ನಕಲಿ ಪ್ರಮಾಣ ಪತ್ರ: ಸುಳ್ಳು ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ; ರೇಣುಕಾಚಾರ್ಯ
ದಾವಣಗೆರೆ, ಮಾರ್ಚ್ 26: ನಾನು ಯಾವುದೇ ನಕಲಿ ಪ್ರಮಾಣ ಪತ್ರ ಪಡೆದಿಲ್ಲ. ಯಾವುದೇ ಸರ್ಕಾರಿ ಸೌಲಭ್ಯ ಪಡೆದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟನೆ ನೀಡಿದ್ದಾರೆ.
ಹೊನ್ನಾಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ರೇಣುಕಾಚಾರ್ಯ, ನಾನು ಸರ್ಕಾರಿ ಸೌಲಭ್ಯ ಪಡೆದಿದ್ದೇನೆಂದು ಕಾಂಗ್ರೆಸ್ ವಕ್ತಾರ ಸುಳ್ಳು ಆರೋಪ ಮಾಡಿದ್ದಾರೆ. ನನ್ನ ಮಗಳನ್ನು ವಿನಾಕಾರಣ ಇದರಲ್ಲಿ ಎಳೆ ತಂದಿದ್ದಾರೆ. ನಾನು ಇದನ್ನು ಸಹಿಸುವುದಿಲ್ಲ. ಇವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆಂದು ತಿಳಿಸಿದರು.
ಕಾಂಗ್ರೆಸ್ ರಾಜ್ಯದಲ್ಲಿ ಮುಳುಗಿದ ಹಡಗು. ಮಾಜಿ ಸಿಎಂ ಸಿದ್ದರಾಮಯ್ಯನವರೇ ವಿನಾಕಾರಣ ಗೊಂದಲ ಸೃಷ್ಟಿ ಮಾಡಬೇಡಿ. ನಾನೇ ನಕಲಿ ಪ್ರಮಾಣ ಪತ್ರ ಪಡೆದಿದ್ದರೆ ತನಿಖೆ ಮಾಡಲಿ. ಹೊನ್ನಾಳಿ ಮಾಜಿ ಶಾಸಕರು ಜಾತ್ಯಾತೀತರಲ್ಲ. ನನ್ನ ವಿರುದ್ಧ ಪ್ರತಿಭಟನೆ ಮಾಡಲಿ, ನಾನು ಬೇಡ ಎನ್ನುವುದಿಲ್ಲ. ನಾನು ಯಾವುದೇ ಪ್ರಮಾಣ ಪತ್ರ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ಮಗಳ ಹೆಸರಿನಲ್ಲಿ ಎಸ್ಸಿ ಸರ್ಟಿಫಿಕೇಟ್ ಪಡೆದಿಲ್ಲ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯನೋ, ನಾನು ಹೇಳೋದು ಅಷ್ಟೇ ಸತ್ಯ. ನಾನು ಬೂಟಾಟಿಕೆ ಮಾಡಲು ಹೋಗುವುದಿಲ್ಲ. ಜಾತ್ಯಾತೀತ ವ್ಯಕ್ತಿ, ಯಾವುದೇ ಒಂದು ಧರ್ಮಕ್ಕೆ ಸೇರಿದವನಲ್ಲ. ಎಲ್ಲರನ್ನೂ ಸಮಾನಾಗಿ ಕಾಣುವವನು ಎಂದು ಹೇಳಿದರು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ನನ್ನ ಮಿತ್ರರು. ರೇಣುಕಾಚಾರ್ಯರ ಮಗಳು ಫೇಕ್ ಸರ್ಟಿಫಿಕೇಟ್ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಸ್ಪಷ್ಟೀಕರಣ ಕೇಳಿದ್ದಕ್ಕೆ ನೀಡಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಮಾಧುಸ್ವಾಮಿ ಅವರು ಸಹ ಸದನ ಇರುವುದು ವ್ಯಕ್ತಿಗೆ ಶಿಕ್ಷೆ ಕೊಡುವುದಕ್ಕಲ್ಲ. ಈ ಬಗ್ಗೆ ಚರ್ಚೆ ಬೇಡ. ದೂರು ಕೊಡಿ ಎಂದಿದ್ದಾರೆ. ಆದರೆ ಕಾಂಗ್ರೆಸ್ನ ಕೆಲ ಶಾಸಕರು, ವಿಪಕ್ಷ ನಾಯಕ ಸಿದ್ದರಾಮಯ್ಯ ವಿನಾಕಾರಣ ಆರೋಪ ಮಾಡುತ್ತಾ ಸದನ ಹಾಳು ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ತಪ್ಪು ಮಾಡಿದ್ದರೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಲಿ. ಡಾ. ಬಿ.ಆರ್. ಅಂಬೇಡ್ಕರ್ರವರ ಸಂವಿಧಾನದಂತೆ ನಡೆದಿದ್ದೇನೆ. ಸಂವಿಧಾನಕ್ಕೆ ಗೌರವ ನೀಡುತ್ತೇನೆ. ಕಾಂಗ್ರೆಸ್ನ ಮುಖಂಡರು, ಹೊನ್ನಾಳಿ ಮಾಜಿ ಶಾಸಕರು ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಾ ಜನರನ್ನು ತಪ್ಪು ದಾರಿಗೆ ಕರೆದೊಯ್ಯುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಹೊನ್ನಾಳಿಯಲ್ಲಿ ಶಾಂತನಗೌಡರು ಶಾಸಕರಾಗಿದ್ದಾಗ ದಲಿತರಿಗೆ ಏನು ಮಾಡಿದ್ದಾರೆ. ಮಧ್ಯವರ್ತಿಗಳ ಮೂಲಕ ಸರ್ಕಾರದ ಯೋಜನೆ ಕೊಡಿಸಿದ್ದಾರೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.












Click it and Unblock the Notifications