ಸರ್ಕಾರಿ ಕೋಟಾದಡಿ ಬಾರದ ಲಸಿಕೆ: ಜನರ ಪರದಾಟ, ಆಯೋಜಕರ ಪೀಕಲಾಟ!
ದಾವಣಗೆರೆ, ಜೂನ್ 28: ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಕೊರೊನಾ ಲಸಿಕೆ ಉಚಿತ ಶಿಬಿರ ನಗರದಲ್ಲಿ ಮುಂದುವರಿದಿದೆ. ಆದರೆ ಕೆ.ಬಿ. ಬಡಾವಣೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಜನರು ಲಸಿಕೆ ಪಡೆಯಲು ಮುಗಿಬಿದ್ದರೆ, ಜನರನ್ನು ನಿಯಂತ್ರಿಸಲು ಆಯೋಜಕರು ಹರಸಾಹಸ ಪಡುವಂತಾಗಿದೆ. ಸರ್ಕಾರಿ ಕೋಟಾದಡಿ ಬರಬೇಕಿದ್ದ ಲಸಿಕೆ ಬಾರದಿರುವುದೇ ಇದಕ್ಕೆ ಕಾರಣ.
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಸೋಮವಾರ ಬೆಳ್ಳಂಬೆಳಿಗ್ಗೆಯಿಂದಲೇ ಜನರು ತಂಡೋಪತಂಡವಾಗಿ ಆಗಮಿಸಿದರು. ಮಕ್ಕಳ ಜೊತೆ ಆಗಮಿಸಿದ ಮಹಿಳೆಯರು, ವೃದ್ಧರು, ಪುರುಷರು, ಯುವಕ, ಯುವತಿಯರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರು ಜನರನ್ನು ನಿಯಂತ್ರಿಸುವಲ್ಲಿ ಸುಸ್ತಾಗಿ ಹೋದರು.
ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಉಚಿತ ಲಸಿಕಾ ಅಭಿಯಾನದಡಿ ಹಮ್ಮಿಕೊಳ್ಳಲಾಗಿತ್ತು. 200 ಲಸಿಕೆಗಳನ್ನು ಶಿವಶಂಕರಪ್ಪ ಉಚಿತವಾಗಿ ನೀಡಿದ್ದರೆ, ಆರೋಗ್ಯ ಇಲಾಖೆಯು 300 ಕೋವಿಶೀಲ್ಡ್ ನೀಡಲು ಒಪ್ಪಿತ್ತು. ಆದರೆ ಮಧ್ಯಾಹ್ನ 12 ಗಂಟೆಯಾದರೂ ಸರ್ಕಾರಿ ಕೋಟಾದಡಿ ವ್ಯಾಕ್ಸಿನ್ ಬರಲಿಲ್ಲ. ಇದರಿಂದಾಗಿ ಐದು ಗಂಟೆಗಳ ಕಾಲ ಜನರು ಸರತಿ ಸಾಲಿನಲ್ಲಿ ನಿಂತು ಪರದಾಡಿದರು.

ಬೆಳಿಗ್ಗೆ 8 ಗಂಟೆಯಿಂದಲೇ ಜನದಟ್ಟಣೆ
ಕೊರೊನಾ ವ್ಯಾಕ್ಸಿನ್ ಪಡೆಯಲು ಬೆಳಿಗ್ಗೆ 7 ಗಂಟೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತಿದ್ದು, ಬೆಳೆಯುತ್ತಾ ಹೋಯಿತು. ಬೆಳಿಗ್ಗೆ ಹತ್ತು ಗಂಟೆಗೆ ಶಾಮನೂರು ಶಿವಶಂಕರಪ್ಪ ನೀಡಿದ ಭರವಸೆಯಂತೆ 200 ಲಸಿಕೆಗಳು ಬಂದವು. ಲಸಿಕೆ ಪಡೆಯಲು ಜನರಿಗೆ ಟೋಕನ್ ಸಹ ನೀಡಲಾಗಿತ್ತು. ಆದರೆ ಸರ್ಕಾರದ ಕೋಟಾದಡಿ ನೀಡುತ್ತೇವೆ ಎಂದು ಹೇಳಿದ ಲಸಿಕೆ ಒಂದು ಗಂಟೆಯಾದರೂ ಬರಲಿಲ್ಲ. ಇದರಿಂದಾಗಿ ನೂರಾರು ಜನರು ಬಿಸಿಲಿನಲ್ಲಿ ಬಳಲಿ ಬೆಂಡಾದರು.
ಸಾಮಾಜಿಕ ಅಂತರ ಮರೆತ ಜನರು ಲಸಿಕೆ ಪಡೆಯಲು ಮುಗಿಬಿದ್ದರು. ಈ ಹಿನ್ನೆಲೆಯಲ್ಲಿ ಶೆಟರ್ ಭಾಗಶಃ ಮುಚ್ಚಿ ಲಸಿಕೆ ಕೊಡಲು ಶುರು ಮಾಡಲಾಯಿತು. ಆದರೂ ಜನತೆಯ ಒತ್ತಡ ಹೆಚ್ಚಾಗುತ್ತಲೇ ಇದ್ದಿದ್ದರಿಂದ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ರಿಗೆ ಕರೆ ಮಾಡಿ ವಿಷಯ ತಿಳಿಸಿದ ಕಾಂಗ್ರೆಸ್ ಮುಖಂಡರು, ಇನ್ನಷ್ಟು ಲಸಿಕೆ ನೀಡುವಂತೆ ಮನವಿ ಮಾಡಿದರು. "ಅಧಿಕಾರಿಗಳ ಜೊತೆ ಮಾತನಾಡಿ ವ್ಯವಸ್ಥೆ ಮಾಡುವುದಾಗಿ," ಮಲ್ಲಿಕಾರ್ಜುನ್ ಭರವಸೆ ನೀಡಿದರು.
Recommended Video
ಲಸಿಕೆ ಬಾರದಿರಲು ರಾಜಕೀಯ ಒತ್ತಡ?
"ಇನ್ನು ಲಸಿಕೆ ಬಾರದಿರಲು ರಾಜಕೀಯ ಒತ್ತಡವೇ ಕಾರಣ. ಮುನ್ನೂರು ಲಸಿಕೆ ನೀಡುವುದಾಗಿ ಹೇಳಿ ನೀಡದಿದ್ದರೆ ಹೇಗೆ. ಅಧಿಕಾರಿಗಳು ಯಾರೋ ಹೇಳಿದ ಮಾತಿನ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ, ಇದು ಸರಿಯಲ್ಲ. ಬೆಳಿಗ್ಗೆಯಿಂದಲೇ ಬಿಪಿ, ಹಾರ್ಟ್ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಜನರು ಬಂದಿದ್ದಾರೆ, ಸಾಲಿನಲ್ಲಿ ನಿಂತು ಬಳಲಿದ್ದಾರೆ. ಜನರ ಪ್ರಾಣದ ಜೊತೆ ಚೆಲ್ಲಾಟ ಆಡುವುದನ್ನು ಬಿಡಬೇಕು. ನಾವು ಆಯೋಜನೆ ಮಾಡಿದ್ದು, ಜನರಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ. ಆದರೆ ಇದರಲ್ಲಿಯೂ 'ಒಳ ರಾಜಕೀಯ' ಮಾಡಿದ್ದಾರೆ. ಸರ್ಕಾರದ ಕೋಟಾದಡಿ ಲಸಿಕೆ ಕೊನೆಗೂ ಬರಲಿಲ್ಲ," ಎಂದು ಕಾಂಗ್ರೆಸ್ ಮುಖಂಡ ಕೆ.ಬಿ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications