"ಬಡವರಿಗೆ ನೀಡುವ ಆಹಾರ ಕಿಟ್ ನಲ್ಲೂ ತಾರತಮ್ಯ ಏಕೆ?"
ದಾವಣಗೆರೆ, ಮೇ 25: ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡ ಕಾರ್ಮಿಕರು ಕೆಲಸವಿಲ್ಲದೆ, ಹಣ ಇಲ್ಲದೇ ಜೀವನ ನಡೆಸಲು ಕಷ್ಟವಾಗಿದ್ದು, ಕಾರ್ಮಿಕರಿಗೆ ಆಹಾರಧಾನ್ಯ ಕಿಟ್ ವಿತರಿಸಿ, ಸರ್ಕಾರದಿಂದ ಘೋಷಣೆ ಮಾಡಿರುವ ಪರಿಹಾರ ಧನವನ್ನು ಒದಗಿಸಿಕೊಡುವಂತೆ ಜಿಲ್ಲಾ ಆಸರೆ ಕಟ್ಟಡ ಅಸಂಘಟಿತ ಕಾರ್ಮಿಕರ ಸಂಘ, ಕಾರ್ಮಿಕ ಇಲಾಖೆಗೆ ಹಾಗೂ ಕಾರ್ಮಿಕ ಸಚಿವರಿಗೆ ಆಗ್ರಹಿಸಿದೆ.
Recommended Video
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ. ಚಂದ್ರಶೇಖರ್, ಜಿಲ್ಲೆಯಲ್ಲಿ ಸುಮಾರು ನಾಲ್ಕು ಸಾವಿರಕ್ಕಿಂತ ಅಧಿಕ ಕಟ್ಟಡ ಕಾರ್ಮಿಕರಿದ್ದು, ಬಡ ಕಾರ್ಮಿಕರು ಕೆಲಸವಿಲ್ಲದೇ ತೊಂದರೆಗೀಡಾಗಿದ್ದಾರೆ. ಬಡಜನರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆಯನ್ನು ಇಲ್ಲಿನ ದಕ್ಷಿಣ ಮತ್ತು ಉತ್ತರದ ಶಾಸಕರಿಬ್ಬರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಕಾರ್ಮಿಕರಿಗೆ ತಲುಪಬೇಕಾದ ಆಹಾರ ಧಾನ್ಯಗಳ ಕಿಟ್ ವಿತರಣೆಯಲ್ಲಿ ಬಿಜೆಪಿ ಕಾರ್ಯಕರ್ತರು ತಾರತಮ್ಯ ಮಾಡಿ ವಿತರಿಸುತ್ತಿದ್ದಾರೆ. ಇಲ್ಲಿನ ಉತ್ತರ ಶಾಸಕರು ಖಾಸಗಿ ಶಾಲೆಯೊಂದರಲ್ಲಿ ಆಹಾರ ಕಿಟ್ ಗಳನ್ನು ಇರಿಸಿಕೊಂಡಿದ್ದಾರೆ. ಕಾರ್ಯಕರ್ತರಿಗೆ ಕಿಟ್ ಕೊಡುವಂತೆ ಕೇಳಿದರೆ ಕಾರ್ಮಿಕ ಇಲಾಖೆ ನೀಡುವ ಕಾರ್ಡಿನ ನೆಪವೊಡ್ಡಿ ವಾಪಸ್ ಕಳಿಸುತ್ತಾರೆ. ಬಡವರಿಗೆ ಕೊಡುವ ಆಹಾರದಲ್ಲೂ ಹೀಗೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಬಡಕಾರ್ಮಿಕರಿಗೆ ಆಹಾರಧಾನ್ಯಗಳ ಕಿಟ್ ಗಳನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು. ಕಾರ್ಮಿಕ ಇಲಾಖೆಯು ಸರ್ಕಾರ ಘೋಷಿಸಿರುವ ಪರಿಹಾರ ಮೊತ್ತವನ್ನು ಕೂಡಲೇ ನ್ಯಾಯಯುತವಾಗಿ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಪರಮೇಶ್ವರಪ್ಪ, ಅಬ್ಧುಲ್, ಸಿದ್ದೇಶ್ ಮತ್ತಿತರರು ಇದ್ದರು.












Click it and Unblock the Notifications