ವಾರಾಂತ್ಯ ಮತ್ತು ನೈಟ್ ಕರ್ಫ್ಯೂ; ಹೋಟೆಲ್ ಉದ್ಯಮಕ್ಕೆ ಹೊಡೆತ!
ದಾವಣಗೆರೆ, ಜನವರಿ 07; ಕರ್ನಾಟಕದಲ್ಲಿ ಕೋವಿಡ್ ಮತ್ತು ಓಮಿಕ್ರಾನ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ ನೈಟ್ ಕರ್ಫ್ಯೂವನ್ನು ಸಹ ವಿಸ್ತರಣೆ ಮಾಡಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂಗೆ ಜಾರಿಯಲ್ಲಿರಲಿದೆ.
ಸರ್ಕಾರದ ಆದೇಶದಿಂದ ಹೊಟೇಲ್ ಉದ್ಯಮವನ್ನೇ ನಂಬಿದ್ದ ದಾವಣಗೆರೆಯ ಹೋಟೆಲ್ ಮಾಲೀಕರು ಈಗ ಕಂಗೆಟ್ಟಿದ್ದಾರೆ ಮತ್ತೆ ಇದರಿಂದಾಗಿ ಮತ್ತೆ ಆರ್ಥಿಕ ಸಂಕಷ್ಟದ ಭೀತಿ ಎದುರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಅಲೆ ಹೊಡೆತಕ್ಕೆ ಸಿಲುಕಿ ಹೊಟೇಲ್ ಉದ್ಯಮ ಬಳಲಿ ಬೆಂಡಾಗಿತ್ತು. ಎಷ್ಟೋ ಹೊಟೇಲ್ಗಳು ಮುಚ್ಚಿ ಹೋಗಿವೆ.
ಇನ್ನು ಕೆಲವು ಹೋಟೆಲ್ಗಳು ಮುಚ್ಚುವ ಹಂತದಲ್ಲಿವೆ. ಈಗ ಕೋವಿಡ್ ಪರಿಸ್ಥಿತಿ ತಿಳಿಯಾಗಿ ವ್ಯಾಪಾರ ವಹಿವಾಟು ಸುಧಾರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ನೈಟ್ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿಗೆ ಬಂದಿದೆ. ಕೆಲವು ಹೊಟೇಲ್ಗಳಲ್ಲಿ ರಾತ್ರಿ ವೇಳೆಯೇ ಉತ್ತಮ ವ್ಯಾಪಾರ ಆಗುತ್ತದೆ. ತಳ್ಳು ಗಾಡಿ ಅಂಗಡಿಯವರು, ಸಸ್ಯಹಾರ, ಮಾಂಸಹಾರ ಹೊಟೇಲ್ಗಳಿಗೆ ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ವ್ಯಾಪಾರ ಆಗುತಿತ್ತು.
ಈಗ ನೈಟ್ ಕರ್ಫ್ಯೂ ಜಾರಿಗೊಳಿಸಿರುವುದರಿಂದ ರಾತ್ರಿ 9.30ಕ್ಕೆ ಹೋಟೆಲ್ ಮುಚ್ಚಬೇಕು. ವಾರಾಂತ್ಯದಲ್ಲಿ ಕೇವಲ ಪಾರ್ಸೆಲ್ ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ನೀಡಲಾಗಿದೆ. ಹೋಂ ಡೆಲಿವರಿಗೂ ಅವಕಾಶ ಇದ್ದರೂ, ಜನರು ಖರೀದಿ ಮಾಡುವುದು ಕಡಿಮೆಯೇ.

ವ್ಯಾಪಾರಕ್ಕೆ ಮತ್ತೆ ತಡೆ ಹಾಕಿದ ಕರ್ಫ್ಯೂ
ವಾರಂತ್ಯದ ಕರ್ಫ್ಯೂ ವೇಳೆ ಜನರು ಮನೆಯಲ್ಲಿಯೇ ಇರುವುದರಿಂದ ಹೊಟೇಲ್ನಿಂದ ಪಾರ್ಸೆಲ್ ತೆಗೆದುಕೊಂಡು ಹೋಗುವುದಿಲ್ಲ. ಇನ್ನು ನಾವು ಊಟ, ತಿಂಡಿ ಸೇರಿದಂತೆ ಆಹಾರ ಪದಾರ್ಥವನ್ನು ರೆಡಿ ಮಾಡಿಟ್ಟುಕೊಂಡು ಕಾದು ಕುಳಿತುಕೊಳ್ಳಲು ಆಗಲ್ಲ. ಒಂದು ವೇಳೆ ಉಳಿದುಬಿಟ್ಟರೆ ತುಂಬಾನೇ ನಷ್ಟವಾಗುತ್ತದೆ. ಚೆನ್ನಾಗಿ ವ್ಯಾಪಾರ ಆಗುವ ವೇಳೆಯಲ್ಲಿ ಮತ್ತೆ ಕರ್ಫ್ಯೂ ಹೇರಿರುವುದು ಸರಿಯಲ್ಲ ಎಂದು ಹೋಟೆಲ್ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಪಾಸಿಟಿವಿಟಿ ದರ ಹೆಚ್ಚಾದಾಗಬೇಕಾದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿ. ಆದರೆ ಇಲ್ಲಿ ಅಷ್ಟೇನೂ ಕೊರೊನಾ ಸೋಂಕಿನ ಸಂಖ್ಯೆ ಜಾಸ್ತಿಯಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಈಗ ಅಂಗಡಿಗಳನ್ನು ಬೇಗ ಬಂದ್ ಮಾಡಿದರೆ ವ್ಯಾಪಾರವೂ ಕಡಿಮೆ. ವಾರಾಂತ್ಯದಲ್ಲಿ ಅವಕಾಶ ಇಲ್ಲದಿರುವುದರಿಂದ ತುಂಬಾನೇ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ದಾವಣಗೆರೆ ಹೋಟೆಲ್ ಮಾಲೀಕರು ಹೇಳಿದ್ದಾರೆ.

ಸಾಲ ತೀರಿಸುವುದು ಹೇಗೆ?
ಮನೆ ಬಾಡಿಗೆ, ಹೊಟೇಲ್ ಮಳಿಗೆ ಬಾಡಿಗೆ, ಕೆಲಸಗಾರರಿಗೆ ಸಂಬಳ, ವಿದ್ಯುತ್ ಬಿಲ್, ಮಕ್ಕಳ ಶಾಲಾ ಶುಲ್ಕ ಸೇರಿದಂತೆ ಹತ್ತು ಹಲವು ರೀತಿಯ ಖರ್ಚುಗಳಿವೆ. ವ್ಯಾಪಾರವೇ ಆಗದಿದ್ದರೆ ಏನು ಮಾಡಬೇಕು?. ಮಾಡಿರುವ ಸಾಲ ತೀರಿಸುವುದಾದರೂ ಹೇಗೆ?. ಮಕ್ಕಳನ್ನು ಶಾಲೆಗೆ ಸೇರಿಸಲು ಹಣ ಹೊಂದಿಸಿ ಹೇಗೋ ಕಳುಹಿಸುತ್ತಿದ್ದೆವು. ಈಗ ಮತ್ತೆ ಕರ್ಫ್ಯೂ ಹೇರಿಕೆಯಿಂದ ಸಾಲ ತೀರಿಸುವುದಾದರೂ ಹೇಗೆ? ಎಂಬ ಪ್ರಶ್ನೆ ಕಾಡುತ್ತಿದೆ ಎನ್ನುತ್ತಾರೆ ಹೊಟೇಲ್ ಮಾಲೀಕರು.
ಬೆಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸೋಂಕು ಹೆಚ್ಚುತ್ತಿದೆ. ಅಲ್ಲಿ ಕಟ್ಟುನಿಟ್ಟಾಗಿ ಕೋವಿಡ್ ನಿಯಮ ಹಾಕಲಿ. ಆದರೆ ಇಲ್ಲಿ ಇನ್ನು ಆ ರೀತಿಯಾದ ಪರಿಸ್ಥಿತಿ ಇಲ್ಲ. ಆದರೂ ಹೊಟೇಲ್ ಉದ್ಯಮಕ್ಕೆ ಭಾರೀ ಪೆಟ್ಟು ಕೊಡುವಂತ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹೊಟೇಲ್ ಮಾಲೀಕರ ಜೊತೆ ಸಭೆ ನಡೆಸಿಲ್ಲ. ಬೆಂಗಳೂರಿನಲ್ಲಿ ಸಭೆ ನಡೆಸಿ ಘೋಷಣೆ ಮಾಡಿದಾಕ್ಷಣ ಇಲ್ಲಿಯೂ ಆದೇಶಿಸಲಾಗಿದೆ. ಪರಿಸ್ಥಿತಿ ಹೀಗಾದರೆ ನಾವು ಬದುಕುವುದಾದರೂಹೇಗೆ? ಎಂದು ಪ್ರಶ್ನಿಸುತ್ತಾರೆ ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುವವರು.

ದಾವಣಗೆರೆ ಬೆಣ್ಣೆ ದೋಸೆ
ದಾವಣಗೆರೆಯಲ್ಲಿ ಬೆಣ್ಣೆದೋಸೆ ಫೇಮಸ್. ಅದೇ ರೀತಿಯಲ್ಲಿ ಸಂಜೆ ಹೊತ್ತಲ್ಲಿ ಖಾರ ಮಂಡಕ್ಕಿಯೂ ಅಷ್ಟೇ ರುಚಿಕರವಾಗಿರುತ್ತದೆ. ಸಂಜೆಯಾದರೆ ಖಾರ ಮಂಡಕ್ಕಿ, ಮೆಣಸಿನ ಕಾಯಿ ಬೋಂಡಾ ಸವಿಯುವವರೇ ಹೆಚ್ಚು. ವೀಕೆಂಡ್ ದಿನಗಳಲ್ಲಿ ಹೆಚ್ಚಾಗಿ ಜನರು ಬರುತ್ತಾರೆ. ಕುಟುಂಬ ಸಮೇತರಾಗಿ ಬಂದು ಶನಿವಾರ, ಭಾನುವಾರವೇ ಹೆಚ್ಚಾಗಿ ಬರುವುದು. ಆ ಎರಡು ದಿನಗಳಲ್ಲಿ ಅಂಗಡಿಗಳಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ ಕೊಟ್ಟರೆ ಏನೂ ಪ್ರಯೋಜನವಾಗದು. ಖಾರ, ಮಂಡಕ್ಕಿ ಹಾಗೂ ಬೋಂಡಾ ಪಾರ್ಸೆಲ್ ಕೊಟ್ಟರೂ ತಿನ್ನುವವರಿಗೆ ಟೇಸ್ಟ್ ಸಿಗುವುದಿಲ್ಲ. ಬೋಂಡಾ ತಣ್ಣಗಾಗಿಬಿಟ್ಟಿರುತ್ತದೆ. ಈ ಹಿನ್ನೆಲೆಯಲ್ಲಿ ನಮಗೆ ತುಂಬಾನೇ ನಷ್ಟ ಉಂಟಾಗಲಿದೆ ಎನ್ನುತ್ತಾರೆ ಖಾರ, ಮಂಡಕ್ಕಿ ವ್ಯಾಪಾರಸ್ಥರು.
ಇನ್ನು ಬೆಣ್ಣೆದೋಸೆ ಮಾಲೀಕರದ್ದು ಇದೇ ಗೋಳು. ಯಾಕೆಂದರೆ ದೋಸೆ ಬಿಸಿಯಿದ್ದಾಗಲೇ ಸೇವಿಸಿದರೆ ಒಳ್ಳೆಯ ರುಚಿಕರವಾಗಿರುತ್ತದೆ. ಇಲ್ಲದಿದ್ದರೆ ತಣ್ಣಗಾದ ಮೇಲೆ ತಿನ್ನೋಕೂ ಸರಿಯಾಗಿಲ್ಲ. ಪಾರ್ಸೆಲ್ ತೆಗೆದುಕೊಂಡು ಹೋದರೂ ಮನೆಗೆ ಹೋಗುವಷ್ಟರಲ್ಲಿ ತಣ್ಣಗಾಗಿ ಸೇವಿಸಲು ಆಗದಂತ ಸ್ಥಿತಿ. ನಾವು ಎಲ್ಲಾ ರೀತಿಯ ಕೋವಿಡ್ ನಿಯಮಾವಳಿಗಳನ್ನುಪಾಲಿಸುತ್ತೇವೆ. ಮಾಸ್ಕ್ ಧರಿಸುತ್ತೇವೆ. ಶುಚಿತ್ವ ಕಾಪಾಡಿಕೊಳ್ಳುತ್ತೇವೆ. ಎಲ್ಲಾ ರೀತಿಯ ನಿಯಮಗಳನ್ನುಪಾಲಿಸಿಯೇ ವ್ಯಾಪಾರ ಮಾಡುತ್ತೇವೆ. ನಮಗೂ ಅವಕಾಶ ಕೊಡಿ ಎನ್ನುವುದು ಬೆಣ್ಣೆದೋಸೆ ವ್ಯಾಪಾರಸ್ಥರು.

ಪ್ರವಾಸಿ ತಾಣಗಳು ಬಂದ್
ಇನ್ನು ಗಾಜಿನ ಮನೆ, ಸೂಳೆಕೆರೆಯಲ್ಲಿ ಬೋಟಿಂಗ್, ಕೊಂಡಜ್ಜಿ ಕೆರೆ, ಸಂತೇಬೆನ್ನೂರು ಪುಷ್ಕರಣೆ ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಪಾರ್ಕ್ನಲ್ಲಿಯೂ ಕುಳಿತುಕೊಳ್ಳುವಂತಿಲ್ಲ. ಎಲ್ಲಾ ಪಾರ್ಕ್ಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ. ಇದರಿಂದಾಗಿ ವೀಕೆಂಡ್ ಅನ್ನೋದೇ ಇರಲ್ಲ. ಮನೆಯಲ್ಲಿ ಇರಬೇಕು. ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಮಕ್ಕಳು ಮನೆಯಲ್ಲಿರುತ್ತಾರೆ. ಅವರು ಹೊರಗಡೆ ಹೋಗೋಣ ಅಂದರೂ ಆಗದು. ಮನೆಯಲ್ಲಿಯೇ ಕೂರಬೇಕು. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಸಾಕಾಗಿ ಹೋಗಿದೆ. ಈಗ ಮತ್ತೆ ವಕ್ಕರಿಸಿದೆ. ಮನೆಯಿಂದ ಹೊರಗಡೆ ಹೋಗುವಾಗ ಎಲ್ಲಾ ರೀತಿಯ ನಿಯಮಾವಳಿಗಳನ್ನು ಪಾಲಿಸುತ್ತೇವೆ. ಕೋವಿಡ್ ಎರಡು ಲಸಿಕೆ ಪಡೆದಿದ್ದೇವೆ. ಸರ್ಕಾರವು ಕರ್ಫ್ಯೂ ವಿಧಿಸಿರುವುದು ಒಳ್ಳೆಯ ವಿಚಾರವೇ. ಆದರೆ ಸೋಂಕು ಕಡಿಮೆ ಇರುವ ಜಿಲ್ಲೆಗಳಲ್ಲಿ ಈ ರೀತಿಯ ಕಟ್ಟುನಿಟ್ಟಿನ ಕ್ರಮ ಏಕೆ?. ದಾವಣಗೆರೆ ಜಿಲ್ಲೆ ಪ್ರವೇಶಿಸುವ ಗಡಿಭಾಗದಲ್ಲಿ ಹೆಚ್ಚಿನ ಟೆಸ್ಟ್ ನಡೆಸಲಿ. ಕೊರೊನಾ ಪಾಸಿಟಿವ್ ಬಂದರೆ ಒಳಗಡೆ ಬಿಡುವುದು ಬೇಡ. ಬೇರೆ ಬೇರೆ ಜಿಲ್ಲೆಗಳಿಂದ ಬಂದವರಲ್ಲಿ ಸೋಂಕು ತಗುಲಿರುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿಯೂ ಜಿಲ್ಲಾಡಳಿತ ಯೋಚಿಸಬೇಕು ಎಂಬುದು ಸಾಮಾನ್ಯರ ಅಭಿಪ್ರಾಯವಾಗಿದೆ.












Click it and Unblock the Notifications