ಬಿಜೆಪಿ ಭಿನ್ನಮತೀಯರಿಗೆ ಕಟ್ಟಕಡೆಯ ವಾರ್ನಿಂಗ್ ಕೊಟ್ಟ ಈಶ್ವರಪ್ಪ
ದಾವಣಗೆರೆ , ನವೆಂಬರ್ 03: ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಶ್ರೀಮತಿ ಉಮಾ ಪ್ರಕಾಶ್ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ 32ನೇ ವಾರ್ಡಿನಲ್ಲಿ ಕಣಕ್ಕಿಳಿಯುವ ಮೂಲಕ ದಾವಣಗೆರೆ ಬಿಜೆಪಿಯಲ್ಲಿ ಬಂಡಾಯ ಜಾರಿಯಲ್ಲಿದೆ ಎಂದು ಸಾರಿದ್ದಾರೆ. ಈ ನಡುವೆ ಭಿನ್ನಮತೀಯರಿಗೆ ಸಚಿವ ಕೆಎಸ್ ಈಶ್ವರಪ್ಪ ಅವರು ಕೊನೆ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ದಿಸಲು ಬಿಜೆಪಿ ಪಕ್ಷದಿಂದ ಅಧಿಕೃತವಾಗಿ 'ಬಿ' ಫಾರ್ಮ ಪಡೆದು ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳನ್ನು ಹೊರತು ಪಡಿಸಿ ಬಿಜೆಪಿ ಪಕ್ಷದಿಂದ ನಾಮ ಪತ್ರ ಸಲ್ಲಿಸಿರುವ ಇತರೆ ಅಭ್ಯರ್ಥಿಗಳು ಕೂಡಲೇ ತಮ್ಮ ನಾಮಪತ್ರಗಳನ್ನು ಹಿಂಪಡೆಯಬೇಕೇಂದು ಈ ಮೂಲಕ ಸೂಚಿಸಲಾಗುತ್ತಿದೆ. ಈ ಕೂಡಲೇ ತಮ್ಮ ನಾಮಪತ್ರವನ್ನು ಹಿಂಪಡೆಯದಿದ್ದರೆ, ತಮ್ಮನ್ನು ಪಕ್ಷದಿಂದ ಉಚ್ಚಾಟಿಸಲಾಗುವುದೆಂದು ಈ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ.
ಬಿಜೆಪಿ ಹಿರಿಯ ಮುಖಂಡ ನ್ಯಾಯವಾದಿ ಎ.ವಿ. ಪ್ರಕಾಶ್ ಅವರ ಧರ್ಮಪತ್ನಿ. 32ನೇ ವಾರ್ಡಿನಲ್ಲಿ ಒಂದೇ ಮನೆಯಿಂದ ಎರಡು ಪಕ್ಷಗಳಿಂದ ಸ್ಪರ್ಧೆ ಮಾಡಲಾಗಿದೆ. ಕಾಂಗ್ರೆಸ್ಸಿನಿಂದ ಅನ್ನಪೂರ್ಣ ಬಸವರಾಜ್ ಪೂಜಾರಿ ಟಿಕೆಟ್ ಪಡೆದಿದ್ದರೆ, ಶ್ರೀಮತಿ ರೇಖಾ ಶ್ರೀನಿವಾಸ್ ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದೇ ರೀತಿ ಮಹಾನಗರ ಪಾಲಿಕೆ ಚುನಾವಣೆಗೆ ಪಾಲಿಕೆಯ ಮಾಜಿ ಮಹಾಪೌರರಾದ ಶ್ರೀಮತಿ ಶೋಭಾ ಶಿವಾನಂದಪ್ಪ ಪಲ್ಲಾಗಟ್ಟೆ ಅವರ ಪುತ್ರ ಚಂದನ್ ಪಲ್ಲಾಗಟ್ಟೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ 38ನೇ ವಾರ್ಡಿಗೆ ಸ್ಪರ್ಧಿಸಿದ್ದಾರೆ.

ಕಾಂಗ್ರೆಸ್ ಟಿಕೆಟ್ ಗಾಗಿ ಕೊನೆ ಕ್ಷಣದವರೆಗೂ ಪ್ರಯತ್ನ ನಡೆಸಿ ಚಂದನ್, ವರಿಷ್ಠರು ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 8ನೇ ವಾರ್ಡಿಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ವಕೀಲರಾದ ಶ್ರೀಮತಿ ನಳಿನ ನರೇಂದ್ರ ಪವಾರ್ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ನಳಿನ, ನಗರಸಭೆ ಮಾಜಿ ಸದಸ್ಯರಾಗಿದ್ದ ದಿ. ನರೇಂದ್ರರಾವ್ ಪವಾರ್ ಅವರ ಧರ್ಮಪತ್ನಿ.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರಾಜಶೇಖರ್ ಕೂಡಾ ಬಂಡಾಯವೆದ್ದಿದ್ದಾರೆ. ತಾವು 33ನೇ ವಾರ್ಡಿಗೆ ಕೇಳಿದ್ದ ಟಿಕೆಟ್ ನೀಡದಿರುವ ವರಿಷ್ಠರ ಕ್ರಮವನ್ನು ಖಂಡಿಸಿ ಅವರು ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ.ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಉಮಾ ಪ್ರಕಾಶ್, ಬಿ.ಎಸ್. ಬಸವರಾಜ್, ವೀರೇಶ್ ಚಿಕ್ಕಮಣಿ, ಕಾಂಗ್ರೆಸ್ನಿಂದ ಆರ್. ಶ್ರೀನಿವಾಸ್, ದೇವರಾಜ್ ಸ್ಪರ್ಧಿಸಲಿದ್ದಾರೆ.
ಟಾರ್ಗೆಟ್ ಅಸ್ಲಾಂ ಅವರು ತಮಗೆ 28ನೇ ವಾರ್ಡಿನಲ್ಲಿ ಕಾಂಗ್ರೆಸ್ ಟಿಕೆಟ್ ನೀಡಲು ವರಿಷ್ಠರು ನಿರಾಕರಿಸಿದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿದ್ದಾರೆ.

ಉಪ್ಪಾರ ಜನಾಂಗ ಆಕ್ಷೇಪ: ಮಹಾನಗರ ಪಾಲಿಕೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ರಾಜಕೀಯ ಜನಪ್ರತಿನಿಧಿಗಳು ಭೋವಿ ಹಾಗೂ ಉಪ್ಪಾರ ಜನಾಂಗವನ್ನು ಕಡೆಗಣಿಸಿದ್ದು, ಎರಡೂ ಸಮಾಜದ ಮುಖಂಡರುಗಳು ಸಭೆ ಸೇರಿ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ಮತ ಚಲಾಯಿಸುವುದರ ಕುರಿತು ಚರ್ಚಿಸಿ ತೀರ್ಮಾನ ಮಾಡಲಿದ್ದೇವೆ ಎಂದು ಭೋವಿ ಸಮಾಜದ ಮುಖಂಡ ತಿಮ್ಮಣ್ಣ ಹಾಗೂ ಉಪ್ಪಾರ ಸಮಾಜದ ಮುಖಂಡರಾದ ಹದಡಿ ವೆಂಕಟೇಶ್ ತಿಳಿಸಿದರು.
ಒಟ್ಟು 45 ಕ್ಷೇತ್ರಗಳಲ್ಲಿ 6 ಪರಿಶಿಷ್ಠ ಜಾತಿಯವರಿಗೆ ಅವಕಾಶವಿದ್ದು, ಈ 6 ಮೀಸಲು ಕ್ಷೇತ್ರಗಳಲ್ಲಿ ಯಾವುದೇ ರಾಷ್ಟ್ರೀಯ ಪಕ್ಷ ಭೋವಿ ಸಮಾಜದ ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಿಲ್ಲ. ಕೇವಲ ನೆಪ ಮಾತ್ರಕ್ಕೆ ಅಲ್ಪಸಂಖ್ಯಾತರು ಹೆಚ್ಚಿಗೆ ಇರುವ ಅಹಮದ್ ನಗರ, ಬಾಷಾನಗರದ ಸಾಮಾನ್ಯ ಕ್ಷೇತ್ರದಲ್ಲಿ ಎಸ್ಸಿ ಮಹಿಳೆಗೆ ಬಿಜೆಪಿ ಟಿಕೆಟ್ ನೀಡಿದ್ದು, ಬಲಿಪಶು ಮಾಡಿದೆ ಎಂದು ತಿಮ್ಮಣ್ಣ ಆರೋಪಿಸಿದರು.
ಉಪ್ಪಾರ ಸಮಾಜದ ಮುಖಂಡ ಹದಡಿ ವೆಂಕಟೇಶ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1 ಲಕ್ಷ ಮತದಾರರಿದ್ದು, ಈ ಪೈಕಿ 29,32,33, 35ನೇ ವಾರ್ಡ್ನಲ್ಲಿ ಉಪ್ಪಾರರು ಬಹುಸಂಖ್ಯಾತರಿದ್ದಾರೆ. ಆದರೆ, ಈ ವಾರ್ಡ್ಗಳಲ್ಲಿ ಉಪ್ಪಾರ ಅಭ್ಯರ್ಥಿಗಳಿಗೆ ಯಾವುದೇ ರಾಷ್ಟ್ರೀಯ ಪಕ್ಷದಿಂದ ಟಿಕೆಟ್ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ. ಎಂದರು.
ಬಿಜೆಪಿ ಅವರಿಗೆ ಸ್ವಲ್ಪವಾದರೂ ಶಕ್ತಿ ಇದ್ದರೆ ಸಾಮಾನ್ಯ ಕ್ಷೇತ್ರದಲ್ಲಿ ಅವರು ನಿಂತು ತಾಕತ್ತು ತೋರಿಸಬೇಕು, ಉತ್ತರದಲ್ಲಿ ದೊಡ್ದ ಹುಲಿಗಳಿದ್ದು, ಅವರನ್ನು ಅಲ್ಲಿ ಹಾಕಬಹುದಾಗಿತ್ತು. ಇನ್ನು ಕಾಂಗ್ರೆಸ್ ಪಕ್ಷವಂತೂ ಎಲ್ಲೂ ಟಿಕೆಟ್ ನೀಡಿಲ್ಲ ಎಂದು ದೂರಿದ್ದಾರೆ.












Click it and Unblock the Notifications