ನಾವು ಏನೆಲ್ಲಾ ಕೊಟ್ಟರೂ ಜನ ಬಿಜೆಪಿ ಗೆಲ್ಲಿಸಿದರು ಎಂದು ಬೇಸರಗೊಂಡ ಮಾಜಿ ಸಚಿವ ಆಂಜನೇಯ
ದಾವಣಗೆರೆ, ನವೆಂಬರ್ 22: "ಅನ್ನ ಉಂಡಂಥ ಜನ ನಮಗೆ ಮತ ಹಾಕಲಿಲ್ಲ, ಅನ್ನ ನೀಡದಂತಹ ಬಿಜೆಪಿಯನ್ನು ಗೆಲ್ಲಿಸಿದ್ರು" ಎಂದು ದಾವಣಗೆರೆಯಲ್ಲಿ ಕಾಂಗ್ರೆಸ್ ಮಾಜಿ ಸಚಿವ ಎಚ್. ಆಂಜನೇಯ ಬೇಸರ ವ್ಯಕ್ತಪಡಿಸಿದರು.
ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಕಾಂಗ್ರೆಸ್ ಸರ್ಕಾರ ಇರುವಾಗ ಅನ್ನಭಾಗ್ಯ ಯೋಜನೆ ಮೂಲಕ ಬಡವರ ಹೊಟ್ಟೆ ತುಂಬಿಸಿದ್ದೆವು. ಬಡ ಮಕ್ಕಳಿಗೆ ಶಿಕ್ಷಣ, ಶೂ ಭಾಗ್ಯ, ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತಂದು ಜನರ ಏಳಿಗೆಗಾಗಿ ಶ್ರಮಿಸಿದೆವು. ಆದರೆ ಜನರು ಕಾಂಗ್ರೆಸ್ ಬಿಟ್ಟು ಬಿಜೆಪಿಯನ್ನು ಗೆಲ್ಲಿಸಿದ್ರು. ಕಾಂಗ್ರೆಸ್ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಸೋಲಿಸಿದರು" ಎಂದು ಬೇಸರದಿಂದ ಹೇಳಿದರು.
ಅಲ್ಲದೆ "ರಾಜ್ಯದಲ್ಲಿ 15 ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆ ಬೇಕಾಗಿತ್ತಾ, ಈ 15 ಜನ ಶಾಸಕರ ರಾಜೀನಾಮೆ ಹಿಂದೆ ಸ್ವಾರ್ಥ, ಅಧಿಕಾರ ದಾಹ, ಹಣದ ಆಸೆ ಇದೆ. ಪಕ್ಷಕ್ಕೆ ದ್ರೋಹ ಮಾಡಿ ರಾಜೀನಾಮೆ ನೀಡಿ ಈಗ ಚುನಾವಣೆಗೆ ನಿಂತಿದ್ದಾರೆ. ಅವರನ್ನು ಜನರು ಸೋಲಿಸಿ, ತಕ್ಕ ಪಾಠ ಕಲಿಸುತ್ತಾರೆ. ಅಲ್ಲದೆ ಸುಪ್ರೀಂ ಒಳ್ಳೆ ತೀರ್ಪು ನೀಡಿದೆ. ಇಲ್ಲವಾದರೆ ಅವರು ಸಚಿವರಾಗಿ ನಂತರ ಚುನಾವಣೆಗೆ ಹೋಗುತ್ತಿದ್ದರು. ಪ್ರಜಾಪ್ರಭುತ್ವ ಉಳಿಸಬೇಕು ಎಂದರೆ ಅನರ್ಹರನ್ನು ಅನರ್ಹರನ್ನಾಗೇ ಮಾಡಬೇಕು" ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರನ್ನು ಬಫೂನ್ ಎಂದು ರೇಣುಕಾಚಾರ್ಯ ನಿಂದಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,"ಅವರೇ ಬಫೂನ್ ಇರಬೇಕು. ಅದಕ್ಕಾಗಿ ಹೀಗೆ ಮಾತನಾಡುತ್ತಿದ್ದಾರೆ. ಯಾರನ್ನು ಕೂಡ ಟೀಕೆ ಮಾಡಬಾರದು, ಟೀಕೆ ಮಾಡಿದರೆ ಅದು ಆರೋಗ್ಯಕರವಾಗಿರಬೇಕು" ಎಂದು ಶಾಸಕ ಎಂಪಿ ರೇಣುಕಾಚಾರ್ಯಗೆ ಬುದ್ಧಿವಾದ ಹೇಳಿದರು.












Click it and Unblock the Notifications