ಚನ್ನಗಿರಿ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟ: ವಡ್ನಾಳ್ ಅಶೋಕ್, ತೇಜಸ್ವಿ ಪಟೇಲ್ ಬಂಡಾಯ ಸ್ಪರ್ಧೆ?
ದಾವಣಗೆರೆ, ಏಪ್ರಿಲ್ 7: ಚನ್ನಗಿರಿ ಕಾಂಗ್ರೆಸ್ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಟಿಕೆಟ್ ವಂಚಿತರ ಆಕ್ರೋಶ ಮತ್ತಷ್ಟು ಜ್ವಲಾಮುಖಿಯಾಗಿದೆ. ಮಾಜಿ ಶಾಸಕ ವಡ್ನಾಳ್ ರಾಜಣ್ಣ ಚುನಾವಣಾ ಕಣದ ಹಿಂದೆ ಸರಿದ ಕಾರಣ ಶಿವಗಂಗಾ ವಿ. ಬಸವರಾಜ್ ಅವರಿಗೆ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ತಾಲೂಕು ಘಟಕದಲ್ಲಿ ಅಸಮಾಧಾನದ ಜ್ವಾಲೆ ಭುಗಿಲೆದ್ದಿದೆ.
ವಡ್ವಾಳ್ ರಾಜಣ್ಣ ಅವರು ವಡ್ನಾಳ್ ಅಶೋಕ್ ಅವರಿಗೆ ಚನ್ನಗಿರಿ ಕಾಂಗ್ರೆಸ್ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅವರಿಗೆ ಹೇಳಿದ್ದರು. ಆದರೆ, ಶಿವಕುಮಾರ್ ಆಪ್ತರಾದ ಶಿವಗಂಗಾ ಬಸವರಾಜ್ ಅವರಿಗೆ ಟಿಕೆಟ್ ಸಿಕ್ಕಿದೆ.

ಟಿಕೆಟ್ ಘೋಷಣೆಯಾಗುತ್ತಿದ್ದಂತೆ ವಡ್ನಾಳ್ ಅಶೋಕ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ, ಮಾಜಿ ಸಿಎಂ ಜೆ. ಹೆಚ್. ಪಟೇಲ್ ರ ಸಹೋದರನ ಪುತ್ರ ತೇಜಸ್ವಿ ಪಟೇಲ್, ವಡ್ನಾಳ್ ಜಗದೀಶ್, ವೀರೇಶ್ ನಾಯ್ಕ್, ಪುನೀತ್ ಕುಮಾರ್ ಸೇರಿದಂತೆ ಹಲವರಿಗೆ ನಿರಾಸೆಯಾಗಿದೆ.
ಅದರಲ್ಲಿಯೂ ವಡ್ನಾಳ್ ಅಶೋಕ್ ರಂತೂ ಕೊನೆಗಳಿಗೆಯವರೆಗೆ ನನ್ನ ಹೆಸರು ಇತ್ತು. ಆದರೆ ರಾತ್ರೋರಾತ್ರಿ ಹೆಸರು ಬದಲಾಗಿದ್ದು ಹೇಗೆ ಎಂಬ ಯೋಚನೆಯಲ್ಲಿದ್ದರೆ, ಸಿದ್ದರಾಮಯ್ಯರು ಕೊಟ್ಟ ಭರವಸೆ ಈಡೇರಲಿಲ್ಲ. ನನಗೂ ಟಿಕೆಟ್ ಬೇರೆಯವರಿಗೆ ಘೋಷಿಸಿದ್ದು ನೋವು ಮತ್ತು ಅಚ್ಚರಿ ತಂದಿದೆ ಎಂದು ತೇಜಸ್ವಿ ಪಟೇಲ್ ನೋವು ತೋಡಿಕೊಂಡಿದ್ದಾರೆ.
ಸ್ಪರ್ಧೆ ಖಚಿತ ಎಂದ ವಡ್ನಾಳ್ ಅಶೋಕ್
ಇನ್ನು ವಡ್ನಾಳ್ ಅಶೋಕ್ಅಂತೂ ನನ್ನ ಸ್ಪರ್ಧೆ ಖಚಿತ. ಕಳೆದ 35ರಿಂದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇವೆ. ಕಳೆದ ಐದು ವರ್ಷಗಳಿಂದಲೂ ತಾಲೂಕಿನ ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ. ಹಳ್ಳಿ ಹಳ್ಳಿಗೆ ಓಡಾಡಿದ್ದೇನೆ. ಜನರ ಒಲವು ನನ್ನ ಪರ ಇದೆ. ಪಕ್ಷೇತರನಾಗಿ ಕಣಕ್ಕಿಳಿಯಬೇಕೋ ಅಥವಾ ಬೇರೆ ಪಕ್ಷದಿಂದ ಆಫರ್ ಬಂದರೆ ಏನು ಮಾಡಬೇಕು ಎಂಬ ಕುರಿತಂತೆ ಪಕ್ಷದ ಕಾರ್ಯಕರ್ತರು, ಮುಖಂಡರ ಜೊತೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ವಡ್ನಾಳ್ ರಾಜಣ್ಣ ಅವರು, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ. ಬಿ ಫಾರಂ ಇನ್ನು ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುವ ವಿಶ್ವಾಸ ಇದೆ.
ವರಿಷ್ಠರು ಏನು ಹೇಳುತ್ತಾರೆ ಎಂಬುದನ್ನು ನೋಡಿಕೊಂಡು, ಜನರು ಏನು ಹೇಳುತ್ತಾರೋ ಆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.
ಪಕ್ಷದ ಕಾರ್ಯಕರ್ತರೇ ನಮ್ಮ ಆಸ್ತಿ. ಪಕ್ಷೇತರ, ಬೇರೆ ಅವಕಾಶ ಬಂದರೆ ಕಾರ್ಯಕರ್ತರು, ಮುಖಂಡರು ಏನು ಹೇಳುತ್ತಾರೋ ಅದನ್ನೇ ಕೇಳುತ್ತೇನೆ. ಕಾರ್ಯಕರ್ತರೇ ದೇವರು. ಅವರು ಸುಮ್ಮನೆ ಇದ್ದುಬಿಡಿ ಎಂದರೆ ನಾನು ಸುಮ್ಮನೇ ಇರುತ್ತೇನೆ. ಎಲ್ಲದಕ್ಕೂ ಪಕ್ಷದ ಮುಖಂಡರು, ಕಾರ್ಯಕರ್ತರ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದರು.

ಕಣ್ಣೀರು ಸುರಿಸಿದ ಕಾರ್ಯಕರ್ತ
ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಚನ್ನಗಿರಿಯ ವಡ್ನಾಳ್ ಅಶೋಕ್ ಮನೆಗೆ ಆಗಮಿಸತೊಡಗಿದರು. ಶುಕ್ರವಾರ ಅನೇಕ ನಾಯಕರು ಮತ್ತು ಕಾರ್ಯಕರ್ತರು ಆಗಮಿಸಿದರು. ಈ ವೇಳೆ ಕಾರ್ಯಕರ್ತನೊಬ್ಬ ಟಿಕೆಟ್ ಕೈ ತಪ್ಪಿದ್ದಕ್ಕೆ ಕಣ್ಣೀರು ಸುರಿಸಿದರು. ನೀವು ಸ್ಪರ್ಧೆ ಮಾಡಲೇಬೇಕು. ಪಕ್ಷೇತರರಾಗಿ ಕಣಕ್ಕಿಳಿಯಿರಿ. ನಾವು ಗೆಲ್ಲಿಸಿಕೊಂಡು ಬರುತ್ತೇವೆ. ಅಣ್ಣಾ ಕಣಕ್ಕಿಳಿಯಣ್ಣಾ ಎಂದು ಕಣ್ಣೀರು ಸುರಿಸುತ್ತಲೇ ಒತ್ತಾಯಿಸಿದ ಪ್ರಸಂಗವೂ ನಡೆಯಿತು.
ಟಿಕೆಟ್ ಕುರಿತಂತೆ ಪ್ರತಿಕ್ರಿಯೆ ನೀಡಿದ ತೇಜಸ್ವಿ ವಿ. ಪಟೇಲ್, ಏ. 8ರಂದು ಹಿತೈಷಿಗಳ ಸಭೆ ಕರೆದಿದ್ದೇನೆ. ಟಿಕೆಟ್ ಕೈತಪ್ಪಿದ್ದು ಬೇಸರ ಮತ್ತು ಅಚ್ಚರಿ ತಂದಿದೆ. ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಕುರಿತಂತೆ ಕಾರ್ಯಕರ್ತರು, ಮುಖಂಡರು ಹಾಗೂ ಆತ್ಮೀಯರ ಜೊತೆ ಸಮಾಲೋಚನೆ ನಡೆಸಿ, ಮುಂದಿನ ನಿರ್ಧಾರ ಪ್ರಕಟಿಸಲಾಗುವುದು. ಸಿದ್ದರಾಮಯ್ಯರ ಮೇಲೆ ತುಂಬಾನೇ ವಿಶ್ವಾಸ ಇತ್ತು. ಆದ್ರೆ, ಈಡೇರಿಲ್ಲ. ಸ್ಪರ್ಧೆ ಮಾಡುವ ಬಯಕೆ ಇದೆ. ಟಿಕೆಟ್ ನನಗೆ ಸಿಗುತ್ತದೆ ಎಂಬ ವಿಶ್ವಾಸ ಹುಸಿಯಾಗಿದೆ ಎಂದು ಪ್ರತಿಕ್ರಿಯಿಸಿದರು.
ಒಟ್ಟಿನಲ್ಲಿ ಒಂದೆಡೆ ಬಿಜೆಪಿಯಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜೈಲಿನಲ್ಲಿದ್ದಾರೆ. ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಕಾಂಗ್ರೆಸ್ನಲ್ಲಿ ಶಿವಗಂಗಾ ಬಸವರಾಜ್ ಅವರಿಗೆ ಕೈ ಟಿಕೆಟ್ ಸಿಕ್ಕ ಬಳಿಕ ಕಾಂಗ್ರೆಸ್ ಒಡೆದ ಮನೆಯಾಗಿದೆ.
ವರಿಷ್ಠರು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ, ಭಿನ್ನಮತ ಶಮನಗೊಳಿಸುತ್ತಾರೋ ಅಥವಾ ಅಶೋಕ್ ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ಹೊಡೆತ ಕೊಡುವುದು ಖಚಿತ. ಈ ಎಲ್ಲಾ ವಿಚಾರಗಳ ಕುರಿತಂತೆ ರಾಜ್ಯ ನಾಯಕರು ಯಾವೆಲ್ಲಾ ಕ್ರಮ ತೆಗೆದುಕೊಳ್ಳಬಹುದು ಎಂಬುದು ಕುತೂಹಲ ಕೆರಳಿಸಿದೆ.












Click it and Unblock the Notifications