ಮೈಲಾರ ಲಿಂಗ ಜಾತ್ರೆ; ಗೊರವಯ್ಯರ ಶಸ್ತ್ರ ಪವಾಡ
ದಾವಣಗೆರೆ, ಮಾರ್ಚ್ 05: ಕಾಲಿಗೆ ಕಬ್ಬಿಣದ ಸಲಾಕೆ ಚುಚ್ಚಿಕೊಳ್ಳುವುದು, ಕಬ್ಬಿಣದ ಸರಪಳಿ ಎಳೆದು ತುಂಡು ಮಾಡುವುದು. ಇಂತಹ ಪವಾಡಗಳನ್ನು ಗೊರವಯ್ಯಗಳು ಮಾಡಿದ್ದು ಮೈಲಾರ ಜಾತ್ರೆ ಆಚರಣೆ ವೇಳೆಯಲ್ಲಿ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ. ದೇವಲೋಕದ ಕಾರುಣ್ಯಪುರುಷ ಮೈಲಾರಲಿಂಗ ಇಲ್ಲಿ ಉದ್ಭವಿಸಿದ್ದರಿಂದ ಗ್ರಾಮಕ್ಕೆ ದೇವರ ಬೆಳಕೆರೆ ಎಂಬ ಹೆಸರು ಬಂದಿದೆ. ಪ್ರತಿವರ್ಷ ಭರತ ಹುಣ್ಣಿಮೆಯ ನಂತರ ಇಲ್ಲಿ ಮೈಲಾರ ಜಾತ್ರೆ ಆಚರಣೆ ಮಾಡಲಾಗುತ್ತದೆ.
ಜಾತ್ರೆಯ ಎರಡನೆಯ ದಿನ ಇಲ್ಲಿ ನಡೆಯುವ ಶಸ್ತ್ರ ಪವಾಡ ನೋಡಲು ಸುತ್ತಮುತ್ತಲ ಊರುಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. 11 ದಿನಗಳ ಕಾಲ ಉಪವಾಸವಿರುವ ಗೊರವಯ್ಯನವರು ಈ ರೀತಿ ಜಾತ್ರೆಯಲ್ಲಿ ಹಲವು ಪವಾಡಗಳನ್ನು ಮಾಡುತ್ತಾರೆ. ಇದಕ್ಕೆಲ್ಲಾ ದೇವರ ಪವಾಡ ಕಾರಣ ಅಂತಾರೆ ಗೊರವಯ್ಯ ಸತೀಶ್ ಗಣಾಚಾರಿ, ಮಾಲತೇಶ.

ಒಟ್ಟು ಮೂರು ದಿನಗಳ ಕಾಲ ನಡೆಯುವ ಮೈಲಾರಲಿಂಗೇಶ್ವರ ಜಾತ್ರೆಗೆ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಗಳ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮೊದಲ ದಿನ ರಥೋತ್ಸವವಿದ್ದು, ಎರಡನೆಯ ದಿನ ಗೊರವಯ್ಯರ ಪವಾಡ ನಡೆಯುತ್ತೆ.
"ಈ ಜಾತ್ರೆಗೆ ಆಗಮಿಸಿ ಯಾವುದೇ ಹರಕೆ ಹೊತ್ತರೂ ಮರು ಜಾತ್ರೆಯ ವೇಳೆಗೆ ಇಷ್ಟಾರ್ಥ ಸಿದ್ದಿಯಾಗಿರುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ" ಎನ್ನುತ್ತಾರೆ ಭಕ್ತೆ ಅರ್ಚನ ಸುನೀಲ್
ಗೊರವಯ್ಯನವರು ಅಪಾಯಕಾರಿಯಾದ ಇಂತಹ ಪವಾಡಗಳನ್ನು ಮಾಡಿದರೂ ಅವರಿಗೆ ಯಾವುದೇ ರೀತಿಯ ನೋವಾಗಲೀ, ಸಮಸ್ಯೆಯಾಗಲೀ ಆಗುವುದಿದಲ್ಲ ಅನ್ನೋದು ವಿಶೇಷ.
ತಲೆ ತಲೆಮಾರುಗಳಿಂದ ಗೊರವಯ್ಯನವರು ಈ ಪವಾಡ ಮಾಡುತ್ತಾ ಬರುತ್ತಿದ್ದು, ದೇವರ ಆಶೀರ್ವಾದದಿಂದ ಯಾವುದೇ ಸಮಸ್ಯೆಯಾಗಿಲ್ಲ. ಹೀಗಾಗಿ ದೇವರಬೆಳೆಕೆರೆ ಗ್ರಾಮದ ಮೈಲಾರಲಿಂಗ ದೇವರ ಪವಾಡ ಸುತ್ತಮತ್ತಲ ಜಿಲ್ಲೆಗಳಲ್ಲಿ ಶಸ್ತ್ರಪವಾಡವೆಂದೇ ಖ್ಯಾತಿಯಾಗಿದೆ.












Click it and Unblock the Notifications