ಅಧಿಕಾರಿಗಳ ಸೋಗಿನಲ್ಲಿ ಚಿನ್ನ ದೋಚಿದ ಕಳ್ಳರು
ದಾವಣಗೆರೆ, ಆಗಸ್ಟ್ 16: ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿ ಕಳ್ಳತನ ಮಾಡಿದ ಘಟನೆ ದಾವಣಗೆರೆಯ ಶಿವಕುಮಾರ್ ಸ್ವಾಮಿ ಬಡಾವಣೆಯ ದುರ್ಗಾಂಭಿಕಾ ಶಾಲೆ ಬಳಿ ನಡೆದಿದೆ.
ಚನ್ನಪ್ಪ ಎನ್ನುವರ ಮನೆಯಲ್ಲಿ ಕಳ್ಳತನವಾಗಿದ್ದು, ಹಾಡುಹಗಲೇ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಚನ್ನಪ್ಪ ಅವರ ಮನೆಯಲ್ಲಿ ಚನ್ನಪ್ಪನ ತಾಯಿ ಹಾಗೂ ಹೆಂಡತಿ ಇಬ್ಬರೇ ಇದ್ದುದನ್ನು ಗಮನಿಸಿದ ಖದೀಮರು ನಾವು ಪಾಲಿಕೆ ಅಧಿಕಾರಿಗಳು, ನಿಮ್ಮ ಮನೆ ಪತ್ರ ಹಾಗೂ ಕಂದಾಯ ಪತ್ರಗಳನ್ನು ಪರಿಶೀಲನೆ ಮಾಡಬೇಕು ಎಂದು ಹೇಳಿ ಮನೆಯೊಳಗೆ ನುಗ್ಗಿದ್ದಾರೆ.

ಚನ್ನಪ್ಪನ ಮಡದಿ ಸುಧಾ ಹಾಗೂ ತಾಯಿ ರುದ್ರಮ್ಮ ಇಬ್ಬರೇ ಮನೆಯಲ್ಲಿ ಇದ್ದುದರಿಂದ ದಾಖಲೆಗಳನ್ನು ತರಲು ಹೋಗಿದ್ದಾರೆ. ಬರುವಷ್ಟರಲ್ಲಿ ವರ ಮಹಾಲಕ್ಷ್ಮಿ ಹಬ್ಬಕ್ಕೆಂದು ಬ್ಯಾಂಕ್ನಿಂದ ಬಿಡಿಸಿಕೊಂಡು ಬಂದಿದ್ದ ಒಂದು ಕೆಜಿ ಚಿನ್ನ ಹಾಗೂ 30 ಸಾವಿರ ನಗದನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಕಳ್ಳತನ ಮಾಡಲು ಬಂದವರು ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದ್ದು, ಸ್ಥಳಕ್ಕೆ ಕೆಟಿಜೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications