ದಾವಣಗೆರೆಯಲ್ಲಿ ಕೊರೊನಾ ಕರ್ತವ್ಯದಲ್ಲಿದ್ದ ಶಿಕ್ಷಣ ಇಲಾಖೆ ಸಿಬ್ಬಂದಿ ಜೂಜಾಟ; ವರದಿ ಕೇಳಿದ ಆಯುಕ್ತ
ದಾವಣಗೆರೆ, ಏಪ್ರಿಲ್ 27: ನಗರದ ಪಿ.ಬಿ.ರಸ್ತೆಯ ಬಿಲಾಲ್ ಕಾಂಪೌಂಡ್ ನಲ್ಲಿ ಶಿಕ್ಷಣ ಇಲಾಖೆ ಸಿಬ್ಬಂದಿ ಜೂಜಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ವರದಿ ನೀಡುವಂತೆ ಆಯುಕ್ತ ಜಗದೀಶ್ ಡಿಡಿಪಿಐ ಪರಮೇಶ್ವರ ಅವರನ್ನು ಕೇಳಿದ್ದಾರೆ.
Recommended Video
ಶನಿವಾರ, ಏಪ್ರಿಲ್ 25ರಂದು ಜೂಜಾಡುತ್ತಿದ್ದ ಸಂದರ್ಭ ದಾಳಿ ನಡೆದಿದ್ದು, ಬಿಇಒ ಉತ್ತರ ವಲಯ ಕಚೇರಿ ಅಧೀಕ್ಷಕ ಎಚ್.ಎಸ್. ಬಸವರಾಜ, ಇದೇ ಕಚೇರಿಯ ಎಸಿಒ ಎಸ್. ಸೋಮಶೇಖರಪ್ಪ, ಪ್ರಥಮ ದರ್ಜೆ ಸಹಾಯಕ ಸುಧಾಕರ, ದ್ವಿತೀಯ ದರ್ಜೆ ಸಹಾಯಕ ಎಸ್.ಕೊಟ್ರೇಶ, ಎಸ್ಡಿಎ ಮಲ್ಲಿಕಾರ್ಜುನ, ಶಿಕ್ಷಕ ಕೆ.ಎಂ. ವೃಷಭೇಂದ್ರಪ್ಪ, ತಾಲೂಕು ಪಂಚಾಯಿತಿ ಕಚೇರಿ ಪ್ರಥಮ ದರ್ಜೆ ಸಹಾಯಕ ಎಲ್.ಆನಂದ, ಚಾಲಕ ಕೆ. ಹರ್ಷವರ್ಧನ ಬಂಧಿತರಾಗಿದ್ದರು.
ಜೂಜಾಟಕ್ಕೆ ಬಳಸಿದ 38,150 ರೂ. ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ವಿಷಯ ತಿಳಿದ ಆಯುಕ್ತ ಜಗದೀಶ್ ಪ್ರಕರಣ ಸಂಬಂಧ ಸಂಪೂರ್ಣ ವರದಿ ನೀಡಬೇಕೆಂದು ಸೂಚಿಸಿದ್ದಾರೆ. ಆಯುಕ್ತರ ಆದೇಶಾನುಸಾರ ಡಿಡಿಪಿಐ ಪರಮೇಶ್ವರ ಕೆಟಿಜೆ ನಗರ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದಾರೆ. ಈ ಮಾಹಿತಿ ಬಂದ ಮೇಲೆ ಅದನ್ನು ಆಯುಕ್ತರಿಗೆ ಕಳುಹಿಸಿ ಅವರ ಆದೇಶನುಸಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಕೋವಿಡ್-19 ಕರ್ತವ್ಯಕ್ಕೆ ನೇಮಿಸಲಾಗಿತ್ತು: ಕೋವಿಡ್-19 ಸಂಬಂಧ ದಾವಣಗೆರೆ ಉತ್ತರಕ್ಕೆ ಅಧೀಕ್ಷಕ ಬಸವರಾಜ್, ದ್ವೀತಿಯ ದರ್ಜೆ ಸಹಾಯಕ ಮಲ್ಲಿಕಾರ್ಜುನ್ ಮಠದ್ ಅವರನ್ನು ನೇಮಕ ಮಾಡಲಾಗಿತ್ತು. ಇವರು ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ/ದಾಖಲಾಗುವ ರೋಗಿಗಳ ಮಾಹಿತಿ ಪಡೆಯಬೇಕಾಗಿತ್ತು. ಉತ್ತರವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರಥಮ ದರ್ಜೆ ಸಹಾಯಕ ಸುಧಾಕರ್, ದ್ವೀತಿಯ ದರ್ಜೆ ಸಹಾಯಕ ಕೊಟ್ರೇಶ್ ರನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ವಾರ್ ರೂಂಗೆ ಹೆಚ್ಚುವರಿ ಸಿಬ್ಬಂದಿಗಳಾಗಿ ನಿಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ.
ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಕಲಂ 269, 87 ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.












Click it and Unblock the Notifications