ಆರ್ಎಸ್ಎಸ್ ಚಡ್ಡಿ ಸುಟ್ಟರೆ ಕಾಂಗ್ರೆಸ್ ಸರ್ವನಾಶ : ಬೈರತಿ ಬಸವರಾಜ ಎಚ್ಚರಿಕೆ
ದಾವಣಗೆರೆ, ಜೂನ್ 6 : "ಚಡ್ಡಿ ಸುಟ್ಟರೆ ನಾವೇನೂ ಸುಮ್ಮನೆ ಇರುವುದಕ್ಕಾಗಲ್ಲ. ಚಡ್ಡಿ ಸುಟ್ಟಂಥವರು ಇಂದು ಎಲ್ಲರೂ ನಾಶವಾಗಿ ಹೋಗಿದ್ದಾರೆ. ಹಾಗಾಗಿ ಚಡ್ಡಿ ವಿಷಯಕ್ಕೆ ಕೈಹಾಕಿದರೆ ಬೇರೆ ಕಡೆ ಹೇಗೆ ಆಗಿದ್ದಾರೋ ಇಲ್ಲಿಯೂ ಅದೇ ರೀತಿ ಆಗುತ್ತಾರೆ" ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಕಾಂಗ್ರೆಸ್ ಮುಖಂಡರಿಗೆ ಎಚ್ಚರಿಕೆ ನೀಡಿದರು.
ದಾವಣಗೆರೆ ನಗರದಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಕಾಂಗ್ರೆಸ್ನವರಿಗೆ ಬುದ್ಧಿ ಭ್ರಮಣೆ ಆಗಿದೆ. ಚಡ್ಡಿ ಸುಡುತ್ತೇವೆ ಎನ್ನುವ ಮಾತುಗಳನ್ನು ನೋಡಿದರೆ ಅವರ ಮನಸ್ಥಿತಿ ಏನು ಎಂಬುದು ಅರ್ಥ ಆಗುತ್ತದೆ" ಎಂದು ಕಿಡಿಕಾರಿದರು.
"ಆರ್ಎಸ್ಎಸ್ ಎಂಬ ಸಂಸ್ಥೆ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ದೇಶದ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಚಡ್ಡಿ ಸುಡುತ್ತೇವೆ ಎನ್ನುವ ಮೂಲಕ ಕೀಳುಮಟ್ಟದ ರಾಜಕೀಯ ಮಾಡಲು ಕಾಂಗ್ರೆಸ್ ಹೊರಟಿದೆ. ಇದನ್ನು ನಾನು ಖಂಡಿಸುತ್ತೇನೆ. ಇಂಥ ಹೇಳಿಕೆ ನೀಡುವುದು ಸರಿಯಲ್ಲ" ಎಂದರು.
"ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುದ್ದಿ ಸರಿಯಿಲ್ಲ. ಮುಖ್ಯಮಂತ್ರಿಯಾಗಿದ್ದವರು, ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ರೀತಿಯಾದ ಹೇಳಿಕೆ ನೀಡುವುದು ಎಷ್ಟು ಸಮಂಜಸ. ಅವರಿಗೂ ಒಂದು ರೀತಿಯಲ್ಲಿ ತಲೆಕಟ್ಟಿದೆ ಎಂದೆನಿಸುತ್ತಿದೆ" ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಚುನಾವಣೆಗೆ ಸಿದ್ಧ
"ಯಾವ ಸಂದರ್ಭದಲ್ಲಿ ಚುನಾವಣೆ ಬಂದರೂ ಎದುರಿಸಲು ನಾವು ತಯಾರಿದ್ದೇವೆ. ಶಾಸಕರೆಲ್ಲರೂ ಒಗ್ಗಟ್ಟಾಗಿದ್ದೇವೆ. ಚುನಾವಣೆ ಎದುರಿಸಲು ಸಕಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪರಮಾಧಿಕಾರ ಇದೆ" ಎಂದು ಸಚಿವ ಬೈರತಿ ಬಸವರಾಜ ಹೇಳಿದರು.

ಮೂರು ಸ್ಥಾನಗಳಲ್ಲೂ ಜಯ
"ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸ್ಥಾನ ಗೆಲ್ಲುತ್ತೇವೆ. ನಮ್ಮಲ್ಲಿ ಶಾಸಕರ ಸಂಖ್ಯಾಬಲ ಹೆಚ್ಚಿದೆ. ಅಭ್ಯರ್ಥಿಗಳ ಗೆಲುವಿಗೆ ಎಲ್ಲಾ ರೀತಿಯ ತಂತ್ರಗಾರಿಕೆ ರೂಪಿಸಿದ್ದೇವೆ. ಪಕ್ಷದ ರಾಜ್ಯಾಧ್ಯಕ್ಷರು, ರಾಜ್ಯ ಬಿಜೆಪಿ ಉಸ್ತುವಾರಿ, ಶಾಸಕರು, ಮುಖಂಡರು ಕುಳಿತು ಚರ್ಚಿಸುತ್ತೇವೆ. ಎರಡು ಸ್ಥಾನಗಳಿಗೆ ತಲಾ 45 ಮತಗಳು ಬೇಕು. ಈ ಸಂಖ್ಯೆ ನಮ್ಮಲ್ಲಿದೆ. ಇನ್ನು 32 ಮತಗಳು ಉಳಿಯುತ್ತವೆ. ನಾವು ಮೂರನೇ ಅಭ್ಯರ್ಥಿಯನ್ನೂ ಗೆಲ್ಲಿಸುವ ಶಕ್ತಿ ನಮ್ಮಲ್ಲಿದೆ" ಎಂದು ಸಚಿವ ಬೈರತಿ ಬಸವರಾಜ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಶ ಖಂಡಿತ
'ಆರ್ಎಸ್ಎಸ್ ತಂಟೆಗೆ ಬಂದರೆ ಕಾಂಗ್ರೆಸ್ ದೇಶದಲ್ಲಿಯೂ ಅಡ್ರೆಸ್ ಇಲ್ಲ, ನಂತರ ರಾಜ್ಯದಲ್ಲೂ ಇಲ್ಲಂದಂತಾಗಲಿದೆ. ಚಡ್ಡಿ ದೇಶವನ್ನು ಕಾಪಾಡಿದೆ. ಆರ್ಎಸ್ ಎಸ್ ಜನರ ಸೇವೆಗೆ ಅರ್ಪಣೆ ಮಾಡಿಕೊಂಡಿದೆ. ಪ್ರಕೃತಿ ವಿಕೋಪ, ಕೋವಿಡ್ ಬಂದಾಗ ಜನರ ಸೇವೆಗೆ ನಿಂತಿತ್ತು. ಆರ್ಎಸ್ಎಸ್ ದೇಶಾಭಿಮಾನ, ಸಂಸ್ಕೃತಿ ಬಗ್ಗೆ ಹೇಳಿಕೊಡುತ್ತದೆ. ಆದರೆ ಕಾಂಗ್ರೆಸ್ ಭಯೋತ್ಪಾದನೆ, ಉಗ್ರವಾದ ಬೆಂಬಲಿಸುತ್ತದೆ. ಚಡ್ಡಿ ಸುಟ್ಟು ಹಾಕಿದರೆ ಅವರೇ ಭಸ್ಮವಾಗುತ್ತಾರೆ. ಭಸ್ಮಾಸುರ ಕೈ ಇಟ್ಟರೆ ಏನಾಗುತ್ತೆ ಎಂಬ ಕಥೆಯನ್ನು ಕಾಂಗ್ರೆಸ್ ನಾಯಕರು ತಿಳಿದುಕೊಳ್ಳಲಿ" ಸಚಿವ ಬೈರತಿ ಬಸವರಾಜ ಸಲಹೆ ನೀಡಿದರು.

ಕಾಂಗ್ರೆಸ್ನಲ್ಲಿ ಹುಚ್ಚನ ಮಾತಿಗೆ ಬೆಲೆಯಿಲ್ಲ
ಸಿದ್ದರಾಮಯ್ಯ ಹೇಳಿಕೆಗೆ ತೀವ್ರ ಕಿಡಿಕಾರಿರುವ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. "ಅವನೊಬ್ಬ ಅಯೋಗ್ಯ, ಹುಚ್ಚ. ನಿಮ್ಹಾನ್ಸ್ ರೋಡಿನಲ್ಲಿ ಹೋಗುವ ನಾಯಿಯು ಕೂಡಾ ಸಿದ್ದರಾಮಯ್ಯನಿಗೆ ಮರ್ಯಾದೆಯನ್ನು ಕೊಡುವುದಿಲ್ಲ. ಆರ್ಎಸ್ಎಸ್ ಚಡ್ಡಿ ಹಾಕಿಕೊಂಡು ಸಂಸ್ಕಾರ ಬೆಳೆಸಿಕೊಂಡು ನರೇಂದ್ರ ಮೋದಿ ಈಗ ಪ್ರಧಾನಮಂತ್ರಿಯಾಗಿದ್ದಾರೆ ಎನ್ನುವುದನ್ನು ಮೊದಲು ಅರಿಯಲಿ. ಕಾಂಗ್ರೆಸ್ಸಿನಲ್ಲಿಯೇ ಈ ಹುಚ್ಚನ ಮಾತಿಗೆ ಬೆಲೆಯಿಲ್ಲ"ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಹಿಜಾಬ್, ಪಠ್ಯಪುಸ್ತಕ ಪರಿಷ್ಕರಣೆ, ಇದೀಗ ಆರ್ಎಸ್ಎಸ್ ಚಡ್ಡಿ ಹಿಡಿದು ರಾಜಕೀಯ ಪಕ್ಷಗಳು ವಾದ ವಿವಾದದಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ವಿವಾದಗಳ ಸರಮಾಲೆ ಮುಂದುವರಿಯುತ್ತಿದೆ ಹೊರತು ಕೊನೆಗಾಣುವ ಸಾಧ್ಯತೆ ಕಂಡುಬರುತ್ತಿಲ್ಲ.












Click it and Unblock the Notifications