ದಾವಣಗೆರೆ: ಆಸ್ಪತ್ರೆಯಲ್ಲಿ ಜನಜಂಗುಳಿ; ಟೇಬಲ್ ಮೇಲೆಯೇ ರೋಗಿಗಳಿಗೆ ಚಿಕಿತ್ಸೆ
ದಾವಣಗೆರೆ, ಮೇ 26: ಕೋವಿಡ್ ಹಾಗೂ ಕೆಪಿಎಂ ನಿಯಮಾವಳಿಯನ್ನು ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಯೊಂದು ಗಾಳಿಗೆ ತೂರಿದ ಆರೋಪ ಕೇಳಿ ಬಂದಿದೆ.
ಖಾಸಗಿ ಆಸ್ಪತ್ರೆಯಲ್ಲಿ ಸಾಮಾಜಿಕ ಅಂತರವಿರಲಿಲ್ಲ, ಎಲ್ಲರೂ ಮಾಸ್ಕ್ ಧರಿಸಿರಲಿಲ್ಲ ಹಾಗೂ ಬೆಡ್ ಇಲ್ಲದ ಕಾರಣ ಟೇಬಲ್ ಮೇಲೆ ಮಲಗಿಸಿ ಡ್ರಿಪ್ನ್ನು ವೈದ್ಯರು ಹಾಕಿದ್ದಾರೆ. ಒಂದೇ ಬೆಡ್ನಲ್ಲಿ ಇಬ್ಬರು ರೋಗಿಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ರೋಗಿಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಎಂ ಹಾಗೂ ಎಪಿಡೆಮಿಕ್ ಡಿಸೀಜಸ್ ಕಾಯ್ದೆ ಉಲ್ಲಂಘನೆ ಮಾಡಲಾಗುತ್ತಿದ್ದರೂ, ದಾವಣಗೆರೆ ಜಿಲ್ಲಾಡಳಿತವಾಗಲೀ, ಆರೋಗ್ಯ ಇಲಾಖೆಯ ಅಧಿಕಾರಿಗಳಾಗಲೀ ಇತ್ತ ಗಮನ ಹರಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ದಾವಣಗೆರೆ ನಗರದ ಕೆ.ಆರ್ ರಸ್ತೆಯಲ್ಲಿರುವ ಡಾ.ದೀಪಕ್ ಬೋಂದಾಡೆ ಒಡೆತನದ ಗುರುನಾಥ ಖಾಸಗಿ ಆಸ್ಪತ್ರೆಯಲ್ಲಿ ಈ ಅವ್ಯವಸ್ಥೆ ಕಂಡು ಬಂದಿದ್ದು, ಕೋವಿಡ್ ಹೆಮ್ಮಾರಿಯನ್ನು ಹರಡುವ ಕೇಂದ್ರದಂತಾಗಿದೆ. ಆಸ್ಪತ್ರೆಯಲ್ಲಿ ಜನಜಾತ್ರೆ, ಸಾಮಾಜಿಕ ಅಂತರವೇ ಇಲ್ಲದಂತಾಗಿತ್ತು. ಕೆಲ ರೋಗಿಗಳಿಗೆ ಟೇಬಲ್ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜನರನ್ನು ನಿಯಂತ್ರಿಸಲು ಆಗುತ್ತಿಲ್ಲ. ಆಸ್ಪತ್ರೆಗೆ ಹೆಚ್ಚು ಹೆಚ್ಚು ಜನರು ಬರುತ್ತಿದ್ದು, ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎಂದರೂ ಕೇಳುತ್ತಿಲ್ಲ. ಎಷ್ಟೇ ಹೇಳಿದರೂ ಇಲ್ಲಿಂದ ರೋಗಿಗಳನ್ನು ಬೇರೆಡೆ ಕರೆದುಕೊಂಡು ಹೋಗಿ ಎಂದರೂ ಹೋಗುತ್ತಿಲ್ಲ. ನಮ್ಮ ಕೈಯಲ್ಲಾದಷ್ಟರ ಮಟ್ಟಿಗೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications