Chandrashekar Death Timeline; ಚಂದ್ರಶೇಖರ್ ಶವ ಪತ್ತೆ, 5 ದಿನದ ಘಟನಾವಳಿಗಳು
ದಾವಣಗೆರೆ, ನವೆಂಬರ್ 3: ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹೊನ್ನಾಳಿ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಸಹೋದರ ಚಂದ್ರಶೇಖರ್ ಶವ ಗುರುವಾರ ತುಂಗಾ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಮಗನ ಆಗಮನದ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಈ ಸಾವಿನ ಸುದ್ದಿ ಆಘಾತ ತಂದಿದೆ.
ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ಇರುವ ತುಂಗಾ ಕಾಲುವೆಯಲ್ಲಿ ಬಿಳಿ ಬಣ್ಣದ ಕಾರು ಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಕ್ರೇನ್ ಮೂಲಕ ಕಾರನ್ನು ಮೇಲೆತ್ತಿದ್ದಾರೆ. ಬಳಿಕ ಕಾರಿನಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿದೆ. ಮಗನ ಶವ ಕಂಡು ಶಾಸಕ ರೇಣುಕಾಚಾರ್ಯ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಶಾಸಕ ರೇಣುಕಾಚಾರ್ಯರ ರಾಜಕೀಯ ಬೆನ್ನೆಲುಬಾಗಿದ್ದ ಚಂದ್ರಶೇಖರ್
* ಅಕ್ಟೋಬರ್ 30ರಂದು ನಾಪತ್ತೆ
ಭಾನುವಾರ ರೇಣುಕಾಚಾರ್ಯ ಸಹೋದರ ಎಂ. ಪಿ. ರಮೇಶ್ ಪುತ್ರ ಚಂದ್ರಶೇಖರ್ ಭಾನುವಾರ ಸಂಜೆ ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದು ರಾತ್ರಿ ಹೊನ್ನಾಳಿಗೆ ವಾಪಸ್ ಬಂದಿದ್ದರು. ಆದರೆ ಮನೆಗೆ ಹೋಗಿರಲಿಲ್ಲ. ಕುಟುಂಬಸ್ಥರು ಸ್ನೇಹಿತರ ಜೊತೆಗಿರಬಹುದು ಎಂದು ಭಾವಿಸಿದ್ದರು. ಆದರೆ ಸ್ವಲ್ಪ ಸಮಯದ ನಂತರ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಬಂದಿದೆ. ಹೊನ್ನಾಳಿಯಲ್ಲಿ ಆಪ್ತರು, ಸ್ನೇಹಿತರನ್ನು ಕೇಳಿದರೂ ಚಂದ್ರಶೇಖರ್ ಪತ್ತೆಯಾಗಿರಲಿಲ್ಲ.
* ನವೆಂಬರ್ 1 ದೂರು ದಾಖಲು
ಅಕ್ಟೋಬರ್ 31 ಭಾನುವಾರ ಮಗ ಮನೆಗೆ ಬಾರದ ಕಾರಣ ಸೋಮವಾರ ಕುಟುಂಬಸ್ಥರು ದಾವಣಗೆರೆ ಪೊಲೀಸ್ ರಾಣೆಯಲ್ಲಿ ದೂರು ದಾಖಲಿಸಿದ್ದರು.
* ಶಿವಮೊಗ್ಗ ಬಳಿ ಸಿಸಿಟಿವಿಯಲ್ಲಿ ಕಾರು ಪತ್ತೆ
ಭಾನುವಾರ ಚಿಕ್ಕಮಗಳೂರಿಗೆ ಹೋಗಿದ್ದರಂತೆ. ಸೋಮವಾರ ಮಧ್ಯರಾತ್ರಿ ಒಂದು ಗಂಟೆಗೆ ಚಂದ್ರಶೇಖರ್ ಕಾರು ಶಿವಮೊಗ್ಗದ ಹತ್ತಿರದ ಸುರಹೊನ್ನೆಯಲ್ಲಿರುವ ಪೆಟ್ರೋಲ್ ಬಂಕ್ ಮುಂದಿನ ರಸ್ತೆ ಮೂಲಕ ಹಾದು ಹೋಗುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿಯಾಗಿತ್ತು.
* ಅಪಹರಣದ ಆರೋಪ
ಐದು ದಿನಗಳು ಕಳೆದರೂ ಚಂದ್ರಶೇಖರ್ ಪತ್ತೆಯಾಗದ ಕಾರಣ ರೇಣುಕಾಚಾರ್ಯ ತಮ್ಮ ಸಹೋದರನ ಮಗನ ಅಪಹರಣವಾಗಿರಬಹುದು. ಇದಕ್ಕೆ ಪೂರಕವಾದ ಮಾಹಿತಿ ನನಗೆ ಬರುತ್ತಿದೆ ಎಂದು ಸ್ಫೋಟಕ ಮಾಹಿತಿ ನೀಡಿದ್ದರು. ಘಟನೆ ನಡೆದು ಐದು ದಿನಗಳಾದರೂ ಯಾವುದೇ ಸುಳಿವು ಸಿಕ್ಕಲ್ಲ, ಉದ್ದೇಶ ಪೂರ್ವಕವಾಗಿ ಚಂದ್ರಶೇಖರ್ನನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿದ್ದರು.
* ನಾಪತ್ತೆ ಪ್ರಕರಣ ಭೇದಿಸಲು ತಂಡ ರಚನೆ
ರೇಣುಕಾಚಾರ್ಯ ರಾಜ್ಯದ ಪ್ರಭಾವಿ ರಾಜಕಾರಣಿಯಾಗಿರುವುದರಿಂದ ಅವರ ಮನೆಯ ಮಗನ ನಾಪತ್ತೆ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ಕಾರಣದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಚಂದ್ರಶೇಖರ್ ಪತ್ತೆಗಾಗಿ 4 ವಿಶೇಷ ತಂಡಗಳನ್ನು ರಚಿಸಿದ್ದರು.
* ಗುರುವಾರ ಶವ ಪತ್ತೆ
ಅತ್ತ ಪೊಲೀಸರು 4 ತಂಡಗಳೊಂದಿಗೆ ಚಂದ್ರಶೇಖರ್ನನ್ನು ಹುಡುಕಾಡಲು ಶುರು ಮಾಡುತ್ತಿದ್ದಂತೆ ಗುರುವಾರ ಮಧ್ಯಾಹ್ನ ಹೊನ್ನಾಳಿ-ನ್ಯಾಮತಿ ನಡುವೆ ಬರುವ ತುಂಗಾ ಮೇಲ್ದಂಡೆ ನಾಲೆಯ ಬಳಿ ಕಾರಿನ ಅವಶೇಷಗಳು ಪತ್ತೆಯಾಗಿದ್ದವು.
ಸೇತುವೆಯ ತಡೆಗೋಡೆ ಬಳಿ ಕಾರಿನ ಬಿಡಿಭಾಗಗಳು ಪತ್ತೆಯಾಗಿತ್ತು. ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ನಂತರ ನಾಲೆಯಲ್ಲಿ ಕಾರು ಕಾಣಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮಾಡಿ ಕಾರನ್ನು ಮೇಲಕ್ಕೆತ್ತಿದ್ದರು. ಕಾರಿನ ಹಿಂಬದಿ ಸೀಟ್ನಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿತ್ತು.
* ದಾವಣಗೆರೆಗೆ ಪಾರ್ಥೀವ ಶರೀರ
ಚಂದ್ರಶೇಖರ್ ಪಾರ್ಥೀವ ಶರೀರವನ್ನು ತುಂಗಾ ಮೇಲ್ದಂಡೆ ನಾಲೆಯ ಸೇತುವೆಯಿಂದ ದಾವಣಗೆರೆಯ ರೇಣುಕಾಚಾರ್ಯ ಮನೆ ತರಲಾಗಿದೆ.
* ಶುಕ್ರವಾರ ಅಂತ್ಯ ಸಂಸ್ಕಾರ
ಚಂದ್ರಶೇಖರ್ ಶವವನ್ನು ಈಗಾಗಲೆ ದಾವಣಗೆರೆಗೆ ತರಲಾಗಿದ್ದು, ನವೆಂಬರ್ 4ರಂದು ಸಂಜೆ ಮೂರು ಗಂಟೆಗೆ ಜರುಗಲಿದೆ ಎಂದು ತಿಳಿದುಬಂದಿದೆ.