ದಾವಣಗೆರೆಯಲ್ಲಿ ಖೋಟಾ ನೋಟು ಗ್ಯಾಂಗ್ ಅಂದರ್
ದಾವಣಗೆರೆ , ಜನವರಿ 29: ಖೋಟಾ ನೋಟು ಚಲಾವಣೆ ಮಾಡಲು ವಿವಿಧ ಗ್ರಾಮಗಳಲ್ಲಿ ನಡೆಯುವ ಜಾತ್ರೆಗಳು ಹಾಗೂ ಸಂತೆಗಳಲ್ಲಿ ಗ್ರಾಮೀಣ ಭಾಗದ ಮುಗ್ಧ ಜನರು ಹಾಗೂ ವೃದ್ಧರಿಗೆ ನೋಟು ಚಲಾವಣೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಬಂಧಿಸುವಲ್ಲಿ ದಾವಣಗೆರೆ ಪೊಲೀಸರು ಯಶ್ವಸಿಯಾಗಿದ್ದಾರೆ.
ಇದೇ ಜನವರಿ 26 ರಂದು ದಾವಣಗೆರೆಯ ಲೋಲೇಶ್ವರ ಜಾತ್ರೆಯ ಸಮಯದಲ್ಲಿ ಚಲಾವಣೆ ಮಾಡುತ್ತಿದ್ದ ಸಂದರ್ಭ ಸಾರ್ವಜನಿಕರಾದ ಮಲ್ಲಿಕಾರ್ಜುನ , ಕುರುವಪ್ಪ ಹಾಗೂ ಸೋಮಶೇಖರಪ್ಪ ಎನ್ನುವರು ಆರೋಪಿ ಹನುಮಂತಪ್ಪನನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದರು.
ಆರೋಪಿಗಳು ಹೂವಿನ ಹಡಗಲಿ, ಕೊಟ್ಟೂರು ಹಾಗೂ ಸುತ್ತಮುತ್ತಲ ಪ್ರದೇಶಗಳ ಜಾತ್ರೆ ಹಾಗೂ ಸಂತೆಗಳಲ್ಲಿ ಖೋಟಾ ನೋಟುಗಳನ್ನು ಚಲಾವಣೆ ಆಗಿರುವ ಅನುಮಾನವಿದೆ. ಕುರಿ ಹಾಗೂ ಜಾನುವಾರುಗಳನ್ನು ಖರೀದಿ ಮಾಡಿ ನಂತರ ಖೋಟಾ ನೋಟುಗಳನ್ನು ನೀಡುತ್ತಿದ್ದರು. ಆರೋಪಿಗಳು ನಕಲಿ ನೋಟುಗಳನ್ನು ಇಟ್ಟುಕೊಂಡು ವ್ಯಾಪಾರಕ್ಕೆ ಹೋಗುತ್ತಾರೆ, ರೈತರು ಕೇಳಿದ ಬೆಲೆಗೆ ಜಾನುವಾರುಗಳನ್ನು ಕೊಂಡು ನಕಲಿ ನೋಟ್ ಗಳನ್ನು ನೀಡಿ ಹೋಗುತ್ತಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಹನುಮಂತಪ್ಪ, ಪುಟ್ಟಪ್ಪ ಎನ್ನುವವರ ಮೇಲೆ ಖೋಟಾ ನೋಟು ಪ್ರಕರಣಗಳು ದಾಖಲಾಗಿವೆ. ಇನ್ನು ಈ ಗ್ಯಾಂಗ್ ನಲ್ಲಿ ಇನ್ನೂ ಸಾಕಷ್ಟು ಜನರಿದ್ದು ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳು ರೈತರಿಗೆ ನೀಡುವ ನೋಟುಗಳಲ್ಲಿ ಮಹಾತ್ಮ ಗಾಂಧಿ ಚಿತ್ರ ಸರಿಯಾಗಿ ಕಾಣಿಸುವುದಿಲ್ಲ, ಅಲ್ಲದೇ ನೋಟು ತೀರಾ ತೆಳುವಾಗಿ ಇರುತ್ತವೆ. ಹಳ್ಳಿಯ ಮುಗ್ಧ ಜನರನ್ನು ಟಾರ್ಗೆಟ್ ಮಾಡಿ ಹೆಚ್ಚು ಖೋಟಾ ನೋಟುಗಳನ್ನು ಜನರಿಗೆ ನೀಡಿ ಮೋಸ ಮಾಡುತ್ತಿದ್ದರು.

ಇನ್ನು ಮುಂದೆ ರೈತರಿಗೆ ಹಾಗೂ ಮುಗ್ಧ ಜನರು ವ್ಯಾಪಾರ ಮಾಡುವಾಗ ನೋಟುಗಳನ್ನು ಪರಿಶೀಲನೆ ಮಾಡಿ ತೆಗೆದುಕೊಳ್ಳಬೇಕು, ಏನಾದರೂ ಅನುಮಾನಗಳು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ವಿಷಯ ತಿಳಿಸಬೇಕು ಎಂದು ದಾವಣನಗೆರೆ ಜಿಲ್ಲಾ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.












Click it and Unblock the Notifications