ದಾವಣಗೆರೆ ಸರ್ಕಾರಿ ಕಾಲೇಜು ಅವಸ್ಥೆ, ಬಯಲಲ್ಲಿ ಟೆಂಟ್ ಕೆಳಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು!
ದಾವಣಗೆರೆ, ನವೆಂಬರ್ 24: ಸರ್ಕಾರಿ ಕಾಲೇಜುಗಳ ದುರವಸ್ಥೆ ಯಾವ ಹಂತ ಮುಟ್ಟಿದೆಯೆಂದರೆ ಬಯಲಿನಲ್ಲಿ ಟೆಂಟ್ ಕೆಳಗೆ ಊಟದ ಟೇಬಲ್ ಮೇಲೆ ಕೂತು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ!
ಹೌದು, ದಾವಣಗೆರೆ ಹರಪ್ಪನಹಳ್ಳಿಯ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸೆಮಿಸ್ಟರ್ ಪರೀಕ್ಷೆಗಳನ್ನು ಬಯಲಿನಲ್ಲಿ, ಟೆಂಟ್ ಕೆಳಗೆ ಕೂತು ಬರೆದಿದ್ದಾರೆ. ಅದೂ ರಾಜ್ಯದಾದ್ಯಂತ ಮಳೆ ಬರುವ ವಾತಾವರಣ ಇರುವಾಗ.
ಹರಪ್ಪನಹಳ್ಳಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಇರುವುದು 1536 ವಿದ್ಯಾರ್ಥಿಗಳು ಆದರೆ ಇವರಿಗೆ ಇರುವುದು ಕೇವಲ 6 ಕೊಠಡಿಗಳಷ್ಟೆ! ಇಷ್ಟೇ ಕೊಠಡಿಯಲ್ಲಿ ಪರೀಕ್ಷೆ ಬರೆಸುವುದು ಹೇಗೆ? ಹಾಗಾಗಿ ಕಾಲೇಜಿನ ಪ್ರಾಂಶುಪಾಲರು ಕಾಲೇಜಿನ ಕಾರಿಡಾರ್ನಲ್ಲಿ, ಆಡದ ಮೈದಾನದಲ್ಲಿ ದೊಡ್ಡ ಶಾಮಿಯಾನ ಹಾಕಿ ಅದರ ಕೆಳಗೆ ಪರೀಕ್ಷೆ ಬರೆಸಿದ್ದಾರೆ.

ಕೊಠಡಿ ಬಿಟ್ಟುಕೊಡಲಿಲ್ಲ ಖಾಸಗಿ ಕಾಲೇಜು
ವಿದ್ಯಾರ್ಥಿಗಳಿಗೆ ಪರೀಕ್ಷೆ ಇದೆ, ನಿಮ್ಮ ಕೊಠಡಿ ಬಿಟ್ಟು ಕೊಡಿ ಎಂದು ಹಲವು ಖಾಸಗಿ ಕಾಲೇಜುಗಳಿಗೆ, ಶಾಲೆಗಳಿಗೆ ಹರಪ್ಪನಹಳ್ಳಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಮನವಿ ಮಾಡಿದ್ದಾರೆ ಆದರೆ ಯಾರೂ ಒಪ್ಪಿಲ್ಲ. ಮದುವೆ ಛತ್ರ ಸಹ ಬುಕ್ ಮಾಡಲು ಹೋಗಿದ್ದಾರೆ ಆದರೆ ಅದೂ ಮೊದಲೇ ಬುಕ್ ಆಗಿಬಿಟ್ಟಿಂತೆ. ವಿಧಿ ಇಲ್ಲದೆ ಬಯಲಲ್ಲಿ ಪರೀಕ್ಷೆ ಬರೆಸಿದ್ದಾರೆ.

ಗದ್ಗದಿತರಾಗುತ್ತಾರೆ ಪ್ರಾಂಶುಪಾಲ
ಮಳೆ ಬಂದರೆ ಏನು ಮಾಡುತ್ತೀರಿ ಎಂದರೆ, ಏನು ಮಾಡುವುದು, ಮಳೆ ಬಾರದೇ ಇರಲಪ್ಪ ಎಂದು ದೇವರನ್ನು ಕೇಳಿಕೊಂಡಿದ್ದೇವೆ ಎಂದು ಅಸಹಯಾಕತೆಯಿಂದ ಗದ್ಗದಿತರಾಗಿ ನುಡಿಯುತ್ತಾರೆ ಪ್ರಾಂಶುಪಾಲ ನಾಗರಾಜು. ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಲ್ಲ ಎಂದು ಗೊಣಗುವ ಸರ್ಕಾರ ಇರುವ ವಿದ್ಯಾರ್ಥಿಗಳಿಗೆ ಈ ರೀತಿಯ 'ಸೌಕರ್ಯ'ಗಳನ್ನು ನೀಡಿದೆ.

ಶಿಪ್ಟ್ಗಳಲ್ಲಿ ಪಾಠ
ಇರುವ ಆರು ಕೊಠಡಿಗಳಲ್ಲಿ 1536 ವಿದ್ಯಾರ್ಥಿಗಳಿಗೆ ಪಾಠ ಹೇಳುವುದೂ ಸಹ ಕಷ್ಟವಾಗುತ್ತಿದೆ, ಹಾಗಾಗಿ ಶಿಫ್ಟ್ಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ ಇಲ್ಲಿನ ಉಪನ್ಯಾಸಕರು. ಬಹು ವರ್ಷಗಳಿಂದ ಇಲ್ಲಿ ಇದೇ ಪರಿಸ್ಥಿತಿ ಇದೆ ಆದರೆ ಉನ್ನತ ಶಿಕ್ಷಣ ಇಲಾಖೆಯಾಗಲಿ, ಯಾವುದೇ ಜನಪ್ರತಿನಿಧಿಗಳಾಗಲಿ ಇತ್ತ ಕಡೆ ಕಣ್ಣೂ ಸಹ ಹಾಯಿಸಿಲ್ಲ.

ಭರವಸೆ ನೀಡುವ ಶಾಸಕರು
ಆಗೊಮ್ಮೆ ಈಗೊಮ್ಮೆ ಕಾಲೇಜು ಕಾರ್ಯಕ್ರಮಗಳಿಗೆ ಬರುವ ಶಾಸಕರು, ಸಂಸದರು ಕೊಠಡಿಗಳನ್ನು ಕಟ್ಟಿಕೊಡುವುದಾಗಿ ಹೇಳಿ ಹೋಗುತ್ತಾರೆ ಆದರೆ ಆ ನಂತರ ಮರೆತು ಹೋಗುತ್ತಾರೆ ಎನ್ನುತ್ತಾರೆ ಸ್ಥಳೀಯರು.












Click it and Unblock the Notifications