ಹರಿಹರ: ವಾಲ್ಮೀಕಿ ಜಾತ್ರೆಗೆ ರಾಷ್ಟ್ರಪತಿಯವರನ್ನು ಆಹ್ವಾನಿಸಲು ನಿರ್ಧಾರ; ಇದರ ಹಿಂದಿನ ಉದ್ದೇಶವೇನು?
ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದ ಆವರಣದಲ್ಲಿ ಫೆಬ್ರವರಿ 8 ಮತ್ತು 9ರಂದು ನಡೆಯುವ ವಾಲ್ಮೀಕಿ ಜಾತ್ರೆಗೆ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ರಾಷ್ಟ್ರಪತಿಯವರ ಆಹ್ವಾನದ ಹಿಂದಿರುವ ಉದ್ದೇಶವೇನು ಎಂಬುದನ್ನು ಇಲ್ಲಿ ತಿಳಿಯಿರಿ.
ದಾವಣಗೆರೆ, ಜನವರಿ, 25: ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದ ಆವರಣದಲ್ಲಿ ಫೆಬ್ರವರಿ 8 ಮತ್ತು 9ರಂದು ವಾಲ್ಮೀಕಿ ಜಾತ್ರೆ ಅದ್ಧೂರಿಯಾಗಿ ಆಚರಿಸಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಮಹರ್ಷಿ ವಾಲ್ಮೀಕಿ ಜಾತ್ರೆಯ ವೇದಿಕೆ ಹಾಗೂ ಮಹಾ ಮಂಟಪ ನಿರ್ಮಾಣಕ್ಕೆ ಹಂದರ ಕಂಬದ ಪೂಜೆ ನೆರವೇರಿಸಲಾಗಿದೆ. ಅದೇ ರೀತಿಯಲ್ಲಿ ಈ ಜಾತ್ರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲು ಜಾತ್ರಾ ಮಹೋತ್ಸವ ಸಮಿತಿ ನಿರ್ಧರಿಸಿದೆ.
ವಾಲ್ಮೀಕಿ ಸಮಾಜದ ಎಸ್ಟಿ ಮೀಸಲಾತಿ ಹೆಚ್ಚಳವಾದ ಬೆನ್ನಲ್ಲೇ ಈ ಬಾರಿಯ ವಾಲ್ಮೀಕಿ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲು ಸಮಾಜದ ಮುಖಂಡರು, ಶಾಸಕರು, ಪ್ರತಿನಿಧಿಗಳು ತೀರ್ಮಾನ ಮಾಡಿದ್ದಾರೆ. ಜಾತ್ರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲು ಕೂಡ ಸಿದ್ಧತೆ ನಡೆಸಿದ್ದಾರೆ. ರಾಷ್ಟ್ರಪತಿ ಅವರ ಆಹ್ವಾನದ ಹಿಂದೆಯೂ ರಾಜಕೀಯ ಅಡಗಿದೆಯಾ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಜಾಗ ಹಸ್ತಾಂತರ ವಿಚಾರ; ಡಿಆರ್ಆರ್ ವಿದ್ಯಾರ್ಥಿಗಳ ಆಕ್ರೋಶ
2023ರ ವಿಧಾನಸಭಾ ಚುನಾವಣಾ ವರ್ಷ ಆಗಿರುವುದರಿಂದ ಬಿಜೆಪಿ ಸರ್ಕಾರ ಇದರ ಲಾಭ ಪಡೆಯಲು ಸಜ್ಜಾಗಿದೆ. ಹಾಗೆಯೇ ಹರಿಹರದ ರಾಜನಹಳ್ಳಿ ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಅವರನ್ನು ಕರೆತಂದರೆ ಸಮುದಾಯ ಬಿಜೆಪಿ ಬೆಂಬಲಿಸಲಿದೆ ಎಂಬ ವಿಶ್ವಾಸ ಹೊಂದಿದೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಆರೋಪ
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದ ಲಾಭ ಪಡೆಯಲು ಬಿಜೆಪಿ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಒಂದು ಕಡೆ ಕಾಂಗ್ರೆಸ್ ಮೀಸಲಾತಿ ಮೂಗಿಗೆ ತುಪ್ಪ ಸವರುವ ಕೆಲಸ ಎಂದು ಅಪಪ್ರಚಾರದಲ್ಲಿ ತೊಡಗಿದ್ದರೇ, ಮೀಸಲಾತಿ ಕೊಟ್ಟಿದ್ದು ನಮ್ಮ ಸರ್ಕಾರ ಎಂದು ಬಿಜೆಪಿ ಸರ್ಕಾರ ಹೇಳುತ್ತಿದೆ.
ಅದ್ಧೂರಿ ಜಾತ್ರೆ ಆಚರಣೆಗೆ ಸಿದ್ಧತೆ
ಈ ಬಾರಿ ಎಸ್ಟಿ ಪಂಗಡದ ಮತಗಳು ಬಿಜೆಪಿ ಕೈತಪ್ಪದಂತೆ ಕ್ರೋಢಿಕೃತ ಲಾಭ ಪಡೆಯಲು ಬಿಜೆಪಿ ತೆರೆಮರೆ ಕಸರತ್ತು ನಡೆಸಿದೆ. ಪ್ರತಿವರ್ಷ ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಮಠದಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಕಳೆದ ಎರಡು ವರ್ಷ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗಿರಲಿಲ್ಲ.
ರಾಷ್ಟ್ರಪತಿಯವರ ಆಹ್ವಾನದ ಉದ್ದೇಶವೇನು?
ಬುಡಕಟ್ಟು ಸಮುದಾಯದ ರಾಷ್ಟ್ರಪತಿಯವರನ್ನು ಕರೆತಂದರೆ ಕಾರ್ಯಕ್ರಮಕ್ಕೆ ಮೆರಗು ಎಂದು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ರಾಜ್ಯ ಸರ್ಕಾರದ ಮೂಲಕ ಸಮಾಜದ ಸಚಿವರು ಹಾಗೂ ಶಾಸಕರು ರಾಷ್ಟ್ರಪತಿಯವರನ್ನು ಕರೆತರಲು ಪ್ರಯತ್ನ ನಡೆಸಿದ್ದಾರೆ. ಇನ್ನು ಜಗಳೂರು ಶಾಸಕ ಎಸ್.ವಿ. ರಾಮಚಂದ್ರಪ್ಪನವರು ಜಾತ್ರಾ ಸಮಿತಿ ಅಧ್ಯಕ್ಷರಾಗಿದ್ದು, ಈ ಬಾರಿ ಎಸ್ಟಿ ಸಮುದಾಯದ ಹೆಚ್ಚು ಜನರನ್ನು ಸೇರಿಸಲು ಯೋಜನೆ ಸಿದ್ಧಪಡಿಸಿದ್ದಾರೆ.
ಎಸ್ಟಿ ಮೀಸಲಾತಿ ಹೆಚ್ಚಳದ ಉದ್ದೇಶವೇನು?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಶ್ರೀರಾಮುಲು ಸೇರಿದಂತೆ ಎಸ್ಟಿ ಸಮುದಾಯದ 13 ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಎರಡು ವರ್ಷ ಎಸ್ಟಿ ಮೀಸಲಾತಿ ಘೋಷಣೆಯಾಗಿರಲಿಲ್ಲ ಎಂಬುದು ವಾಲ್ಮೀಕಿ ಜಾತ್ರೆಯ ಪ್ರಮುಖ ವಿಷಯವಾಗಿತ್ತು. ಈ ಬಾರಿ ಎಸ್ಟಿ ಮೀಸಲಾತಿ ಶೇಕಡಾ 3 ರಿಂದ 7ಕ್ಕೆ ಹೆಚ್ಚಳವಾಗಿದ್ದು, ಬಿಜೆಪಿ ಇದರ ಲಾಭ ಪಡೆಯಲು ಸಂಪೂರ್ಣ ಸನ್ನದ್ಧವಾಗಿದೆ ಎನ್ನುವ ಮಾತುಗಳು ಜೋರಾಗಿಯೇ ಕೇಳಿಬರುತ್ತಿವೆ.
ಕಾಂಗ್ರೆಸ್ ಮುಖಂಡರು ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿ ಕಣ್ಣೊರೆಸುವ ತಂತ್ರ ಬಿಜೆಪಿಯದ್ದಾಗಿದೆ ಎಂದು ಆರೋಪಿಸಿದ್ದಾರೆ. ಇನ್ನು ಅದಕ್ಕೆ ಸಂವಿಧಾನದ ಮಾನ್ಯತೆ ಸಿಗುವುದು ಅನುಮಾನ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ ಮಾನ್ಯತೆ ದೊರಕಿಸಲು ಕೇಂದ್ರ ಮತ್ತು ರಾಜ್ಯ ಬಿಜೆಪಿ ಬದ್ಧವಾಗಿದೆ. ಇದು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಆಗುತ್ತದೆ ಎಂದು ಬಿಜೆಪಿ ಶಾಸಕರು ವಿಶ್ವಾಸ ವ್ಯಕ್ತಪಡಿಸುತ್ತಲೇ ಇದ್ದಾರೆ.