ದಾವಣಗೆರೆಯ ಉತ್ತರಕ್ಕೆ ಕೇಸರಿ ಕಲಿ ಯಾರು? ಪುತ್ರನಿಗೆ ಟಿಕೆಟ್ ಕೊಡಿಸಲು ಸಂಸದರ ಯತ್ನ
ದಾವಣಗೆರೆ, ಏಪ್ರಿಲ್ 6: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರಗಳಲ್ಲಿಯೂ ಒಂದು. ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಪುತ್ರರೂ ಆದ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಕಾಂಗ್ರೆಸ್ನ ಹುರಿಯಾಳು. ಇವರ ವಿರುದ್ಧ ಕಣಕ್ಕಿಳಿಯುವ ಬಿಜೆಪಿ ಅಭ್ಯರ್ಥಿ ಯಾರು ಎಂಬ ಕುತೂಹಲ ಎಲ್ಲರನ್ನೂ ಕೆರಳಿಸಿದೆ.
ಸಂಸದ ಜಿ. ಎಂ. ಸಿದ್ದೇಶ್ವರ ಅವರು ತನ್ನ ಪುತ್ರನಿಗೆ ಟಿಕೆಟ್ ಕೊಡಿಸಲು ಹರಸಾಹಸ ಮುಂದುವರಿಸಿದ್ದಾರೆ. ದೆಹಲಿಗೆ ತೆರಳಿದ್ದ ಸಿದ್ದೇಶ್ವರ ಅವರು ತನ್ನ ಪುತ್ರನಿಗೆ ಚಿತ್ರದುರ್ಗ ಅಥವಾ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ವರಿಷ್ಠರ ಮೇಲೆ ಒತ್ತಡ ಮುಂದುವರಿಸಿದ್ದಾರೆ. ಈ ಚುನಾವಣೆಯಲ್ಲಿ ಟಿಕೆಟ್ ಕೊಡಿಸಲು ಇನ್ನಿಲ್ಲದ ಪ್ರಯತ್ನ ಮುಂದುವರಿಸಿದ್ದಾರೆ.

ಈಗಾಗಲೇ ಬಿಜೆಪಿ ಹಿರಿಯ ನಾಯಕ, ಹಾಲಿ ಶಾಸಕರೂ ಆದ ಎಸ್. ಎ. ರವೀಂದ್ರನಾಥ್ ಅವರು ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ ಬೆನ್ನಲ್ಲೇ ಆಕಾಂಕ್ಷಿಗಳ ಉತ್ಸಾಹ ಹೆಚ್ಚಿತ್ತು. ಅದರಲ್ಲಿಯೂ ಬಿಜೆಪಿಯ ಹಲವು ಆಕಾಂಕ್ಷಿಗಳ ಪೈಕಿ ಈಗ ಇಬ್ಬರ ಹೆಸರನ್ನು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆಯಾಗಿ ಕೇಂದ್ರದ ವರಿಷ್ಠರ ಅನುಮತಿಗೆ ಕಳುಹಿಸಲಾಗಿದೆ. ಕೇಂದ್ರದ ಬಿಜೆಪಿ ಸಂಸದೀಯ ಮಂಡಳಿಗೆ ಈ ಇಬ್ಬರ ಹೆಸರು ಹೋಗಿದೆ.
ರವೀಂದ್ರನಾಥ್ 2008ರಿಂದ ಇಲ್ಲಿಯವರೆಗೆ ಮೂರು ಚುನಾವಣೆ ಎದುರಿಸಿದ್ದಾರೆ. 2013ರಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ರ ವಿರುದ್ಧ ಭಾರೀ ಅಂತರದಲ್ಲಿ ಎಸ್. ಎ. ರವೀಂದ್ರನಾಥ್ ಸೋಲು ಕಂಡಿದ್ದಾರೆ. ಆದರೆ, 2018ರ ಚುನಾವಣೆಯಲ್ಲಿ ಮತ್ತೆ ಫಿನಿಕ್ಸ್ ನಂತೆ ಎದ್ದು ಬಂದು ಮಲ್ಲಿಕಾರ್ಜುನ್ ಅವರ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ ಸೋಲುಣಿಸಿದ್ದರು.

ಈ ಬಾರಿ ಆರೋಗ್ಯ ಕಾರಣ ನೀಡಿ ವಿಧಾನಸಭೆ ಚುನಾವಣೆಗೆ ದಾವಣಗೆರೆ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಿಲ್ಲ ಎಂದು ಘೋಷಿಸಿಯಾಗಿದೆ. ಈ ಕುರಿತಂತೆ ಬಿಜೆಪಿ ರಾಜ್ಯ ನಾಯಕರಿಗೂ ಸ್ಪಷ್ಟವಾಗಿ ತಿಳಿಸಿ ಬಂದಿದ್ದಾರೆ. ಈ ನಡುವೆ ಮಂಗಳವಾರ ರಾತ್ರಿ ಎಸ್. ಎ. ಆರ್. ಬೆಂಬಲಿಗರು ಶಿರಮಗೊಂಡನಹಳ್ಳಿಯ ರವೀಂದ್ರನಾಥ್ ರ ನಿವಾಸಕ್ಕೆ ಆಗಮಿಸಿ ಮತ್ತೆ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರವೀಂದ್ರನಾಥ್ ಅವರು 'ನಾನು ಕಳೆದ ನಾಲ್ಕು ವರ್ಷಗಳ ಹಿಂದೆಯೇ ಚುನಾವಣೆಗೆ ಮುಂದೆ ಸ್ಪರ್ಧೆ ಮಾಡೋಲ್ಲ ಅಂತಾ ಯಡಿಯೂರಪ್ಪರಿಗೆ ಹೇಳಿದ್ದೆ. ಆಗ ಯಡಿಯೂರಪ್ಪ ಅವರು ಸದ್ಯಕ್ಕೆ ಈ ವಿಚಾರ ಎಲ್ಲಿಯೂ ಪ್ರಸ್ತಾಪ ಮಾಡಬೇಡಿ ಎಂದಿದ್ದರು. ಆ ಕಾರಣದಿಂದ ಸುಮ್ಮನಿದ್ದೆ. ನಾಲ್ಕು ವರ್ಷಗಳಲ್ಲಿ ಆರೋಗ್ಯ ಸುಧಾರಿಸಬಹುದು ಎಂದುಕೊಂಡಿದ್ದೆ. ಅದು ಆಗಲೇ ಇಲ್ಲ. ಮಂಡಿ ಶಸ್ತ್ರಚಿಕಿತ್ಸೆ ಆಗಿದೆ. ಆರೋಗ್ಯ ಸೂಕ್ತವಾಗಿ ಸ್ಪಂದಿಸದ ಕಾರಣ ಹೆಚ್ಚು ಓಡಾಡಲು ಆಗಲ್ಲ. ನನ್ನ ಸಮಸ್ಯೆಯನ್ನೂ ಅರ್ಥ ಮಾಡಿಕೊಳ್ಳಿ' ಎಂದು ಹೇಳುವ ಮೂಲಕ ಬೆಂಬಲಿಗರ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.

ದಾವಣಗೆರೆ ಉತ್ತರ ಕ್ಷೇತ್ರದಿಂದ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯ ಎಸ್. ಟಿ. ವೀರೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಬಿಜೆಪಿ ಮಾಜಿ ಅಧ್ಯಕ್ಷ ಜೀವನಮೂರ್ತಿ, ಸಂಸದ ಜಿ. ಎಂ. ಸಿದ್ದೇಶ್ವರ ಅವರ ಪುತ್ರ ಜಿ. ಎಸ್. ಅನಿತ್ ಅವರ ಹೆಸರು ಕೇಳಿ ಬಂದಿತ್ತು.
ಕದನ ಕಲಿಗಳಲ್ಲಿ ಇಬ್ಬರು ಫೈನಲ್?
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸಾದು ಲಿಂಗಾಯತ ಮತಗಳು ಹೆಚ್ಚಾಗಿವೆ. ಈ ಕಾರಣಕ್ಕೆ ಈ ಸಮುದಾಯಕ್ಕೆ ಆದ್ಯತೆ ನೀಡುವುದು ಖಚಿತ. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಹ ಲಿಂಗಾಯತ ಸಮಾಜದವರೇ. ಬಿಜೆಪಿ ಕಾರ್ಯಕಾರಿಣಿಯಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ವೀರೇಶ್ ಅವರು ಹೋರಾಟದ ಹಿನ್ನೆಲೆಯಿಂದ ಬಂದವರು. ಹಿಂದೂ ಫೈರ್ ಬ್ರ್ಯಾಂಡ್ ಅಂತಾನೇ ಕರೆಯಲಾಗುತ್ತದೆ.
ಎಬಿವಿಪಿ, ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ಹಿಂದುತ್ವಕ್ಕೆ ಧಕ್ಕೆ ಬಂದಾಗ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಆರ್ ಎಸ್ ಎಸ್ ನ ನಿಷ್ಠಾವಂತರು. ಈ ಕಾರಣಕ್ಕೆ ಆರ್ಎಸ್ಎಸ್ ಕಡೆಯಿಂದ ವೀರೇಶ್ ಅವರ ಹೆಸರು ದೆಹಲಿಗೆ ಹೋಗಲು ಕಾರಣ ಎಂದು ಬಿಜೆಪಿಯ ದೆಹಲಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ಪುತ್ರನ ಪರ ಸಿದ್ದೇಶ್ವರ ಬ್ಯಾಟಿಂಗ್
ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಒಂದು ನನಗೆ ಟಿಕೆಟ್ ಕೊಡಿ, ಇಲ್ಲದಿದ್ದರೆ ಪುತ್ರ ಜಿ. ಎಸ್. ಅನಿತ್ಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಮಾತ್ರವಲ್ಲ, ಯಾವಾಗಲೂ ಲೋಕಸಭೆ ಚುನಾವಣೆಯಲ್ಲಿ ನನಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಈ ಕಾರಣಕ್ಕೆ ಪುತ್ರನಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರುತ್ತೇನೆ. ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರದ ಕೆಲ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸಿದ್ದೇಶ್ವರ ಅವರ ಮಾತು ಅಲ್ಲಗಳೆಯುವಂತಿಲ್ಲ. ಹಾಗಾಗಿ, ಅನಿತ್ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಮತ್ತೊಂದು ವಿಶೇಷ ಎಂದರೆ ಈ ಇಬ್ಬರ ಪೈಕಿ ಒಬ್ಬರಿಗೆ ಟಿಕೆಟ್ ಪಕ್ಕಾ ಆಗುವುದು ಖಚಿತ ಎನ್ನಲಾಗಿದ್ದು, ಬಿಜೆಪಿ ಸಂಸದೀಯ ಮಂಡಳಿ ಯಾರಿಗೆ ಟಿಕೆಟ್ ನೀಡುತ್ತೆ ಎಂಬ ಕುತೂಹಲ ಗರಿಗೆದರಿದೆ. ಈ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವುದು ಖಚಿತ ಎಂದು ಬಿಜೆಪಿ ಆಪ್ತ ವಲಯ ಮಾಹಿತಿ ನೀಡಿದೆ. ಜೊತೆಗೆ ಅಂತಿಮವಾಗಿ ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಅಭ್ಯರ್ಥಿ ಆಯ್ಕೆ ಕುರಿತಂತೆ ನಿರ್ಧರಿಸಲಿದ್ದು, ಕೊನೆ ಕ್ಷಣದಲ್ಲಿ ಅಚ್ಚರಿಯಾಗಿ ನಿರ್ಧಾರ ಮಾಡಿದರೂ ಮಾಡಬಹುದು ಎಂದು ಹೇಳಿದೆ.












Click it and Unblock the Notifications