ಬೆಂಗಳೂರು ಉಸ್ತುವಾರಿ ಯಾರಿಗೆ ಕೊಟ್ಟರೇನು ಬಿಡಪ್ಪ!
ದಾವಣಗೆರೆ, ಅಕ್ಟೋಬರ್ 31; " ಬೆಂಗಳೂರು ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಸಚಿವ ಆರ್. ಅಶೋಕ ಹಾಗೂ ನನ್ನ ನಡುವೆ ಯಾವುದೇ ಫೈಟ್ ಇಲ್ಲ. ಯಾರನ್ನು ನೇಮಿಸಬೇಕೆಂಬುದು ಸಿಎಂ ಬೊಮ್ಮಾಯಿ ಅವರ ಪರಮಾಧಿಕಾರ. ಉಸ್ತುವಾರಿ ಸಚಿವ ಸ್ಥಾನ ಯಾರಿಗೆ ಕೊಟ್ಟರೇನು ಬಿಡಪ್ಪ. ಅದು ಮುಗಿದ ಅಧ್ಯಾಯ" ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ದಾವಣಗೆರೆಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, "ನಾನು ಒಂದೇ ಸಾರಿ ಹೇಳೋದು, ಎರಡನೇ ಸಾರಿ ಹೇಳಿದರೆ ಮಜಾ ಸಿಗಲ್ಲ. ಹಾಗಾಗಿ ಒಂದು ಬಾರಿ ಹೇಳಿದ್ದೀನಿ" ಎಂದು ಹಾಸ್ಯ ಚಟಾಕಿ ಹಾರಿಸಿದರು.
"ಸಿಎಂ ಬಸವರಾಜ ಬೊಮ್ಮಾಯಿ ಅವರೇ ಮುಂದಿನ ಮುಖ್ಯಮಂತ್ರಿ. ಮುಂದಿನ ಚುನಾವಣೆ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮಾಡುತ್ತೇವೆ ಅಂದರೆ ಏನು ಅರ್ಥ. ಅಂದರೆ ಮುಂದಿನ ಸಿಎಂ ಅವರೇ ಎಂದರ್ಥ. ಕಂದಾಯ ಸಚಿವ ಆರ್. ಅಶೋಕ್ ಅವರು ಹೇಳೋದು ಅದೇ ಅರ್ಥ. ನಾನು ಹೇಳೊದು ಅದೇ ಅರ್ಥ" ಎಂದರು.

"ಮತ್ತೆ 2023ಕ್ಕೆ ನಾವು ಅಧಿಕಾರ ಹಿಡಿಯಬೇಕು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಹಾನಗಲ್ ಹಾಗೂ ಸಿಂಧಗಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಹಾನಗಲ್ನಲ್ಲಿ ಶೇ. 83 ಹಾಗೂ ಸಿಂಧಗಿಯಲ್ಲಿ ಶೇಕಡಾ 69 ರಷ್ಟು ಮತದಾನವಾಗಿದೆ. ಸಿಂಧಗಿಯಲ್ಲಿ 18 ರಿಂದ 20 ಸಾವಿರ ಅಂತರದಿಂದ ಗೆಲ್ಲುತ್ತೇವೆ. ಹಾನಗಲ್ನಲ್ಲಿ ಕೂಡ ನಾವೇ ಜಯಭೇರಿ ಬಾರಿಸುತ್ತೇವೆ" ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
"ರಾಜ್ಯ ಸರ್ಕಾರ ಶೋಕಾಚರಣೆ ಜೊತೆಯಲ್ಲಿ ರಾಜಕುಮಾರ್ ಇತಿಹಾಸ ಬಲ್ಲವರಾಗಿ ಅವರ ಕುಟುಂಬದ ಜೊತೆ ಇಡೀ ದೇಶವೇ ಕಂಬನಿ ಮಿಡಿದಿದೆ. ಪುನೀತ್ ರಾಜಕುಮಾರ್ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಇಂದು ಬೆಳಿಗ್ಗೆ ಆಗಿದೆ" ಎಂದು ತಿಳಿಸಿದರು.
ಉಸ್ತುವಾರಿ ಸಿಎಂ ಕೈಯಲ್ಲಿ; ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಿಂದ ಬೆಂಗಳೂರು ನಗರ ಉಸ್ತುವಾರಿ ಮುಖ್ಯಮಂತ್ರಿಗಳ ಕೈಯಲ್ಲಿಯೇ ಇದೆ. ಅಶ್ವತ್ಥ ನಾರಾಯಣ, ಆರ್. ಅಶೋಕ, ವಿ. ಸೋಮಣ್ಣ, ಕೆ. ಗೋಪಾಲಯ್ಯ, ಮುನಿರತ್ನ ಸೇರಿದಂತೆ ವಿವಿಧ ಸಚಿವರು ಸಂಪುಟದಲ್ಲಿದ್ದರೂ ಯಾರಿಗೂ ಸಹ ನಗರ ಉಸ್ತುವಾರಿ ನೀಡಿಲ್ಲ.
ಈಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಬೆಂಗಳೂರು ಉಸ್ತುವಾರಿಗಾಗಿ ಕಂದಾಯ ಸಚಿವ ಆರ್. ಅಶೋಕ ಮತ್ತು ವಸತಿ ಸಚಿವ ವಿ. ಸೋಮಣ್ಣ ನಡುವೆ ಜಟಾಪಟಿ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಈ ಕುರಿತು ಉಭಯ ಸಚಿವರು ಹೇಳಿಕೆಗಳನ್ನು ನೀಡಿದ್ದರು.
ಆರ್. ಅಶೋಕ ಮಾತನಾಡಿ, "ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕೆ ನಾನು ಟವೆಲ್ ಹಾಕಿಲ್ಲ. ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ನೀಡಿದ್ದರು. ಈಗ ಎಂ. ಟಿ. ಬಿ. ನಾಗರಾಜ್ ಸಚಿವರಾದ ಬಳಿಕ ತಮಗೆ ಬಿಟ್ಟುಕೊಡುವಂತೆ ಮನವಿ ಮಾಡಿದ್ದರು. ಅದಕ್ಕೆ ಒಪ್ಪಿದೆ, ನಾನು ಯಾವುದೇ ಜಿಲ್ಲೆಯ ಉಸ್ತುವಾರಿ ಇಲ್ಲದೇ ಕೆಲಸ ಮಾಡಿದ್ದೇನೆ" ಎಂದು ಹೇಳಿದ್ದರು.
"ಸೋಮಣ್ಣ ಸರಿಯಾಗಿ ಹೇಳಿದ್ದಾರೆ. ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ನಾನು ಯಾವುದೇ ಜಿಲ್ಲೆಯ ಉಸ್ತುವಾರಿಗಾಗಿ ಬೇಡಿಕೆ ಇಟ್ಟಿಲ್ಲ. ರಾಜ್ಯದ 31 ಜಿಲ್ಲೆಗೂ ಉಸ್ತುವಾರಿ ಸಚಿವರನ್ನು ನೇಮಿಸುವುದು ಮುಖ್ಯಮಂತ್ರಿಗಳ ಪರಮಾಧಿಕಾರ" ಎಂದು ಆರ್. ಅಶೋಕ ತಿಳಿಸಿದ್ದರು.
ಕಾಂಗ್ರೆಸ್ ಟೀಕೆ; ಪ್ರತಿಪಕ್ಷ ಕಾಂಗ್ರೆಸ್ ಬೆಂಗಳೂರು ಉಸ್ತುವಾರಿಯನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಟೀಕಿಸಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಈ ಕುರಿತು ಮಾತನಾಡಿದ್ದಾರೆ, "ಬೆಂಗಳೂರು ನಗರದಲ್ಲಿ 7 ಜನ ಸಚಿವರಿದ್ದಾರೆ. ಆದರೆ ರಸ್ತೆ ಗುಂಡಿ ಮುಚ್ಚಲು ಆಗುತ್ತಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications