ದಾವಣಗೆರೆ ಖಾಸಗಿ ಬಸ್ ಪಲ್ಟಿ, 25 ಜನರಿಗೆ ಗಾಯ
ದಾವಣಗೆರೆ, ಮೇ 14 : ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಪಲ್ಟಿಯಾದ ಘಟನೆ ದಾವಣಗೆರೆ-ಬಳ್ಳಾರಿ ರಸ್ತೆಯಲ್ಲಿ ನಡೆದಿದೆ. ಈ ಅಪಘಾತದಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಸೋಮವಾರ ಸಂಜೆ ದಾವಣಗೆರೆಯಿಂದ ಬಳ್ಳಾರಿಗೆ ಹೊರಟಿದ್ದ ಬಸ್ ಕೂಡ್ಲಗಿ ತಾಲೂಕಿನ ಗುಡೇಕೋಟೆ ಗ್ರಾಮದ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಎಸ್ಆರ್ಎಂಎಸ್ ಸಂಸ್ಥೆಗೆ ಸೇರಿದ ಬಸ್ನಲ್ಲಿ 32 ಪ್ರಯಾಣಿಕರಿದ್ದರು.
ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಹೊಲಕ್ಕೆ ಉರುಳಿದೆ. ದಾವಣಗೆರೆ, ಚನ್ನಗಿರಿ ಹಾಗೂ ಕೂಡ್ಲಗಿ ತಾಲೂಕಿನ ಹೆಚ್ಚಿನ ಜನರು ಬಸ್ನಲ್ಲಿದ್ದರು. ಅಪಘಾತ ನೋಡಿದ ಸ್ಥಳೀಯರು ತಕ್ಷಣ ಆಂಬ್ಯುಲೆನ್ಸ್ಗೆ ಕರೆ ಮಾಡಿದರು.

ಅಪಘಾತದಲ್ಲಿ ಗಾಯಗೊಂಡವರನ್ನು ಬಳ್ಳಾರಿಯ ವಿಮ್ಸ್, ಕೂಡ್ಲಗಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡವರಲ್ಲಿ 10 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಶಾಸಕರಿಂದ ಸೂಚನೆ : ಕೂಡ್ಲಗಿ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ವೈದ್ಯರಿಗೆ ಕರೆ ಮಾಡಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. ಬಸ್ ಪಲ್ಟಿಯಾಗಲು ಅತಿ ವೇಗವೇ ಕಾರಣ ಎಂದು ಶಂಕಿಸಲಾಗಿದೆ.











Click it and Unblock the Notifications