ನನ್ನ ಕ್ಷೇತ್ರದ ಜನರೇ ಉತ್ತರ ಕೊಡ್ತಾರೆ: ರೇಣುಕಾ ಆಳಲು
ದಾವಣಗೆರೆ, ಜನವರಿ 13: ಯಡಿಯೂರಪ್ಪ ನೇತೃತ್ವ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಅಂತೂ ಇಂತೂ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಆ ಪಟ್ಟಿ ಈ ಪಟ್ಟಿ ನಡುವೆ ಹೈಕಮಾಂಡ್ ಕಳಿಸಿದ ಪಟ್ಟಿ ಅಂತಿಮ ಗೊಂಡು ಬುಧವಾರ ಪ್ರಮಾಣವಚನ ಸ್ವೀಕರಿಸಲು ಏಳು ಮಂದಿ ಶಾಸಕರು ಸಜ್ಜಾಗುತ್ತಿದ್ದಾರೆ. ಮಂತ್ರಿಗಿರಿ ಮೇಲೆ ಆಸೆ ಇರಿಸಿಕೊಂಡಿದ್ದ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರಿಗೆ ನಿರಾಶೆ ಕಾದಿದೆ.
ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ನೇರವಾಗಿ ಬೇಸರ ವ್ಯಕ್ತಪಡಿಸಲು ಸಾಧ್ಯವಾಗದೆ ತಮ್ಮ ಅಳಲನ್ನು ಸುದ್ದಿಗಾರರ ಮುಂದೆ ತೋಡಿಕೊಂಡಿದ್ದಾರೆ.
ಹೊನ್ನಾಳಿ ಕ್ಷೇತ್ರದ ಜನರೇ ನನಗೆ ದೇವರು, ನನ್ನ ಕ್ಷೇತ್ರದ ಜನ ನನ್ನ ಕೈ ಹಿಡಿದಿದ್ದಾರೆ. ನನಗೆ ಸಚಿವ ಸ್ಥಾನ ಸಿಗದಿರೋದಕ್ಕೆ ಕ್ಷೇತ್ರದ ಜನರೇ ಮುಂದೆ ಉತ್ತರ ಕೊಡ್ತಾರೆ. ಒಂದು ಬಾರಿ ನಾನು ಸೋತೆ ಅದು ನನ್ನ ಸ್ವಯಂ ಕೃತ ಅಪರಾಧ, ನನಗೆ ಸಾಮರ್ಥ್ಯ ಇಲ್ಲ, ಅಸಮರ್ಥ ನಾನು ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ನಾನು ಸೋತಾಗಲೂ 63 ಸಾವಿರ ಮತ ಪಡೆದಿದ್ದೆ. ಹಣ ಖರ್ಚು ಮಾಡದೇ ಗೆದ್ದಿದ್ದೇನೆ. ಲಾಬಿ ಮಾಡುವುದಿದ್ದರೆ ಬೆಂಗಳೂರಿನಲ್ಲೇ ಇರಬಹುದಿತ್ತು. ಆದರೆ, ಕ್ಷೇತ್ರದ ಜನರ ಬಳಿ ಇದ್ದೆ ಎಂದಿದ್ದಾರೆ.
ಪ್ರಾದೇಶಿಕ ಅಸಮತೋಲನ:
ಸಂಪುಟ ವಿಸ್ತರಣೆಯಲ್ಲಿ ಪ್ರಾದೇಶಿಕವಾಗಿ ಅಸಮತೋಲನವಾಗಿದೆ, ಸಂಪುಟದಲ್ಲಿ ದಾವಣಗೆರೆ ಜಿಲ್ಲೆಗೆ ಪ್ರಾತಿನಿಧ್ಯವಿಲ್ಲ. ಮಧ್ಯ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕರಾವಳಿ ಕರ್ನಾಟಕಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ಕೊಟ್ಟಿಲ್ಲ,ಬೆಂಗಳೂರು, ಮತ್ತು ಬೆಳಗಾವಿ ಜಿಲ್ಲೆಯ ಕ್ಯಾಬಿನೆಟ್ ಆಗಿದೆ. ಹೀಗಾಗಿ ತಮಗೆ ಸಚಿವ ಸ್ಥಾನ ಸಿಗಬೇಕಿತ್ತು ಎಂದು ಪರೋಕ್ಷವಾಗಿ ವಾದಿಸಿದ್ದಾರೆ.
ಲಾಬಿ ಮಾಡಿಲ್ಲ, ಮಾಡಲ್ಲ:
ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ, ಲಾಬಿ ಮಾಡಿದವರು ಸಚಿವರಾಗುತ್ತಿದ್ದಾರೆ. ನನಗೆ ಬೇಸರ ಆಗಿದೆ ನಿಜ.. ಆದ್ರೆ ನನ್ನ ಬೇಸರವನ್ನು ಯಾರ ಹತ್ತಿರ ಹೇಳಿಕೊಳ್ಳಲಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.












Click it and Unblock the Notifications