ದಾವಣಗೆರೆಗೆ ಶುಭ ಸುದ್ದಿ: ಶತಕ ದಾಟಿದ ಕೊರೊನಾ ಗುಣಮುಖರ ಸಂಖ್ಯೆ
ದಾವಣಗೆರೆ, ಜೂನ್ 1: ಮೊದಲು ಹಸಿರು ವಲಯದಲ್ಲಿದ್ದ ದಾವಣಗೆರೆ ಜಿಲ್ಲೆಯಲ್ಲಿ ನಂತರ ಕೊರೊನಾ ವೈರಸ್ ಆರ್ಭಟ ಶುರು ಮಾಡಿತ್ತು. ಏಕಾಏಕಿ ಸರಣಿ ಪಾಸಿಟಿವ್ ಕೇಸ್ ಗಳಿಂದ ನಲುಗಿ ಹೋಗಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿ, ಆತಂಕ ಮೂಡಿಸಿತ್ತು.
ಆದರೆ ಈಗ ದಾವಣಗೆರೆ ಜಿಲ್ಲೆಯ ಜನರಿಗೆ ಒಂದಾದರಂತೆ ಒಂದು ಸಿಹಿ ಸುದ್ದಿಗಳು ಬರುತ್ತಿವೆ. ಇದುವರೆಗೆ ಕೊರೊನಾ ವೈರಸ್ ನಿಂದ ಗುಣಮುಖ ಆದವರ ಸಂಖ್ಯೆ ಶತಕ ದಾಟಿದೆ. ಕೊರೊನಾ ವೈರಸ್ ಗೆದ್ದು ಬಂದ ಎಲ್ಲರಿಗೂ ಜಿಲ್ಲಾಡಳಿದಿಂದ ಅದ್ದೂರಿಯಾಗಿ ಬೀಳ್ಕೊಡುತ್ತಿದೆ.
ಬೆಣ್ಣೆ ನಗರಿಯಂತಲೇ ಕರೆಯುವ ದಾವಣಗೆರೆಯಲ್ಲಿ ಮೊದಲು ಎರಡು ಕೊರೊನಾ ವೈರಸ್ ಪ್ರಕರಣಗಳು ಗುಣಮುಖರಾಗಿ ಸಂತೋಷದಲ್ಲಿತ್ತು. ಆದರೆ ಮಹಾಮಾರಿ ಕೊರೊನಾ ವೈರಸ್ ಎರಡನೇ ಇನ್ನಿಂಗ್ಸ್ ಆರಂಭಿಸಿತ್ತು.

ಸ್ಟಾಪ್ ನರ್ಸ್ ಹಾಗೂ ಮೃತ ವೃದ್ಧ, ತಬ್ಲಿಘಿ, ಅಜ್ಮೇರ್ ಕಂಟಕಗಳು ಬಿಟ್ಟು ಬಿಡದೇ ಕಾಡತೊಡಗಿದ್ದವು. ಇಷ್ಟಾದರೂ ಕೊರೊನಾ ವೈರಸ್ ಮೂಲ ಮಾತ್ರ ಸಿಕ್ಕಿಲ್ಲ. ನರ್ಸ್ ಪ್ರಾಥಮಿಕ ಸಂಪರ್ಕದಿಂದಲೇ ಬರೋಬ್ಬರಿ 42 ಮಂದಿಗೆ ಸೋಂಕು ತಗುಲಿತ್ತು. ಜೊತೆಗೆ ದಾವಣಗೆರೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 156 ಆಗಿತ್ತು.
ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಒಂದೆಡೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಆತಂಕ ಇದ್ದರೆ ಇತ್ತ ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದು ನೆಮ್ಮದಿ ತರಿಸಿದೆ. ಮುಖ್ಯವಾಗಿ ವೃದ್ಧರಿಗೆ, ಅನಾರೋಗ್ಯ ಪೀಡಿತರಿಗೆ, ಮಕ್ಕಳಿಗೆ ಸೋಂಕು ತಗುಲಿದರೆ ಡೇಂಜರ್ ಎನ್ನುವ ಮಾತಿತ್ತು. ಆದರೆ 8 ತಿಂಗಳ ಮಗು ಸಾವನ್ನೆ ಗೆದ್ದು ಬಂದಿದೆ ಎಂದರು.

ಕೊರೊನಾ ವೈರಸ್ ಗೆ ಸೆಡ್ಡು ಹೊಡೆದು 70 ವರ್ಷದ ವೃದ್ಧ ಗುಣಮುಖ ಆಗಿ ಬಂದಿದ್ದಾನೆ. ಒಟ್ಟು 156 ಪಾಸಿಟಿವ್ ಪ್ರಕರಣಗಳಲ್ಲಿ ಇದುವರೆಗೂ 121 ಜನ ಗುಣಮುಖರಾಗಿದ್ದು, ವೈದ್ಯರ ಆತ್ಮವಿಶ್ವಾಸ ಹೆಚ್ಚಿಸಿದೆ. ಜೊತೆಗೆ ಜಿಲ್ಲಾಡಳಿತ ಕೂಡ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಡಿಸಿ ಮಹಾಂತೇಶ್ ಬೀಳಗಿ ತಿಳಿಸಿದರು.
ದಾವಣಗೆರೆಯಲ್ಲಿ ಹೊನ್ನಾಳಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಕೊರೊನಾ ತೊಲಗಲಿ ಎಂದು ಮೃತ್ಯುಂಜಯ ಹೋಮ ನಡೆಸಿದರು. ಜೊತೆಗೆ ಕೊರೊನಾ ವಾರಿಯರ್ಸ್ ಗೆ ಆನೆಗಳ ಮೂಲಕ ಪುಷ್ಪಾರ್ಚನೆ ನಡೆಸಿದ್ದು, ದೊಡ್ಡ ಮಟ್ಟದಲ್ಲಿ ಗೌರವ ನೀಡಿದ್ದಾರೆ.
ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಮಾತನಾಡಿ, ಒಟ್ಟಾರೆಯಾಗಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಾಕಷ್ಟು ಪ್ರಯತ್ನ ಮಾಡುತ್ತಿವೆ, ಈ ನಡುವೆ 100 ಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದು, ಬೆಣ್ಣೆನಗರಿಯಲ್ಲಿ ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದರು.












Click it and Unblock the Notifications