ಅಕ್ರಮ-ಸಕ್ರಮ ಕಾಯ್ದೆ ಅನ್ವಯ ಗೋಮಾಳ ಜಾಗವನ್ನು ಸಕ್ರಮಗೊಳಿಸುವಂತೆ ಒತ್ತಾಯ
ದಾವಣಗೆರೆ, ನವೆಂಬರ್ 25: ಕಳೆದ ಇಪ್ಪತ್ತು ವರ್ಷಗಳಿಂದ ಸರ್ಕಾರದ ಗೋಮಾಳ ಜಾಗದಲ್ಲಿ ನಾವು ಉಳುಮೆ ಮಾಡಿಕೊಂಡು ಬಂದಿದ್ದು, ಅಕ್ರಮ-ಸಕ್ರಮ ಮಾಡಿಕೊಡಬೇಕು ಎಂದು ಹಾಲುವರ್ತಿಯ ಕೆಂಚಮ್ಮ ಒತ್ತಾಯಿಸಿದರು.
ಬುಧವಾರ ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಳೆದ ಮಂಗಳವಾರ ಮುಂಜಾನೆ ಕುಟುಂಬವನ್ನು ಜಾಗ ಖಾಲಿ ಮಾಡುವಂತೆ ಪ್ರಾಣ ಬೆದರಿಕೆ ಹಾಕಿ, ಕುಟುಂಬಸ್ಥರ ಮೇಲೆಲ್ಲಾ ಹಲ್ಲೆ ನಡೆಸಿದ್ದಾರೆ. ನಾವು ಅಲ್ಲಿ ಜೀವನೋಪಾಯಕ್ಕೆ ಹಾಕಿಕೊಂಡಿದ್ದ ಅಂಗಡಿಯನ್ನು, ವಸ್ತುಗಳನ್ನು ಹಾಳು ಮಾಡಿದ್ದಾರೆ. ಒಡವೆ, ಬಟ್ಟೆ, ಬಾಂಡೆ ಸಾಮಾನು ಸೇರಿದಂತೆ ಸುಮಾರು 10 ಲಕ್ಷ ನಷ್ಟ ಮಾಡಿದ್ದಾರೆ ಎಂದರು.
ವಕೀಲ ಗುಮ್ಮನೂರು ಮಲ್ಲಿಕಾರ್ಜುನ್ ಮಾತನಾಡಿ, ಎರಡು ಎಕರೆ 10 ಗುಂಟೆ ಜಾಗದಲ್ಲಿ ವಾಸಕ್ಕೆ ಮನೆ ನಿರ್ಮಿಸಿಕೊಂಡಿದ್ದು, ನಮಗೆ ನೋಟಿಸ್ ನೀಡದೇ ಕುಟುಂಬವನ್ನು ದಾವಣಗೆರೆಯ ತಹಶೀಲ್ದಾರ ಅವರು ಪೊಲೀಸ್ ಭದ್ರತೆಯೊಂದಿಗೆ ಹೊರಹಾಕಿಸಿದ್ದು, ಅಲ್ಲಿ ಬೆಳೆದಿದ್ದ ರಾಗಿ ಬೆಳೆಯನ್ನು ನಾಶ ಮಾಡಿದ್ದಾರೆ ಎಂದು ದೂರಿದರು.

ದಾವಣಗೆರೆ ತಾಲ್ಲೂಕಿನ ಹಾಲುವರ್ತಿ ಗ್ರಾಮದ ಹೊಸ ಬಡಾವಣೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆಂಚಮ್ಮ, ಅವರ ಕುಟುಂಬವು ಸರ್ಕಾರಕ್ಕೆ ಸೇರಿದ ಗೋಮಾಳ ಜಾಗದಲ್ಲಿ ಕಳೆದ 20 ವರ್ಷಗಳಿಂದ ಉಳುಮೆ ಮಾಡುತ್ತಾ, ವಾಸವಿತ್ತು. ಈಗ ಏಕಾಏಕಿ ಆರಾಧ್ಯ ಫ್ಯಾಕ್ಟರಿಯವರಿಗೆ ಭೋಗ್ಯಕ್ಕೆ ಈ ಜಮೀನನ್ನು ಕೊಡಲಾಗಿದೆ ಎಂದು ಹೇಳಿ ಆ ಕುಟುಂಬವನ್ನು ಅಲ್ಲಿಂದ ಒಕ್ಕಲೆಬ್ಬಿಸಲಾಗಿದ್ದು, ಆ ಕುಟುಂಬದ ಹಾಲಮ್ಮ ಎಂಬುವವರು ಈ ಕಾರಣಕ್ಕೆ ವಿಷ ಸೇವಿಸಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಕೆಂಚಮ್ಮ ಮಾತನಾಡಿ, ಕಳೆದ ವರ್ಷ 2019 ರಲ್ಲಿ ಎರಡು ಬಾರಿ ಜಿಲ್ಲಾಡಳಿತಕ್ಕೆ ಅಕ್ರಮ-ಸಕ್ರಮ ಕಾಯ್ದೆ ಅನ್ವಯ ಈ ಗೋಮಾಳ ಜಾಗವನ್ನು ಸಕ್ರಮಗೊಳಿಸವಂತೆ ಕೋರಲಾಗಿದೆಯಾದರೂ ಕೂಡ ಈ ಬಗ್ಗೆ ನಮಗೆ ನ್ಯಾಯ ಒದಗಿಸಿಲ್ಲ. ಕೂಡಲೇ ತಮ್ಮ ಕುಟುಂಬಕ್ಕೆ ಪ್ರಾಣ ರಕ್ಷಣೆ ನೀಡಿ, ಹಲ್ಲೆ ನಡೆಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಈ ಗೋಮಾಳ ಜಾಗದ ಹಕ್ಕುಪತ್ರವನ್ನು ತಮಗೆ ನಿಡಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಅನುಸೂಯಮ್ಮ, ನಾಗವೇಣಿ, ರೇವಣಸಿದ್ದಪ್ಪ, ಸಾಕುಬಾಯಿ ಇದ್ದರು.












Click it and Unblock the Notifications