ಲಾಕ್ ಡೌನ್ ಆದೇಶ ಪಾಲಿಸಲು ಮುರುಘಾ ಶ್ರೀಗಳ ಕರೆ
ದಾವಣಗೆರೆ, ಏಪ್ರಿಲ್ 09: ಲಾಕ್ ಡೌನ್ ನಿಂದಾಗಿ ಅನೇಕರು ಅತೀವ ಸಮಸ್ಯೆಗೆ ಸಿಲುಕಿದ್ದಾರೆ. ಅಂತವರಿಗೆ ಪ್ರತಿಯೊಬ್ಬರು ನೆರವು ನೀಡುವ ಮಾನವೀಯ ಕಾರ್ಯಕ್ಕೆ ಮುಂದಾಗಬೇಕು ಎಂದು ಚಿತ್ರದುರ್ಗ ಮುರುಘಾ ಮಠದ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.
ದಾವಣಗೆರೆ ನಗರದ ಶಿವಯೋಗಾಶ್ರಮದಲ್ಲಿಂದು ಮುರುಘರಾಜೇಂದ್ರ ವಿರಕ್ತಮಠ, ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್, ಮುರುಘರಾಜೇಂದ್ರ ವಿದ್ಯಾವರ್ಧಕ ಫಂಡ್ ನೇತೃತ್ವದಲ್ಲಿ 300 ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಿ ಮಾತನಾಡಿದ ಅವರು, ನಿಸರ್ಗದತ್ತವಾದ ಕೊರೊನಾ ವೈರಾಣುವಿನಿಂದ ಜಗತ್ತೆ ತಲ್ಲಣಗೊಂಡಿದೆ.ಇಂತಹ ಪರಿಸ್ಥಿತಿ ಎಂದಿಗೂ ಬಂದಿರಲಿಲ್ಲ ಎಂದರು.
ಜಗತ್ತಿನ ಇಂದಿನ ಸ್ಥಿತಿ ನೋಡಿದರೆ ದುಃಖವಾಗುತ್ತದೆ. ನಾವೆಲ್ಲಾ ಶರೀರ ದಾರಿಗಳಾಗಿದ್ದೇವೆ. ನಮ್ಮ ಅಂಗಾಂಗಗಳೇ ನಮಗೆ ರೋಗವನ್ನು ಆಹ್ವಾನ ಮಾಡುತ್ತಿರುವುದು ದುರಂತ. ಆದ್ದರಿಂದ ನಮ್ಮ ಅಂಗಾಂಗಳ ಬಗ್ಗೆ ನಾವೆಲ್ಲಾ ಜಾಗೃತರಾಗಬೇಕಾಗಿದೆ. ಊಟಕ್ಕೂ ಮುನ್ನ ನಮ್ಮ ಕೈಗಳನ್ನು ಸ್ವಚ್ಚವಾಗಿ ತೊಳೆದುಕೊಳ್ಳುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಇಂದು ಒಂದು ವೈರಾಣು ಪದೇ ಪದೇ ಕೈತೊಳೆಯುವಂತೆ ಮಾಡಿದೆ. ಈ ಸೋಂಕು ಹರಡದಂತೆ ಸಾಮಾಜಿಕ ಅಂತರ ಕಾಪಾಡುವುದು ಮುಖ್ಯ. ರೋಗ ಬರುವುದಕ್ಕೂ ಮುನ್ನ ಸಾಮಾಜಿಕ ಅಂತರ ಇರಲಿಲ್ಲ. ಆದರೆ ಕೊರೊನಾ ಇಂದು ಸಾಮಾಜಿಕ ಅಂತರ ಸೃಷ್ಠಿಮಾಡಿದೆ ಮಾಡಿದೆ ಎಂದು ತಿಳಿಸಿದರು.
ಹಿಂದೆ ನಮ್ಮ ದಾರ್ಶನಿಕರು ಸಮ ಸಮಾಜ ನಿರ್ಮಾಣಕ್ಕಾಗಿ ಸಾಮಾಜಿಕ ಅಂತರ ಬೇಡ ಎಂದು ಅರಿವು ಮೂಡಿಸಿದ್ದರು. ಆದರೆ ಇಂದು ಬದುಕುವುದಕ್ಕಾಗಿ ಸಾಮಾಜಿಕ ಅಂತರ ಕಾಪಡುವುದು ಮುಖ್ಯ ಹಾಗೂ ಅನಿವಾರ್ಯವಾಗಿದೆ. ವೈರಾಣು ಪ್ರವೇಶಿಸದಂತೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸಿ ಎಂದು ಸಲಹೆ ನೀಡಿದರು.

ದಾವಣಗೆರೆ ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಇಬ್ಬರು ಬಿಡುಗಡೆಯಾಗಿದ್ದಾರೆ. ಇನ್ನೊಬ್ಬರು ಸಹ ಗುಣಮುಖರಾಗಿದ್ದು, ಅವರ ಆರೋಗ್ಯದ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಇಂದು ಅವರನ್ನು ಬಿಡುಗಡೆ ಮಾಡಲಾಗುವುದು. ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಜಿಲ್ಲಾಡಳಿತ ಅವರಿಗೆ ನೆರವು ನೀಡಲಿದೆ. ಜಿಲ್ಲಾಡಳಿತ ನೀಡಿದ ಪಾಸ್ ಗಳಿಗಷ್ಟೇ ಮಾನ್ಯತೆ ಇದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.












Click it and Unblock the Notifications