ದಾವಣಗೆರೆ ಪಾಲಿಕೆ ಚುನಾವಣೆಯಲ್ಲಿ ಬೋಗಸ್ ದಾಖಲೆ; ಅಧಿಕಾರಿಗಳ ಅಮಾನತು
ದಾವಣಗೆರೆ, ಫೆಬ್ರವರಿ 25: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಎಂಎಲ್ಸಿಗಳ ಸೇರ್ಪಡೆಯಲ್ಲಿ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಪಾಲಿಕೆಯ ಮತದಾರ ನೋಂದಣಾಧಿಕಾರಿ ಕೆ.ನಾಗರಾಜ್, ಉಪ ನೋಂದಣಾಧಿಕಾರಿ ಜಯಣ್ಣ ಕೆ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಅಮಾನತು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬೇರೆ ಅಧಿಕಾರಿಗಳನ್ನು ಬಲಿಪಶು ಮಾಡಿದ್ದಾರೆ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೆ.19ರಂದು ನಡೆದ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬೋಗಸ್ ದಾಖಲೆಗಳನ್ನು ನೀಡಿ ಎಂಎಲ್ಸಿಗಳು ಸೇರ್ಪಡೆಯಾಗಿದ್ದರು ಎನ್ನುವ ಆರೋಪ ಕೇಳಿ ಬಂದಿದ್ದು, ವಾಮಮಾರ್ಗದಲ್ಲಿ ಬಿಜೆಪಿ ಪಾಲಿಕೆ ಅಧಿಕಾರವನ್ನು ಹಿಡಿಯಲು ಈ ರೀತಿಯ ಕುತಂತ್ರ ಬಳಸುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಇದಕ್ಕೆ ಐಎಎಸ್ ಅಧಿಕಾರಿಯಾದ ಹರ್ಷಗುಪ್ತ ಅವರನ್ನು ಕೂಡ ಚುನಾವಣೆಯ ವೀಕ್ಷಕರಾಗಿ ನೇಮಿಸಿದ್ದು, ಬೋಗಸ್ ದಾಖಲೆ ನೀಡಿದ ಎಂಎಲ್ಸಿಗಳ ಮನೆಗಳನ್ನು ಪರಿಶೀಲನೆ ಮಾಡಿ ವರದಿ ನೀಡಿದ್ದಾರೆ.

ಇನ್ನು ಕಾಂಗ್ರೆಸ್ ಮತದಾರರ ಪಟ್ಟಿಯನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿತ್ತು. ಚುನಾವಣೆ ಇರುವ ಕಾರಣ ಕೋರ್ಟ್ ಮಧ್ಯ ಪ್ರವೇಶ ಮಾಡುವುದಿಲ್ಲ, ಮತದಾನ ಮಾಡಬೇಕೋ ಬೇಡವೋ ಎನ್ನುವುದು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ತೀರ್ಪನ್ನು ಮುಂದೂಡಿತ್ತು.
ಮತದಾನ ಮಾಡಲು ಜಿಲ್ಲಾಧಿಕಾರಿಗಳು ಅವಕಾಶ ಕೊಟ್ಟಿದ್ದು ಇದಕ್ಕೆ ಕಾಂಗ್ರೆಸ್ ವಿರೋಧ ಕೂಡ ಮಾಡಿತ್ತು, ಆದರೆ ಈಗ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ನೀಡಿದ್ದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ನಡೆಯ ಮೇಲೆ ಬೇಸರಗೊಂಡಿದ್ದು, ತಾವು ತಪ್ಪಿಸಿಕೊಳ್ಳಲು ಇಬ್ಬರು ಅಧಿಕಾರಿಗಳನ್ನು ಬಲಿಪಶು ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.












Click it and Unblock the Notifications