಶಾಂತಿಯುತ ಪ್ರತಿಭಟನೆ ಮಾಡಲು ಅವಕಾಶವಿದೆ. ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಂಡರೆ, ಕಾನೂನಿನ್ವಯ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.












Click it and Unblock the Notifications