ಹಿಂದೂ ವಿರೋಧಿ ಸಿದ್ದರಾಮಯ್ಯ: ಮತ್ತೆ ಕಿಡಿ ಹೊತ್ತಿಸಿದ ಅರುಣ್ ಸಿಂಗ್
ದಾವಣಗೆರೆ, ಸೆಪ್ಟೆಂಬರ್ 18: "ಹಿಂದೂ ವಿರೋಧಿ ಮಾಜಿ ಸಿಎಂ ಸಿದ್ದರಾಮಯ್ಯ ಈಗ ದೇವಾಲಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಮಸೀದಿ ನಿರ್ಮಾಣದ ಬಗ್ಗೆ ಹೇಳುತ್ತಾರೆ. ದೇವಾಲಯಗಳ ಬಗ್ಗೆ ಯಾಕೆ ಮಾತನಾಡುತ್ತಿರಲಿಲ್ಲ,'' ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಬಿಜೆಪಿ ಕೋರ್ ಕಮಿಟಿ ಸಭೆ ಹಾಗೂ ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ದಾವಣಗೆರೆ ನಗರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಕಾಂಗ್ರೆಸ್ನವರು ದೇವಾಲಯಗಳ ನಿರ್ಮಾಣ ಬಗ್ಗೆ ಇದುವರೆಗೆ ಚಕಾರ ಎತ್ತುತ್ತಿರಲಿಲ್ಲ. ಆದರೆ ಈಗ ಮಾತನಾಡತೊಡಗಿದ್ದಾರೆ," ಎಂದು ಕಿಡಿಕಾರಿದರು.
"ಬಿಜೆಪಿ ಯಾವಾಗಲೂ ದೇವಸ್ಥಾನಗಳ ಉಳಿವಿಗೆ ಶ್ರಮಿಸಿದೆ, ಶ್ರಮಿಸುತ್ತಲಿದೆ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ. ಅದರಲ್ಲಿ ಯಾವುದೇ ಸಂಶಯ ಬೇಡ. ಹಿಂದೂಗಳ ಹೃದಯದಲ್ಲಿ ದೇವಿ, ದೇವರ ಬಗ್ಗೆ ಅಪಾರ ಗೌರವವಿದೆ. ಬಿಜೆಪಿಯರದ್ದು ಇದೇ ಭಾವನೆ. ರಾಮ ಸೇರಿದಂತೆ ಇತರೆ ದೇವರನ್ನು ಆರಾಧಿಸುತ್ತೇವೆ. ದೇವಸ್ಥಾನಗಳ ರಕ್ಷಣೆ ನಮ್ಮ ಜವಾಬ್ದಾರಿ," ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದರು.

ಬಿಎಸ್ವೈಗೆ ನೋ ನೀಡ್ ಆಫ್ ಗ್ರೀನ್ ಸಿಗ್ನಲ್
"ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯ ಪ್ರವಾಸ ಆರಂಭಿಸಲು ಗ್ರೀನ್ ಸಿಗ್ನಲ್ ಯಾಕೆ ನೀಡಬೇಕು. ಅವರು ಪಕ್ಷ ಮತ್ತಷ್ಟು ಬಲಿಷ್ಠಗೊಳಿಸಲು ಮುಂದಾದರೆ ಒಳ್ಳೆಯದು. ಕಾರ್ಯಕರ್ತರಲ್ಲಿ ಇದು ಮತ್ತಷ್ಟು ಹುಮ್ಮಸ್ಸು ತರಲಿದೆ ಎಂದು ಪ್ರತಿಪಾದಿಸಿದ ಅರುಣ್ ಸಿಂಗ್, ಯಡಿಯೂರಪ್ಪ ಹಿರಿಯ ನಾಯಕ. ಅವರು ರಾಜ್ಯ ಪ್ರವಾಸ ಮಾಡಬಹುದು. ಈಗಾಗಲೇ ಈ ಬಗ್ಗೆ ಹಲವಾರು ಬಾರಿ ಮಾತನಾಡಿರುವೆ," ಎಂದು ಹೇಳಿದರು.
"ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಒಳ್ಳೆಯ ಕೆಲಸ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ, ಬಡವರಿಗೆ ಒಳ್ಳೆಯ ಕಾರ್ಯಕ್ರಮ ರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಮುಂದೆಯೂ ಒಳ್ಳೆಯ ಕೆಲಸ ಮಾಡಲಿದ್ದಾರೆ. ಎಲ್ಲಾ ಸಮಾಜದ, ಎಲ್ಲಾ ಜನಾಂಗದ ಬಗ್ಗೆ ಗಮನ ಹರಿಸುತ್ತಿದ್ದಾರೆ. ಜನರಿಗೆ ಅನುಕೂಲ ಆಗುವ ಕೆಲಸ ಮಾಡುತ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿಯೇ ಮುಂಬರುವ ಚುನಾವಣೆಗೆ ಹೋಗಲಾಗುವುದು. ಈ ಬಗ್ಗೆ ಪದೇ ಪದೇ ಹೇಳಲು ಆಗದು," ಎಂದು ತಿಳಿಸಿದರು.

ಎರಡು ದಿನಗಳ ಕಾಲ ದಾವಣಗೆರೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ವಿಚಾರ, ಚಿಂತನೆ ನಡೆಯಲಿದೆ. ಮುಂಬರುವ ಚುನಾವಣೆ ಎದುರಿಸಲು ಕಾರ್ಯತಂತ್ರ ರೂಪಿಸಲಾಗುವುದು ಎಂದು ತಿಳಿಸಿದರು.
ಪದಾಧಿಕಾರಿಗಳ ಸಭೆ
ದಾವಣಗೆರೆ ನಗರದ ಪೂಜಾ ಇಂಟರ್ ನ್ಯಾಷನಲ್ ಹಾಗೂ ಅಪೂರ್ವ ರೆಸಾರ್ಟ್ನಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಯುತ್ತಿದೆ. ಬಿಜೆಪಿಯ ಸಚಿವರು, ಶಾಸಕರು, ವಿವಿಧ ಮೋರ್ಚಾಗಳ ಅಧ್ಯಕ್ಷರು ಸೇರಿದಂತೆ ಆಯ್ದ ಅಪೇಕ್ಷಿತರಿಗೆ ಆಹ್ವಾನ ನೀಡಲಾಗಿದೆ. ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕ್ ಪಂಚಾಯತ್ ಚುನಾವಣೆ, ಪಕ್ಷ ಸಂಘಟನೆ, ಎಲ್ಲೆಲ್ಲಿ ಬಲಿಷ್ಠವಾಗಿಲ್ಲ ಅಲ್ಲಲ್ಲಿ ಪಕ್ಷ ಮತ್ತಷ್ಟು ಬಲಿಷ್ಠಗೊಳಿಸುವ ಹೊಣೆಗಾರಿಕೆ, ಆಂತರಿಕ ವಿಚಾರಗಳ ಬಗ್ಗೆಯೂ ಸುದೀರ್ಘವಾಗಿ ಚರ್ಚೆ ನಡೆಸಲಾಗುತ್ತದೆ.












Click it and Unblock the Notifications