ರಮೇಶ್ ಜಾರಕಿಹೊಳಿ ವಿಚಾರ ಕೋರ್ಟ್ನಲ್ಲಿ ಇತ್ಯರ್ಥ; ಮಾಧುಸ್ವಾಮಿ
ದಾವಣಗೆರೆ, ಮಾರ್ಚ್ 07: " ರಮೇಶ್ ಜಾರಕಿಹೊಳಿ ವಿಚಾರದಲ್ಲಿ ತಪ್ಪು ಸರಿ ಎಂಬುದನ್ನು ನ್ಯಾಯಾಲಯ ಹೇಳುತ್ತದೆ. ಆದರೆ, ಅಷ್ಟರಲ್ಲಿ ಅವರ ತೇಜೋವಧೆ ಆಗಿ ಹೋಗಿರುತ್ತದೆ" ಎಂದು ಸಣ್ಣ ನೀರಾವರಿ ಸಚಿವ ಜೆ. ಸಿ. ಮಾಧುಸ್ವಾಮಿ ಹೇಳಿದರು.
ಭಾನುವಾರ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಗುರುಪೀಠಕ್ಕೆ ಸಚಿವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
"ಜಾರಕಿಹೊಳಿ ಅವರ ವಿಚಾರದಲ್ಲಿ ಸಂತ್ರಸ್ಥೆ ಬಂದು ದೂರು ನೀಡಿಲ್ಲ ಎಂಬ ವಿಚಾರ ಚರ್ಚೆ ಆಗುತ್ತದೆ. ಈ ಹಿಂದೆ ಒಂದು ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಯಾವುದೇ ಆರೋಪ ಇದ್ದರೆ ಅದರ ಬಗ್ಗೆ ಬೇಕಾದವರು ದೂರು ಸಲ್ಲಿಸಬಹುದು ಎಂದು" ಸಚಿವರು ತಿಳಿಸಿದರು.

"ಇದನ್ನು ಬಳಕೆ ಮಾಡಿಕೊಂಡು ಮೂರನೇ ವ್ಯಕ್ತಿಗಳು ದೂರು ನೀಡುತ್ತಿದ್ದಾರೆ. ಇಲ್ಲವಾದರೆ ಕೇಸ್ಗೆ ಸಂಬಂಧಿಸಿವರು ಮಾತ್ರ ದೂರು ನೀಡಬೇಕು" ಎಂದು ಸಚಿವ ಮಾಧುಸ್ವಾಮಿ ಹೇಳಿದರು.
"25ಕ್ಕೂ ಹೆಚ್ಚು ಸಚಿವರು ಕೋರ್ಟ್ ಮೊರೆ ಹೋಗುತ್ತಿದ್ದಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ನೈತಿಕತೆ ಬಗ್ಗೆ ಹೆಚ್ಚು ಆದ್ಯತೆ. ನಾನು ಈ ಪ್ರಕರಣಕ್ಕೆ ಉತ್ತರಿಸಿದರೂ ಒಂದು ಮಾತು ಬರುತ್ತದೆ. ಉತ್ತರಿಸುತ್ತಿದ್ದರೂ ಒಂದು ಮಾತು ಬರುತ್ತದೆ. ನನ್ನದು ಅಂತಹ ಯಾವುದೇ ಸಿಡಿಗಳು ಇಲ್ಲ" ಎಂದು ಮಾಧುಸ್ವಾಮಿ ನಗೆ ಚಟಾಕಿ ಹಾರಿಸಿದರು.
ಯಾವುದೇ ಚರ್ಚೆ ಇಲ್ಲ; "ಪೀಠದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಬೇರೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ. ದಾರಿಯಲ್ಲಿ ಪಂಚಮಸಾಲಿ ಗುರುಪೀಠ ಇತ್ತು. ಗುರುಪೀಠದ ವಚನಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿದೆ. ವಿಶೇಷವಾಗಿ ಯಾವುದೇ ಚರ್ಚೆ ನಡೆದಿಲ್ಲ" ಎಂದು ಮಾಧುಸ್ವಾಮಿ ಸ್ಪಷ್ಟನೆ ನೀಡಿದರು.
ವಚನಾನಂದ ಸ್ವಾಮೀಜಿ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ತೊಡಗಿಕೊಂಡಿದ್ದರು. ಮೀಸಲಾತಿ ವಿಚಾರವಾಗಿ ಚರ್ಚೆ ನಡೆಸಲು ಸಚಿವರು ಆಗಮಿಸಿದ್ದರೇ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.












Click it and Unblock the Notifications