ಮೈಸೂರಿನ ಗ್ಯಾಂಗ್ರೇಪ್ ಬಗ್ಗೆ ಗೊತ್ತಿಲ್ಲ; ಬಿಜೆಪಿ ಸಂಸದ
ದಾವಣಗೆರೆ, ಆಗಸ್ಟ್ 27; ಮೈಸೂರಿನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡಾಫೆ ಹೇಳಿಕೆ ನೀಡಿರುವ ದಾವಣಗೆರೆ ಬಿಜೆಪಿ ಸಂಸದ ಜಿ. ಎಂ. ಸಿದ್ದೇಶ್ವರ್, "ಮೈಸೂರು ರೇಪ್ ಬಗ್ಗೆ ಕೇಳಬಾರದು. ಬೇರೆ ಇದ್ದರೆ ಕೇಳು'' ಎಂದು ಹೇಳಿದ್ದಾರೆ.
ಶುಕ್ರವಾರ ಬಿಎಸ್ಎನ್ಎಲ್ ಕಚೇರಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈ ರೀತಿಯಾಗಿ ಪ್ರತಿಕ್ರಿಯಿಸುವ ಮೂಲಕ ಮತ್ತೊಮ್ಮೆ ಸಂಸದರು ಯಟವಟ್ಟು ಮಾಡಿದ್ದಾರೆ. ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಕೇಳಿದಾಗಲೂ ಉಡಾಫೆ ಉತ್ತರವನ್ನು ಸಂಸದರು ಕೊಟ್ಟಿದ್ದರು.
"ನಾನು ಬೆಳಿಗ್ಗೆಯಿಂದ ಸಂಜೆಯವರೆಗೆ ಬ್ಯುಸಿ ಇರುತ್ತೇನೆ. ರಾತ್ರಿ 11 ಗಂಟೆಗೆ ಆಗುತ್ತೆ ಮನೆಗೆ ಬರಲು. ಪೇಪರ್ ಓದೋಕೆ ಆಗೋಲ್ಲ. ಬೇರೆ ವಿಚಾರದ ಬಗ್ಗೆ ಏನು ಗೊತ್ತಾಗಲ್ಲ. ನೀವು ಏನೇನೋ ಬಿತ್ತರಿಸುತ್ತೀರಾ. ಅದನ್ನೆಲ್ಲಾ ನೋಡಲು ಆಗುತ್ತಾ?. ಯಾರಾದರೂ ಹೇಳಿದರೆ ಕೇಳುತ್ತೇನೆ ಅಷ್ಟೇ" ಎಂದು ಸಂಸದರು ಹೇಳಿದರು.

"ಜಿಲ್ಲೆಗೆ ಸಂಬಂಧಿಸಿದಂತೆ ಏನಿದ್ದರೂ ಕೇಳಿ. ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಹೇಳುತ್ತೇನೆ. ಸಮಸ್ಯೆ ಇದ್ದರೆ ಕ್ರಮ ತೆಗೆದುಕೊಳ್ಳಲು ತಿಳಿಸುವೆ. ಅದನ್ನು ಬಿಟ್ಟು ಎಲ್ಲೆಲ್ಲಿಯದ್ದು ಕೇಳಿದರೆ ಹೇಗೆ?" ಎಂದು ಪ್ರಶ್ನಿಸಿದರು.
"ಮೈಸೂರಿನಲ್ಲಿ ರೇಪ್ ಆದ್ರೆ ನನಗ್ಯಾಕೆ ಕೇಳ್ತೀರಾ. ನಾನು ಏನನ್ನೂ ನೋಡಿಲ್ಲ. ಟಿವಿಯವರು ಫ್ಲ್ಯಾಷ್ ನ್ಯೂಸ್ ಕೊಟ್ಟಾಗ ಯಾರಾದರೂ ಹೇಳಿದರಷ್ಟೇ ಗೊತ್ತಾಗುತ್ತದೆ. ಟಿವಿ ನೋಡಲು ನನಗೆ ಪುರುಸೊತ್ತಿಲ್ಲ. ಇನ್ನು ಬೇರೆ ಜಿಲ್ಲೆಗಳ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಲಿ?. ಏನಿದ್ದರೂ ಇಲ್ಲಿಯದ್ದು ಕೇಳಿ" ಎಂದು ಹೇಳಿದರು.
"ಅಡಿಕೆಗೆ ಉತ್ತಮ ಧಾರಣೆ ಬಂದಿದೆ. ಇದೇ ಧಾರಣೆ ಇರಲಿ ಎಂದು ಬೇಡಿಕೊಳ್ಳುತ್ತೇನೆ. ನಾವು ಕೇಂದ್ರದ ಹಣಕಾಸು, ಗೃಹ ಸಚಿವರು, ರಕ್ಷಣಾ ಸಚಿವರನ್ನು ಭೇಟಿ ಮಾಡಿ ಅಡಿಕೆ ಆಮದು ತಡೆಯಬೇಕೆಂಬ ಬಗ್ಗೆ ಮನವಿ ಮಾಡಿದ್ದೆವು. ಈಗ ಗಡಿ ಭಾಗದಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಬಿಗಿ ಮಾಡಲಾಗಿದೆ. ಇದರಿಂದಾಗಿ ಕಡಿಮೆ ಆಗಿದೆ. ಮಲೇಷಿಯಾ, ಸಿಂಗಾಪುರ ಸೇರಿದಂತೆ ಬೇರೆ ಬೇರೆ ಕಡೆಯಿಂದ ಬರುತ್ತಿದ್ದ ಅಡಿಕೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಧಾರಣೆ ಹೆಚ್ಚಾಗಿದೆ" ಎಂದು ಸಿದ್ದೇಶ್ವರ್ ವಿಶ್ಲೇಷಿಸಿದರು.
ಇನ್ನು ಪೆಟ್ರೋಲ್ ದರ ಹೆಚ್ಚಳದ ಬಗ್ಗೆ ಕೇಳಿದಾಗಲೂ ಸೈಕಲ್ ನಲ್ಲಿ ಓಡಾಡಿ. ಪೆಟ್ರೋಲ್, ಡೀಸೆಲ್ ದರ ಹೆಚ್ಚಾದರೆ ನಾವೇನು ಮಾಡಲಾಗುತ್ತದೆ?. ಮುಂಬರುವ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೈಲ ಬೆಲೆ ಕಡಿಮೆಗೊಳಿಸುತ್ತಾರೆ. ದರ ಹೆಚ್ಚಾದರೆ ಏನು ಮಾಡಲಾಗುತ್ತದೆ.? ನಿಮಗೆ ಯಾರು ವಾಹನದಲ್ಲಿ ಓಡಾಡಿ ಎಂದು ಹೇಳಿದ್ದರು? ಹೀಗೆ ಹೇಳಿಕೆಗಳನ್ನು ಕೊಟ್ಟು ಸಂಸದರು ಟೀಕೆಗೆ ಒಳಗಾಗಿದ್ದರು.
ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ದಾವಣಗೆರೆ ಸಂಸದರ ವಿರುದ್ಧ ಟೀಕಾಪ್ರಹಾರ ಮಾಡಿದ್ದರು. ಈಗ ಮತ್ತೊಮ್ಮೆ ಅದೇ ರೀತಿಯಲ್ಲಿ ಹೇಳಿಕೆ ನೀಡುವ ಮೂಲಕ ವಿಪಕ್ಷಗಳಿಗೆ ಸಂಸದರು ಆಹಾರವಾಗಿದ್ದಾರೆ.
ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿ ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸುದ್ದಿಯಾಗಿದೆ. ಅದರಲ್ಲಿಯೂ ಕಾಂಗ್ರೆಸ್ ಪಕ್ಷವಂತೂ ಗೃಹ ಸಚಿವರ ಮೇಲೆ ಮುಗಿಬೀಳುತ್ತಿದೆ. ಜನರ ಹೋರಾಟವೂ ಜೋರಾಗಿದೆ.
ಬಹುಚರ್ಚಿತ ವಿಷಯದ ಬಗ್ಗೆ ಸಂಸದ ಸಿದ್ದೇಶ್ವರ್ ಬೇಜವಾಬ್ದಾರಿಯಾಗಿ ಮಾತನಾಡಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಇಂಥ ಸೂಕ್ಷ್ಮ ವಿಚಾರದ ಬಗ್ಗೆ ಬೇಕಾಬಿಟ್ಟಿಯಾಗಿ ಮಾತನಾಡಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ.












Click it and Unblock the Notifications