Get Updates
Get notified of breaking news, exclusive insights, and must-see stories!

ಮಹಾಂತೇಶ್ ಬೀಳಗಿಯವರೇ ಜವಾಬ್ದಾರಿಯುತ ಸ್ಥಾನದಲ್ಲಿದ್ದೀರ, ಬಕೆಟ್‌ ಹಿಡಿಯುವುದನ್ನ ನಿಲ್ಲಿಸಿ: ಹರಿಹರ BJP ಶಾಸಕ ವಾರ್ನ್‌

ದಾವಣಗೆರೆ, ಆಗಸ್ಟ್‌, 09: ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಅವರು ದಾವಣಗೆರೆಯಲ್ಲಿ ನಡೆದ ಗೃಹಜ್ಯೋತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಹೇಳಿದಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಇದಕ್ಕೆ ಒಬ್ಬ ಐಎಎಸ್ ಅಧಿಕಾರಿಯಾಗಿ ಯಾವ ರೀತಿ ನಡೆದುಕೊಳ್ಳಬೇಕು ಎಂಬುದೇ ಗೊತ್ತಿಲ್ಲ. ಬೀಳಗಿಗೆ ನಾಚಿಕೆಯಾಗಬೇಕು ಎಂದು ಹರಿಹರ ಬಿಜೆಪಿ ಶಾಸಕ ಬೆಂಕಿಯುಗುಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಂತೇಶ್ ಬೀಳಗಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದವರು. ಅದೇ ರೀತಿಯಲ್ಲಿ ಈಗ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿದ್ದಾರೆ. ಗೌರವಯುತ ಸ್ಥಾನದಲ್ಲಿರುವ ಅಧಿಕಾರಿ. ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುವಾಗ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಲಿ. ನಮ್ಮದೇನೂ ಅಭ್ಯಂತರ ಇಲ್ಲ ಎಂದರು.

Harihar BJP MLA outrage against Mahantesh Bilagi

ಆದರೆ ನೀವು ಹೇಳಿದಂತೆ ಕೇಳುತ್ತೇವೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಕೈ ಮುಗಿದು ಮನವಿ ಮಾಡಿದ್ದು ಸರಿಯಲ್ಲ ಎಂದು ಛೇಡಿಸಿದ ಅವರು, ಈ ಸುದ್ದಿ ಯಾವ ಮಾಧ್ಯಮದಲ್ಲಿಯೂ ಬರಲಿಲ್ಲ. ಇದು ಮನಸ್ಸಿಗೆ ಬೇಸರ ತರಿಸಿತು ಎಂದು ಹೇಳಿದರು.

ಇನ್ನು ಮಾಯಕೊಂಡ ಶಾಸಕ ಬಸವಂತಪ್ಪ ಅವರು ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು. ಕೊನೆಯಲ್ಲಿ ಕಾಂಗ್ರೆಸ್‌ಗೆ ಜೈ ಎಂದರು. ಇದು ಸರ್ಕಾರಿ ಕಾರ್ಯಕ್ರಮ. ಕೊನೆಯಲ್ಲಿ ತಮ್ಮ ತಪ್ಪು ಸರಿಪಡಿಸಿಕೊಂಡು ತಪ್ಪಾಗಿ ಹೇಳಿದೆ ಎಂದು ಹೇಳುವ ಮೂಲಕ ಸಬೂಬು ನೀಡಿದರು. ಆದರೆ ಮಹಾಂತೇಶ್ ಬೀಳಗಿ ಅವರು ಮಾತನಾಡಿದ್ದು ಯಾವ ಮಾಧ್ಯಮದಲ್ಲಿಯೂ ಸುದ್ದಿ ಬರಲೇ ಇಲ್ಲ. ಅಧಿಕಾರದಲ್ಲಿದ್ದವರು ತಪ್ಪು ಮಾಡಿದಾಗ ಎಚ್ಚರಿಸುವ ಕೆಲಸ ಮಾಧ್ಯಮಗಳು ಮಾಡಬೇಕು. ಇದು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಕ್ರಮದ ಬಗ್ಗೆ ತನಿಖೆಯಾಗಲಿ

ಇನ್ನು ಕೋವಿಡ್ ವೇಳೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಪದೇ ಪದೇ ಹೇಳುತ್ತಿದ್ದಾರೆ. ಅವ್ಯವಹಾರ, ಅಕ್ರಮ, ಭ್ರಷ್ಟಾಚಾರ ನಡೆದಿದ್ದರೆ ತನಿಖೆ ಮಾಡಲಿ. ನಾವು ಬೆಂಬಲಿಸುತ್ತೇವೆ. ಆದರೆ ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಆಗದು. ಸಚಿವರೇ ಹೇಳಿರುವಂತೆ ತನಿಖೆ ಮಾಡಿಸಿ ಅಕ್ರಮ ಬಯಲಿಗೆಳೆಯಲಿ. ಅದೇ ರೀತಿಯಲ್ಲಿ ಕೋವಿಡ್ ಅಕ್ರಮ ತನಿಖೆ ಮಾಡದಿದ್ದರೆ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಕಾರ್ಯಕರ್ತರ ವರ್ತನೆ ಬೇಸರ ತಂದಿದೆ

ನಗರದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ತೋರಿದ ವರ್ತನೆ ಬೇಸರ ತರಿಸಿದೆ. ನಾನು ಆಹ್ವಾನ ನೀಡಿದ್ದಕ್ಕೆ ಹೋಗಿದ್ದೆ. ಆದರೆ ಭಾಷಣ ಮಾಡುವಾಗ ಅಡ್ಡಿಪಡಿಸಿದರು. ಮಲ್ಲಿಕಾರ್ಜುನ್ ಅವರು ಭಾಷಣ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ 15 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದರೂ ಕೊಡಲಿಲ್ಲ ಎಂದರು. ಎಲ್ಲಿ, ಯಾವಾಗ, ಯಾರು ಈ ಮಾತು ಹೇಳಿದರು ಎಂಬ ದಾಖಲೆ ಬಿಡುಗಡೆ ಮಾಡಲಿ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಸವಾಲು ಹಾಕಿದರು.

ಕಾಂಗ್ರೆಸ್‌ನ ಮುಖಂಡರು ಅಧಿಕಾರಕ್ಕೆ ಬರುವ ಮುನ್ನ ಕರೆಂಟ್ ನಿಮಗೂ ಉಚಿತ, ನಮಗೂ ಉಚಿತ ಎಂದು ಹೇಳಿ ಜನರಿಗೆ ಗ್ಯಾರಂಟಿ ಕಾರ್ಡ್ ಕೂಡ ನೀಡಿದ್ದಾರೆ. ಹಾಗಾಗಿ ಯೋಜನೆ ಜಾರಿಗೊಳಿಸಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಸಚಿವರು ಪ್ರಧಾನಿಯವರು 15 ಲಕ್ಷ ಹಾಕಲಿಲ್ಲ ಎಂದು ಪದೇ ಪದೇ ಹೇಳುತ್ತಿದ್ದದ್ದು ಸರಿಯಲ್ಲ. ಹಾಗಾಗಿ, ನಾನು ಪ್ರಧಾನಿಯವರಿಗೆ ಕೇಳಿ ನೀವು 10 ಕೆ.ಜಿ. ನೀಡುತ್ತೇವೆಂಬ ಘೋಷಣೆ ಮಾಡಿದ್ದೀರಾ ಎಂದು ಪ್ರಶ್ನಿಸಿದೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತೋರಿದ ವರ್ತನೆ ಮಾತ್ರ ಸರಿಯಿರಲಿಲ್ಲ ಎಂದರು.

ಶಾಸಕ ಬಸವಂತಪ್ಪ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ಗೆ ಜೈ ಎಂದರು. ಐಎಎಸ್ ಅಧಿಕಾರಿಯಾದ ಮಹಾಂತೇಶ್ ಬೀಳಗಿ ಅವರು ಸಚಿವರ ಮುಂದೆ ನಾನು ನೀವು ಹೇಳಿದಂತೆ ಕೆಲಸ ಮಾಡುತ್ತೇನೆ ಎಂದು ನಮಸ್ಕರಿಸಿದರು. ಒಬ್ಬ ಅಧಿಕಾರಿಯಾಗಿ ಸರ್ಕಾರದ ಕೆಲಸ ಮಾಡಲಿ. ಆದರೆ ಮಂತ್ರಿಯೆದರು ಈ ರೀತಿ ವರ್ತಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಆದರೆ ನಾನು ಅಹಂಕಾರದಿಂದ ಮಾತನಾಡಿದೆ ಎಂಬರ್ಥದಲ್ಲಿ ಮಾಧ್ಯಮದಲ್ಲಿ ಬಂದಿದೆ. ಕೇವಲ ನಾನು ಮಾತನಾಡಿದ ವಿಚಾರ ಮಾತ್ರ ಇದೆ. ಶಾಸಕರು, ಐಎಎಸ್ ಅಧಿಕಾರಿಯ ವರ್ತನೆ ಸರಿಯೇ ಎಂದು ಪ್ರಶ್ನಿಸಿದರು.

ಅಧಿಕಾರದಲ್ಲಿದ್ದವರ ತಪ್ಪು ಯಾಕೆ ತೋರಿಸಲ್ಲ?

ಐಎಎಸ್ ಅಧಿಕಾರಿ ಕಾಂಗ್ರೆಸ್ ಪರ ಮಾತನಾಡಿದರೆ ಮಾಧ್ಯಮದವರು ಅವರನ್ನು ಪ್ರಶ್ನಿಸಲಿಲ್ಲ. ಅಧಿಕಾರದಲ್ಲಿದ್ದವರ ತಪ್ಪುಗಳನ್ನು ಹೇಳದಿದ್ದಾಗ ನಮಗೆ ಯಾಕೆ ಮಾತನಾಡಬೇಕಪ್ಪಾ ಅನಿಸುತ್ತದೆ. ಮಾಧ್ಯಮದವರು ಪೂರ್ಣ ಪ್ರಮಾಣದಲ್ಲಿ ಸುದ್ದಿ ಮಾಡದಿರುವುದು ಬೇಸರ ತರಿಸಿದೆ ಎಂದರು.

ಆಗಸ್ಟ್‌ 10ರೊಳಗೆ ನೀರು ಹರಿಸಿ

ಆಗಸ್ಟ್ 10ರೊಳಗೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನಾಲೆಯಲ್ಲಿ ನೀರು ಹರಿಸಬೇಕು. ಕಾಡಾ ಅಥವಾ ನೀರಾವರಿ ಇಲಾಖೆಯ ಅಧಿಕಾರಿಗಳು ದಿನಾಂಕ ನಿಗದಿಪಡಿಸಿ ತಿಳಿಸಬೇಕು. ಭದ್ರಾ ಡ್ಯಾಂನಿಂದ ನೀರು ಹರಿಸಲಾಗುತ್ತಿದೆ ಎಂದುಕೊಂಡು ರೈತರು ಇದ್ದಾರೆ. ಭದ್ರಾ ಡ್ಯಾಂ ಸಹ 166 ಅಡಿ ದಾಟಿದ್ದು, ಆದಷ್ಟು ಬೇಗ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ದಾಖಲೆ ಸಂಗ್ರಹಿಸಿ ಬಯಲಿಗೆಳೆಯುತ್ತೇವೆ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವರ್ಗಾವಣೆ ದಂಧೆ ಹೆಚ್ಚಾಗಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಇದು ಮುಂದುವರೆದಿದೆ. ಸುಮಾರು 300 ಅಧಿಕಾರಿಗಳ ಟ್ರಾನ್ಸ್‌ಫರ್ ಮಾಡಲಾಗಿದೆ. ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆದಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಒಂದೊಂದೇ ದಾಖಲೆ ತೆಗೆದು ಬಯಲಿಗೆಳೆಯುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮಾಹಿತಿ ನೀಡಿದರು.

ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತಿದೆ. ಜಿಲ್ಲೆಯ ಹೊಟೇಲ್‌ಗಳಲ್ಲಿ ತಿಂಡಿ, ತಿನಿಸುಗಳ ದರ ಪಟ್ಟಿಯಂತೆ ಹಣ ಪಡೆಯಲಾಗುತ್ತಿದೆ. ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸತ್ಯಹರಿಶ್ಚಂದ್ರರ ರೀತಿ ಮಾತನಾಡುತ್ತಾರೆ. ದಾಖಲೆ ಸಂಗ್ರಹಿಸಿ ಒಂದೊಂದಾಗಿ ಬಯಲಿಗೆ ತರುತ್ತೇವೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಗೆದ್ದ ಮಾತ್ರಕ್ಕೆ ಇಡೀ ಭಾರತ ಗೆದ್ದಿದ್ದೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್‌ನವರು ಇದ್ದಾರೆ. ಕಾಂಗ್ರೆಸ್‌ನವರು ಸರಿಯಾಗಿ ಮಾತನಾಡಬೇಕು. ಕಾಂಗ್ರೆಸ್ ಕಾರ್ಯಕರ್ತರು ಗೃಹಜ್ಯೋತಿಗೆ ಜಿಲ್ಲೆಯಲ್ಲಿ ಚಾಲನೆ ನೀಡುವ ಕಾರ್ಯಕ್ರಮದ ವೇಳೆ ಗೂಂಡಾಗಳಂತೆ ವರ್ತನೆ ತೋರಿದ್ದಾರೆ. ಶಾಸಕರು ಎಂಬುದನ್ನು ಮರೆತು ಅಗೌರವದಿಂದ ಮಾತನಾಡಿದ್ದಾರೆ. ಈ ವರ್ತನೆ ಖಂಡನೀಯ ಎಂದರು.

ಒಳಮೀಸಲಾತಿ, ಮೀಸಲಾತಿ ಹೆಚ್ಚಳ ಸೇರಿದಂತೆ ಬೇರೆಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ನಾವು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಹೇಳಿದ ಅವರು, ನಾವು ಒಳ್ಳೆಯ ಕೆಲಸ ಮಾಡಿದರೂ ಜನರಿಗೆ ತಲುಪಿಸುವಲ್ಲಿ ವಿಫಲರಾದೆವು. ಹಾಗಾಗಿ ಚುನಾವಣೆಯಲ್ಲಿ ಸೋತೆವು ಎಂದು ವಿಶ್ಲೇಷಿಸಿದರು.

ಗೃಹಜ್ಯೋತಿ ಯೋಜನೆಯ ಸರ್ಕಾರಿ‌ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾ ವರ್ತನೆ ತೋರಿದ್ದಾರೆ. ಶಾಸಕ ಬಿ.ಪಿ ಹರೀಶ್ ಭಾಷಣ ಮಾಡುವ ವೇಳೆ ಪ್ರಧಾನಿಯವರು ಅನ್ನಭಾಗ್ಯ ಯೋಜನೆಗೆ ಸ್ಪಂದಿಸಲಿಲ್ಲ ಎಂದು ಹೇಳಿರುವುದನ್ನು ಖಂಡಿಸಿದ್ದಕ್ಕೆ ಉತ್ತರವನ್ನು ಬಿಜೆಪಿ ಶಾಸಕರು ನೀಡಿದ್ದಾರೆ. ಶಾಸಕರು ಎಂದು ನೋಡದೆ ರಾಜ್ಯ ಗೆದ್ದಿದ್ದಕ್ಕೆ ದೇಶವನ್ನೇ ಗೆದ್ದಂತೆ ವರ್ತಿಸುತ್ತಿದ್ದಾರೆ. ಈ ಹಿಂದೆ ಲೋಕಸಭೆಯಲ್ಲಿ ಹೀನಾಯವಾಗಿ ಸೋತಿದ್ದೀರಿ ಎಂಬುದನ್ನು ಮರೆಯಬಾರದು ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಜಗದೀಶ್, ಉಪಾಧ್ಯಕ್ಷರಾದ ಶ್ರೀನಿವಾಸ್ ದಾಸಕರಿಯಪ್ಪ, ಮಂಜಾನಾಯ್ಕ, ಲಿಂಗರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+