ಗಾಂಧೀಜಿ ರಾಷ್ಟ್ರಪಿತನೇ ಅಲ್ಲ: ಧರ್ಮೇಂದ್ರ ವಿವಾದಾತ್ಮಕ ಹೇಳಿಕೆ
ದಾವಣಗೆರೆ, ನವೆಂಬರ್ 19: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ ರಾಷ್ಟ್ರಪಿತನೇ ಅಲ್ಲ, ಈ ಬಗ್ಗೆ ಭಾರತದ ಸಂವಿಧಾನದಲ್ಲಿಯೂ ಯಾವುದೇ ಉಲ್ಲೇಖವಿಲ್ಲ. ಆತ ರಾಷ್ಟ್ರಪಿತನಾಗಿದ್ದರೆ ದಾಖಲೆ ನೀಡಿ ಎಂದು ದಾವಣಗೆರೆಯಲ್ಲಿ ಅಖಿಲ ಭಾರತ ಹಿಂದು ಮಹಾಸಭಾದ ಸಂಸದೀಯ ಕಾರ್ಯಾಧ್ಯಕ್ಷ ಧರ್ಮೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಇಂದು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಧರ್ಮೇಂದ್ರ, ಮಹಾತ್ಮ ಗಾಂಧೀಜಿ ರಾಷ್ಟ್ರಪಿತ ಹೌದೋ, ಅಲ್ಲವೋ ಎಂಬ ಬಗ್ಗೆ ನಾವು ಆರ್.ಟಿ.ಐ ಮೂಲಕ ಮಾಹಿತಿ ಪಡೆದಿದ್ದೇವೆ. ಆದರೆ, ಅದರಲ್ಲಿ ರಾಷ್ಟ್ರಪಿತನ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳಿಗೆ ಪಠ್ಯ ಪುಸ್ತಕದಲ್ಲಿ ತಪ್ಪು ಮಾಹಿತಿ ನೀಡುತ್ತಿವೆ ಎಂದು ಆರೋಪಿಸಿದ್ದಾರೆ.
ನಾವು ಮುಂದಿನ ದಿನಗಳಲ್ಲಿ ಸರ್ಕಾರ, ಪಠ್ಯ ಪುಸ್ತಕ ರಚನಾ ಸಮಿತಿ, ಶಿಕ್ಷಣ ಇಲಾಖೆ ವಿರುದ್ಧ ದೂರು ದಾಖಲಿಸುತ್ತೇವೆ. ಇಲ್ಲದಿದ್ದರೆ ರಾಷ್ಟ್ರಪಿತ ಎನ್ನುವ ಶಬ್ಧವನ್ನು ಪುಸ್ತಕಗಳಿಂದ ತೆಗೆಯಬೇಕು. 1857 ರಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಂಗಲ ಪಾಂಡೆ ಮತ್ತು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹೋರಾಡಿದ್ದಾರೆ. ಗಾಂಧೀಜಿ ನಂತರ ಬಂದವರು ಎಂದು ಹೇಳಿದರು.

ಮಹಾತ್ಮ ಗಾಂಧೀಜಿಯಿಂದಲೇ ಸ್ವಾತಂತ್ರ್ಯ ಸಿಕ್ಕಿತಾ? ಗಾಂಧಿಜೀಯನ್ನು ಯಾಕೆ ಅಷ್ಟೊಂದು ವೈಭವೀಕರಣ ಮಾಡುತ್ತೀರಿ ಎಂದು ಪ್ರಶ್ನಿಸಿದ ಧರ್ಮೇಂದ್ರ, ನಾವು ಇದನ್ನು ವಿರೋಧಿಸುತ್ತೇವೆ ಎಂದರು.
ದೇಶದ ಇತರ ಸ್ವಾತಂತ್ರ್ಯ ಹೋರಾಟಗಾರರಿಗೂ ಗಾಂಧಿಜೀಯಷ್ಟೇ ಗೌರವ ನೀಡಬೇಕು. ಗಾಂಧಿಜೀಯಿಂದಲೇ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವುದು ಮೂರ್ಖತನ. ಬಿಜೆಪಿ ಅಧಿಕಾರಕ್ಕೆ ಬಂದ ನಂತರವೂ ಸತ್ಯ ಹೇಳಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧವೂ ಧರ್ಮೇಂದ್ರ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications