"ದೊರೆಸ್ವಾಮಿಯವರೇನು ದೇವತಾ ಮನುಷ್ಯರಾ ಕ್ಷಮೆ ಕೇಳಲು?"; ರೇಣುಕಾಚಾರ್ಯ
ದಾವಣಗೆರೆ, ಮಾರ್ಚ್ 5: "ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರು ಮಾಡಬಾರದ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ನವರು ದೇಶವನ್ನು ಲೂಟಿ ಹೊಡೆದಿದ್ದಾರೆ. ಆದರೆ ಈಗ ಸತ್ಯಹರಿಶ್ಚಂದ್ರರಂತೆ ಮಾತನಾಡುತ್ತಾರೆ" ಎಂದು ಎಂದು ಕಾಂಗ್ರೆಸ್ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ನಿನ್ನೆ ಮಾತನಾಡಿದ ಅವರು, "ಸ್ವತಂತ್ರ ಹೋರಾಟಗಾರ ದೊರೆಸ್ವಾಮಿ ದೇವತಾ ಮನುಷ್ಯರಾ... ಪ್ರಧಾನಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಬಹುದಾ? ನಾವು ಕ್ಷಮೆ ಕೇಳುವಂತೆ ಒತ್ತಾಯಿಸಿ ಪ್ರತಿಪಕ್ಷದವ್ರು ಅಧಿವೇಶನಕ್ಕೆ ಬಹಿಷ್ಕಾರ ಮಾಡಿದ್ದು ತಪ್ಪು. ಸದನ ರಾಜ್ಯದ ಜನರ ಸ್ವತ್ತು. ಇಲ್ಲಿ ಪ್ರತಿಪಕ್ಷದವರು ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಬಹುದಿತ್ತು. ಅದನ್ನು ಬಿಟ್ಟು ಸದನ ಬಹಿಷ್ಕಾರ ಮಾಡಿದ್ದು ತಪ್ಪು" ಎಂದು ಹೇಳಿದರು.
"ದೊರೆಸ್ವಾಮಿ ಪ್ರಧಾನಿಯವರಿಗೆ ಅಪಮಾನ ಮಾಡಿದ್ದು ತಪ್ಪಲ್ಲವೇ? ಇದೊಂದೆ ಅಲ್ಲ, ಅಂಬೇಡ್ಕರ್ ರನ್ನು ಸೋಲಿಸಿ ಅಪಮಾನ ಮಾಡಿದ್ದು ಇದೇ ಕಾಂಗ್ರೆಸ್ನವರು. ಈಗ ಸಂವಿಧಾನದ ಹೆಸರಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳ ಯಾಕೆ ಕ್ಷಮೆ ಕೇಳಬೇಕು? ದೊರೆಸ್ವಾಮಿ ಏನು ದೇವತಾ ಮಾನವರಾ? ಪಾಕ್ ಪರ ಘೋಷಣೆ ಮಾಡೋರಿಗೆ ಬೆಂಬಲ ಕೊಡುತ್ತಾರೆ, ದೇಶದ ಪ್ರಧಾನಿ ಟೀಕೆ ಮಾಡ್ತಾರೆ, ಇದನ್ನೆಲ್ಲಾ ನಾವು ಸಹಿಸಲು ಆಗುತ್ತಾ? ಸುಖಾಸುಮ್ಮನೆ ಅಧಿವೇಶನವನ್ನು ಹಾಳು ಮಾಡಿದರು.

ಅಧಿವೇಶನದಲ್ಲಿ ದಿನಕ್ಕೆ ಎಷ್ಟು ಹಣ ಖರ್ಚಾಗುತ್ತೆ, ಆ ಹಣ ಜನಸಾಮಾನ್ಯರ ತೆರಿಗೆಯಿಂದ ಬಂದಿದ್ದು, ಅಲ್ಲದೆ ಕಾಂಗ್ರೆಸ್ಗೆ ದೇಶದಲ್ಲಿ, ರಾಜ್ಯದಲ್ಲಿ ಅಡ್ರೆಸ್ ಇಲ್ಲದಂತಾಗಿದೆ.. ಇನ್ನೂ ನಿಮಗೆ ಬುದ್ಧಿ ಬಂದಿಲ್ಲ. ಪ್ರತಿ ಪಕ್ಷವಾಗಿ ನೀವು ನಮಗೆ ಸಹಕಾರ ನೀಡಬೇಕು, ಆಡಳಿತ ಪಕ್ಷದಷ್ಟೇ ಪ್ರತಿಪಕ್ಷಗಳಿಗೂ ಗೌರವವಿದೆ. ಅದನ್ನು ಮರೆತು ಅಧಿವೇಶನ ಬಹಿಷ್ಕಾರ ಮಾಡಿದ್ದು, ಈ ದೇಶದ ಜನರಿಗೆ, ರೈತರಿಗೆ ಅಪಮಾನ ಮಾಡಿದಂತೆ" ಎಂದು ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ಆಕ್ರೋಶಗೊಂಡರು.












Click it and Unblock the Notifications