ನರ್ಸಿಂಗ್ ಕಾಲೇಜಿನಲ್ಲಿ ಸಾಮೂಹಿಕ ನಕಲು ಆರೋಪ: ಹಣ ಕೊಟ್ಟವರಿಗೆ ಉತ್ತರ ತೋರಿಸಿ ಬರೆಸಿದ ಸಿಬ್ಬಂದಿ
ದಾವಣಗೆರೆ, ಡಿಸೆಂಬರ್ 12: ವಿದ್ಯಾರ್ಥಿಗಳು ವರ್ಷಪೂರ್ತಿ ಕಷ್ಟಪಟ್ಟು ಓದಿರುತ್ತಾರೆ. ಪರೀಕ್ಷೆ ವೇಳೆ ಹಗಲು ರಾತ್ರಿ ಎನ್ನದೇ ಕಠಿಣ ಅಭ್ಯಾಸ ಮಾಡಿರುತ್ತಾರೆ. ಆದರೆ ಹಣ ಪಡೆದು ಸಾಮೂಹಿಕ ನಕಲು ಮಾಡಿದರೆ ಚೆನ್ನಾಗಿ ಓದಿದವರ ವಿದ್ಯಾರ್ಥಿಗಳ ಪಾಡೇನು..? ಎನ್ನುವ ಪ್ರಶ್ನೆ ದಾವಣಗೆರೆಯಲ್ಲಿ ನಡೆದ ಘಟನೆಯಿಂದ ಮೂಡಿದೆ.
ದಾವಣಗೆರೆಯ ನರ್ಸಿಂಗ್ ಕಾಲೇಜಿನಲ್ಲಿ ಸಾಮೂಹಿಕ ನಕಲು ಮಾಡಲು ಅವಕಾಶ ನೀಡಿರುವ ಘಟನೆ ನಡೆದಿದೆ.
ದಾವಣಗೆರೆ ಆಂಜನೇಯ ಬಡಾವಣೆಯಲ್ಲಿರುವ ಸಂಜೀವಿನಿ ನರ್ಸಿಂಗ್ ಕಾಲೇಜ್ನಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಕಾಲೇಜಿನ ಸಿಬ್ಬಂದಿ ಸಾಥ್ ನೀಡಿರುವ ಆರೋಪ ಕೇಳಿ ಬಂದಿದೆ.

ನರ್ಸಿಂಗ್ ಕಾಲೇಜ್ನ ನರ್ಸಿಂಗ್ ವಿಭಾಗದ ಮೊದಲ ವರ್ಷದ 'ಅನಟಾಮಿಕ್' ವಿಷಯ ಪರೀಕ್ಷೆ ವೇಳೆ ಸಾಮೂಹಿಕ ನಕಲು ನಡೆದಿದ್ದು, ವಿದ್ಯಾರ್ಥಿಗಳು ಕಾಪಿ ಚೀಟಿಗಳನ್ನು ಬಳಸಿ ಪರೀಕ್ಷೆ ಬರೆಯುತ್ತಿರುವುದು ಹಾಗೂ ಸಿಬ್ಬಂದಿ ಮೊಬೈಲ್ನಲ್ಲಿ ಉತ್ತರ ತೋರಿಸಿ ವಿದ್ಯಾರ್ಥಿಗಳಿಂದ ಬರೆಸುತ್ತಿರುವ ದೃಶ್ಯ ಸೆರೆಯಾಗಿದೆ.
ಮೊಬೈಲ್ ಹಿಡಿದು ವಿದ್ಯಾರ್ಥಿಗಳಿಗೆ ಕಾಲೇಜು ಸಿಬ್ಬಂದಿ ಉತ್ತರ ತೋರಿಸಿದ್ದಾರೆ. ಇದನ್ನು ನೋಡಿಕೊಂಡು ವಿದ್ಯಾರ್ಥಿಗಳು ಉತ್ತರ ಬರೆದಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯಿಂದ 10 ಸಾವಿರ ರೂಪಾಯಿ ಪಡೆದು ನಕಲು ಮಾಡಲು ಅವಕಾಶ ನೀಡಲಾಗಿದೆ. ಹಣ ನೀಡಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿಕೊಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ವಿಷಯ ಕೆಆರ್ಎಸ್ ಪಕ್ಷದವರಿಗೆ ತಿಳಿದಿದ್ದು, ಕೂಡಲೇ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮಾಧ್ಯಮದವರು ಭೇಟಿ ನೀಡಿದ ವೇಳೆ ವಿದ್ಯಾರ್ಥಿಗಳು ಸಾಮೂಹಿಕ ನಕಲು ಮಾಡುತ್ತಿರುವುದು ಬೆಳಕಿಗೆ ಬಂದಿದೆ.

"ದುಡ್ಡು ನೀಡಿದವರಿಗೆ ಮಾತ್ರ ಸಿಬ್ಬಂದಿ ಉತ್ತರ ಹೇಳಿಕೊಟ್ಟಿದ್ದಾರೆ. ಕಾಲೇಜು ಸಿಬ್ಬಂದಿಗೆ ನಕಲು ಮಾಡಲು ಅವಕಾಶ ನೀಡಿದರೆ, ಸಾಮಾನ್ಯ ವಿದ್ಯಾರ್ಥಿಗಳ ಗತಿ ಏನು..? ಇದು ಪರೀಕ್ಷೆಗಾಗಿ ಸಾಕಷ್ಟು ಶ್ರಮ ವಹಿಸಿ ಓದಿದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟವರು ಯಾಕೆ ಕ್ರಮ ಕೈಗೊಂಡಿಲ್ಲ. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದ ಸಹಕಾರ ಇಲ್ಲದೆ ಇಷ್ಟು ಬಹಿರಂಗವಾಗಿ ಸಾಮೂಹಿಕ ನಕಲು ನಡೆಯಲು ಹೇಗೆ ಸಾಧ್ಯ" ಎಂದು ಕೆಆರ್ಎಸ್ ಪಕ್ಷದವರು ಪ್ರಶ್ನಿಸಿದ್ದಾರೆ.
ಇನ್ನು ಕಾಲೇಜಿನ ಪ್ರಾಂಶುಪಾಲರು ಯಾವುದೇ ನಕಲು ನಡೆದಿಲ್ಲ. ನಮ್ಮ ಕೈಯಲ್ಲಿ ಮೊಬೈಲ್ ಇಲ್ಲ. ಯಾವುದೇ ರೀತಿಯ ಕಾಪಿ ನಡೆಯಲು ಯಾರೂ ಅವಕಾಶ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications