ರಾಮ ಮಂದಿರ ನಿರ್ಮಾಣಕ್ಕಾಗಿ ಜ.15ರಿಂದ ದೇಣಿಗೆ ಸಂಗ್ರಹ ಅಭಿಯಾನ
ದಾವಣಗೆರೆ, ಜನೆವರಿ 2: ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷದ್ ವತಿಯಿಂದ ಜ.15 ರಿಂದ ಜಿಲ್ಲೆಯಲ್ಲಿ ದೇಣಿಗೆ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ಜಿಲ್ಲಾ ಪ್ರಮುಖ್ ಕೆ.ಎಸ್.ರಮೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.15 ರಿಂದ ಫೆ.5 ರವರೆಗೆ ನಡೆಯಲಿರುವ ಈ ಅಭಿಯಾನದಲ್ಲಿ ನಮ್ಮ ಐವರು ಕಾರ್ಯಕರ್ತರನ್ನು ಒಳಗೊಂಡ ತಂಡಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ದೇಣಿಗೆ ಸಂಗ್ರಹಿಸಲಿವೆ ಎಂದು ಹೇಳಿದರು.
10 ರೂ., 100 ರೂ. ಮತ್ತು 1 ಸಾವಿರ ರೂ.ಗಳ ಮುದ್ರಿತ ಕೂಪನ್ಗಳ ಮೂಲಕ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲಾಗುವುದು. 2 ಸಾವಿರ ರೂ.ಗಳಿಗೂ ಹೆಚ್ಚು ದೇಣಿಗೆ ನೀಡುವವರಿಗೆ ರಸೀದಿ ನೀಡಲಾಗುವುದು. ಅಲ್ಲದೇ, 20 ಸಾವಿರ ರೂ.ಗಳಿಗೂ ಹೆಚ್ಚು ದೇಣಿಗೆ ನೀಡುವವರು ಚೆಕ್ ಮೂಲಕವೇ ದೇಣಿಗೆ ಸಮರ್ಪಿಸಬೇಕು ಎಂದರು.

ದೇಣಿಗೆ ಸಂಗ್ರಹ ಅಭಿಯಾನದ ಪ್ರಯುಕ್ತ ಜಾಗೃತಿಗಾಗಿ ಜ.3 ರಂದು ಸಾಂಗಿಕ್, ಜ.6 ರಂದು ವಿದ್ಯಾರ್ಥಿಗಳಿಂದ ಮ್ಯಾರಾಥಾನ್, ಜ.11ರಂದು ಬೈಕ್ ಮೆರವಣಿಗೆ ನಡೆಸಲಾಗುವುದು.
ದಾವಣಗೆರೆ ಜಿಲ್ಲೆಯ 843 ಹಳ್ಳಿಗಳ 3.50 ಲಕ್ಷ ಮನೆಗಳ 12.50 ಲಕ್ಷ ರಾಮ ಭಕ್ತರನ್ನು ತಲುಪಿ 50 ಲಕ್ಷ ರೂ. ದೇಣಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಸಹ ಪ್ರಮುಖ್, ಜಿ.ಕೆ.ತಿಪ್ಪೇಸ್ವಾಮಿ, ಸಿ.ಎಸ್.ರಾಜು, ಜಿ.ಎಸ್.ಉಮಾಪತಿ ಹಾಜರಿದ್ದರು.












Click it and Unblock the Notifications