ದಾವಣಗೆರೆ; ಮನೆ ಆರೈಕೆಯಲ್ಲಿರುವವರಿಗೆ ಉಚಿತ ಊಟ, ತಿಂಡಿ
ದಾವಣಗೆರೆ, ಮೇ 11; "ಕೊರೊನಾ ವೈರಸ್ ಸೋಂಕಿತರು ಹೋಂ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಉಚಿತವಾಗಿ ಆಹಾರ ಪೂರೈಸಲು ದಾವಣಗೆರೆ ಮಹಾನಗರ ಪಾಲಿಕೆ ನಿರ್ಧರಿಸಿದೆ" ಎಂದು ಮೇಯರ್ ಎಸ್. ಟಿ. ವೀರೇಶ್ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಅನ್ನಂ ಪರಬ್ರಹ್ಮ ಸ್ವರೂಪಂ'', "ಸೇವೆಯೇ ಮನುಜ ಧರ್ಮ'' ಧ್ಯೇಯ ವಾಕ್ಯದಡಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳಿಗೆ ಮಾತ್ರ ಆಹಾರ ವಿತರಿಸಲು ಪ್ರೇರಣಾ ಯುವಸಂಸ್ಥೆ ಮುಂದೆ ಬಂದಿದ್ದು, ಜಿಲ್ಲಾ ಖಾಸಗಿ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿ ಕೈಜೋಡಿಸಿದೆ. ಸೆವಿಡೆನ್ ಹೊಟೇಲ್ನಲ್ಲಿ ಊಟ, ತಿಂಡಿ ಸಿದ್ಧಪಡಿಸಿ, ಸ್ವಯಂ ಸೇವಕರು ಮನೆ ಮನೆಗೆ ತೆರಳಿ ವಿತರಣೆ ಮಾಡಲಿದ್ದಾರೆ" ಎಂದರು.
"ಬೆಳಗಿನ ಉಪಾಹಾರಕ್ಕೆ ಒಂದು ದಿನ ಮುಂಚೆ ಸಂಜೆ 7 ರಿಂದ ರಾತ್ರಿ 9 ಗಂಟೆಯೊಳಗೆ, ಮಧ್ಯಾಹ್ನದ ಭೋಜನಕ್ಕಾಗಿ ಅದೇ ದಿನ ಬೆಳಗ್ಗೆ 9 ರಿಂದ 11ರವರೆಗೆ ಹಾಗೂ ರಾತ್ರಿಯ ಊಟಕ್ಕಾಗಿ ಅದೇ ದಿನ ಸಂಜೆ 4 ಗಂಟೆಯಿಂದ ಆರು ಗಂಟೆಯೊಳಗೆ 9945977433 ನಂಬರ್ಗೆ ಸಂಪರ್ಕಿಸುವಂತೆ" ಮೇಯರ್ ಮನವಿ ಮಾಡಿದರು.

"ಕೊರೊನಾ ಸೋಂಕಿತರು ಭಯಪಡಬೇಕಾದ ಅವಶ್ಯಕತೆ ಇಲ್ಲ. ಸೋಂಕು ಬಂದಾಕ್ಷಣ ಧೈರ್ಯಗೆಡದಂತೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಆತಂಕಕ್ಕೊಳಗಾಗುವವರಿಗೆ ಕೌನ್ಸಿಲಿಂಗ್ ಮಾಡಬೇಕಾದ ಅವಶ್ಯಕತೆ ಇದೆ" ಎಂದು ಮೇಯರ್ ಹೇಳಿದರು.
"ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಹೋಗುವಾಗ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮಾಸ್ಕ್ ಧರಿಸಿ. ಬೇರೆ ಕಡೆ ಹೋಲಿಸಿದರೆ ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಸಾವಿನ ಪ್ರಮಾಣವೂ ಇಳಿಮುಖದತ್ತ ಸಾಗುತ್ತಿದೆ. ಆಕ್ಸಿಜನ್, ಬೆಡ್ ಹಾಗೂ ವೆಂಟಿಲೇಟರ್ ಸಮಸ್ಯೆ ಇದೆ ಎಂಬುದು ತಮಗೂ ಗೊತ್ತಿದೆ. ನಾವಂತೂ ಯಾವ ವ್ಯವಸ್ಥೆ ಮಾಡುವುದಾದರೂ ತಯಾರಿದ್ದೇವೆ" ಎಂದು ತಿಳಿಸಿದರು.












Click it and Unblock the Notifications