ಮಂಗಕ್ಕೆ ಅಂತ್ಯಸಂಸ್ಕಾರ ಮಾಡಿ, ಸಮಾಧಿ ಕಟ್ಟಿದ ಗ್ರಾಮಸ್ಥರು
ದಾವಣಗೆರೆ, ಜನವರಿ 9: ಊರಿನೊಳಗೆ ಬಂದು ಎಲ್ಲರೊಂದಿಗೆ ಬೆರೆತು ಆಡಿಕೊಂಡಿದ್ದ ಮಂಗವೊಂದು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು, ಆ ಮಂಗಕ್ಕೆ ಅಂತ್ಯಸಂಸ್ಕಾರ ನೆರವೇರಿಸಿ ಭಾವನಾತ್ಮಕವಾಗಿ ಬೀಳ್ಕೊಟ್ಟಿದ್ದಾರೆ ದಾವಣಗೆರೆಯ ಸಂತೇಬೆನ್ನೂರಿನ ಗ್ರಾಮಸ್ಥರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ಸತ್ತ ಮಂಗಕ್ಕೆ ಮನುಷ್ಯರ ರೀತಿ ಅಂತ್ಯಕ್ರಿಯೆ ನಡೆಸಿ ಗ್ರಾಮಸ್ಥರೆಲ್ಲಾ ಸೇರಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಭಾವನಾತ್ಮಕವಾಗಿ ಬೀಳ್ಕೊಟ್ಟಿದ್ದಾರೆ.
ಮೂರು ತಿಂಗಳ ಹಿಂದೆ ಎರಡು ಮಂಗಗಳು ಎಸ್.ವಿ.ಆರ್ ಕಾಲೋನಿಗೆ ಬಂದಿದ್ದವು. ಇಲ್ಲಿನ ಜನರಿಗೆ ಯಾವುದೇ ತೊಂದರೆ ಕೊಡದೇ ಎಲ್ಲರೊಂದಿಗೆ ಬೆರೆತಂತೆ ಇದ್ದವು. ಆದರೆ ನಿನ್ನೆ ಇದ್ದಕ್ಕಿದ್ದಂತೆ ಮಂಗವೊಂದು ಸಾವನ್ನಪ್ಪಿತು. ಅದಕ್ಕೆ ಗ್ರಾಮಸ್ಥರೆಲ್ಲಾ ಸೇರಿ ಅಂತ್ಯಕ್ರಿಯೆ ನಡೆಸಿದರು.

ಎಲ್ಲರ ಪ್ರೀತಿ ಪಾತ್ರವಾಗಿದ್ದ ವಾನರನ ನೆನಪು ಅಚ್ಚಳಿಯದೇ ಉಳಿಯಬೇಕು ಎಂದು ಅದರ ಸಮಾಧಿ ಮೇಲೆ ಚಿಕ್ಕದಾದ ಆಂಜನೇಯ ಗುಡಿ ಸ್ಥಾಪಿಸಿ ಅಲ್ಲಿ ಆಂಜನೇಯನ ಭಾವಚಿತ್ರ ಇಟ್ಟು ಜನರು ಪೂಜಿಸತೊಡಗಿದ್ದಾರೆ. ಮುಂದೆ ಇದೇ ಜಾಗದಲ್ಲಿ ದೊಡ್ಡ ದೇಗುಲ ನಿರ್ಮಾಣ ಮಾಡುವುದಾಗಿಯೂ ಗ್ರಾಮಸ್ಥರು ತಿಳಿಸಿದ್ದಾರೆ.












Click it and Unblock the Notifications