ಸಮಯಪ್ರಜ್ಞೆಯಿಂದ ಮಹಿಳೆಯನ್ನು ಉಳಿಸಿದ್ದ ಪುಟಾಣಿಗಳಿಗೆ ಸನ್ಮಾನ
ದಾವಣಗೆರೆ, ನವೆಂಬರ್ 23: ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಮಕ್ಕಳಾದ ಸುಶಾಂತ್ ರೆಡ್ಡಿ ಹಾಗೂ ಪ್ರಣೀತಾ ಅವರನ್ನು ನಗರದ ಕುವೆಂಪು ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋಮವಾರ ಸನ್ಮಾನ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುವೆಂಪು ಕನ್ನಡ ಭವನದಲ್ಲಿ ನಡೆದ ಚಿಗುರು ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆತ್ಮಹತ್ಯೆಯಿಂದ ಮಹಿಳೆಯನ್ನು ರಕ್ಷಿಸಿದ ಈ ಪುಟಾಣಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ದಾವಣಗೆರೆಯ ಆವರಗೆರೆ ಸಮೀಪದ ಉತ್ತಮ್ ಚಂದ್ ಬಡಾವಣೆಯಲ್ಲಿ ಇದೇ ನವೆಂಬರ್ 18ರಂದು ಅಕ್ಕನೊಂದಿಗೆ ಚಾಕೊಲೆಟ್ ಕೊಳ್ಳಲು ಅಂಗಡಿಗೆ ಹೋದ ಬಾಲಕ ಸುಶಾಂತ್ ಅಂಗಡಿ ಮಾಲಕಿ ಕಿಟಕಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನ್ನು ಕಂಡು, ಸಮಯಪ್ರಜ್ಞೆಯಿಂದ ಪ್ರಾಣ ಉಳಿಸಿದ್ದ. ಗುಪ್ತಚರ ಪೊಲೀಸ್ ಇಲಾಖೆಯ ಎಎಸ್ಐ ವೆಂಕಟೇಶ ರೆಡ್ಡಿ, ಡಿ.ಜೆ.ಲಕ್ಷ್ಮೀ ದಂಪತಿಯ ಮಕ್ಕಳಾದ 12 ವರ್ಷದ ಜಿ.ವಿ.ಸುಶಾಂತ ರೆಡ್ಡಿ, 19 ವರ್ಷದ ಮಗಳು ಜಿ.ವಿ.ಪ್ರಣೀತಾ ರೆಡ್ಡಿ ಸಮಯಪ್ರಜ್ಞೆ ಮೆರೆದು ಮಹಿಳೆಯನ್ನು ರಕ್ಷಣೆ ಮಾಡಿದ್ದರು.

ಈ ಸಾಹಸಿ ಮಕ್ಕಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸನ್ಮಾನಿಸಿತು.
"ಪ್ರತಿ ವರ್ಷ ಶಾಲೆಗಳಲ್ಲಿ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಕ್ಕಳ ಪ್ರತಿಭಾ ಅನಾವರಣಕ್ಕೆ ವೇದಿಕೆ ಸಿಗುತ್ತಿತ್ತು. ಈ ವರ್ಷ ಕೊರೊನಾದಿಂದಾಗಿ ಮಕ್ಕಳು ತಮ್ಮ ಪ್ರತಿಭೆ ವ್ಯಕ್ತಪಡಿಸಲು ಅವಕಾಶವಿಲ್ಲದಂತಾಗಿತ್ತು. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ "ಚಿಗುರು" ಕಾರ್ಯಕ್ರಮ ಏರ್ಪಡಿಸುವ ಮೂಲಕ ಮಕ್ಕಳಿಗೆ ವೇದಿಕೆ ಸಿಕ್ಕಂತಾಗಿದೆ. ಈ ಪುಟಾಣಿಗಳಿಗೆ ಸನ್ಮಾನಿಸಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ. ರವೀಂದ್ರ ನಾಥ್ ಮಾತನಾಡಿ, ದಾವಣಗೆರೆ ಹೆಸರಾಂತ ನಾಟಕಕಾರರು, ಕಲಾವಿದರ ತವರೂರು. ಮಕ್ಕಳಿಗೆ ಹುರುಪು ನೀಡುವಂಥ ಈ ರೀತಿಯ ಕಾರ್ಯಕ್ರಮಗಳನ್ನು ಕನಿಷ್ಠ ಮೂರು ದಿನಗಳ ಕಾಲ ಮಾಡಬೇಕು. ಈ ಮೂಲಕ ಬಾಲಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.












Click it and Unblock the Notifications