ಬ್ಯಾಂಕ್ ಮುಷ್ಕರ; ದಾವಣಗೆರೆಯಲ್ಲಿ ನೌಕರರ ಬೃಹತ್ ಪ್ರತಿಭಟನೆ
ದಾವಣಗೆರೆ, ಮಾರ್ಚ್ 15; ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ದೇಶವ್ಯಾಪಿ ಬಂದ್ ಕರೆ ನೀಡಿದೆ.
ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಬ್ಯಾಂಕ್ ಮುಷ್ಕರಕ್ಕೆ ದಾವಣಗೆರೆಯಲ್ಲಿಯೂ ಬೆಂಬಲ ನೀಡಲಾಗಿದೆ. ಮಂಡಿಪೇಟೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮುಂಭಾಗ ಸೋಮವಾರ ಪ್ರತಿಭಟನೆ ನಡೆಯಿತು.
ಜಿಲ್ಲಾ ಸಂಚಾಲಕ ಕೆ. ಎನ್. ಗಿರಿರಾಜ್ ಮಾತನಾಡಿ, "ಬ್ಯಾಂಕ್ ಖಾಸಗೀಕರಣವು ದೇಶದ ಹಿತಾಸಕ್ತಿಗೆ ಮಾರಕವಾಗಲಿದ್ದು, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತಂದು ಉದ್ಯೋಗ ಭದ್ರತೆಗೆ ಧಕ್ಕೆ ತರುವುದು ಖಂಡನೀಯವಾಗಿದೆ" ಎಂದರು.

"ಕೇಂದ್ರದ ಈ ನೀತಿ ಖಂಡಿಸಿ ದೇಶಾದ್ಯಂತ ಇಂದಿನಿಂದ ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರ ಹಮ್ಮಿಕೊಳ್ಳಲಾಗಿದೆ. ದೇಶದಾದ್ಯಂತ 90 ಸಾವಿರ ಬ್ಯಾಂಕ್ ಶಾಖೆಗಳು ಸಂಪೂರ್ಣ ಬಂದ್ ಆಗಿವೆ. 10 ಲಕ್ಷ ಬ್ಯಾಂಕ್ ಉದ್ಯೋಗಿಗಳು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ" ಎಂದು ಹೇಳಿದರು.
"ಬ್ಯಾಂಕಿಂಗ್ ಸೌಲಭ್ಯವು ದೇಶದ ಮೂಲೆ ಮೂಲೆಗೂ ತಲುಪಬೇಕು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಹ ಬ್ಯಾಂಕಿನ ಕಟ್ಟೆ ಹತ್ತಬೇಕು. ಆದರೆ, ಪ್ರಸ್ತುತ ದೇಶದ 6,38,000 ಹಳ್ಳಿಗಳ ಪೈಕಿ ಕೇವಲ 35,000 ಹಳ್ಳಿಗಳಲ್ಲಿ ಮಾತ್ರ ಬ್ಯಾಂಕ್ ಶಾಖೆಗಳಿವೆ. ಈ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಿ ಬಲಗೊಳ್ಳಬೇಕಾಗಿದೆ" ಎಂದರು.

ಬ್ಯಾಂಕ್ ಸಂಘಟನೆಯ ನಾಯಕ ಎಸ್. ಟಿ. ಶಾಂತಗಂಗಾಧರ್ ಮಾತನಾಡಿ, "ದೇಶದ ಜನರ ಉಳಿತಾಯದ ಹಣದ ಲೂಟಿಗೆ ಅವಕಾಶ ಮಾಡುವುದು, ಜನಸಾಮಾನ್ಯರ ಠೇವಣಿ ಹಣದ ಹಿತಾಸಕ್ತಿಗೆ ಮತ್ತು ಉದ್ಯೋಗಾವಕಾಶ ಮತ್ತು ಮೀಸಲಾತಿಯಂತಹ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಸಾಕಾರಕ್ಕೆ ಧಕ್ಕೆ ತರುವುದು, ಬ್ಯಾಂಕ್ ಶಾಖೆಗಳ ಮುಚ್ಚುವಿಕೆ ಮತ್ತು ಜನಸಾಮಾನ್ಯರನ್ನು ಬ್ಯಾಂಕಿಂಗ್ ಸೇವೆಯಿಂದ ಹೊರಗಿಡುವ ಪ್ರಯತ್ನ ಖಂಡಿತವಾಗಿಯೂ ದೇಶ ವಿರೋಧಿ ಮತ್ತು ಜನವಿರೋಧಿಯಾಗಿದೆ" ಎಂದು ದೂರಿದರು.
ಮುಷ್ಕರದಲ್ಲಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ಅಂಗ ಸಂಘಟನೆಗಳಾದ ಎ.ಐ.ಬಿ.ಇ.ಎ., ಎ.ಐ.ಬಿ.ಓ.ಸಿ., ಎನ್.ಸಿ.ಬಿ.ಇ., ಎ.ಐ.ಬಿ.ಓ.ಎ., ಬಿ.ಇ.ಎಫ್.ಐ., ಐ.ಎನ್.ಬಿ.ಇ.ಎಫ್., ಐ.ಎನ್.ಬಿ.ಓ.ಸಿ., ಎನ್.ಓ.ಬಿ.ಡಬ್ಲ್ಯು., ಎನ್.ಓ.ಬಿ.ಓ., ಗ್ರಾಮೀಣ ಬ್ಯಾಂಕ್ ನೌಕರರ ಮತ್ತು ಅಧಿಕಾರಿಗಳ ಸಂಘಗಳು ಹಾಗೂ ಪಿಗ್ಮಿ ಸಂಗ್ರಹಕಾರರ ಸಂಘಟನೆಗಳು ಭಾಗವಹಿಸಿದ್ದವು.












Click it and Unblock the Notifications