ದಾವಣಗೆರೆಗೆ ಆಗಮಿಸಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ: ಜಿಲ್ಲೆಯಲ್ಲಿನ ಕಾರ್ಯಕ್ರಮದ ವಿವರ ತಿಳಿಯಿರಿ
ದಾವಣಗೆರೆ, ಜನವರಿ, 05: 2023ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯು ತಾಲೀಮು ಶುರು ಮಾಡಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಜನವರಿ 5ರ ಸಂಜೆ ದಾವಣಗೆರೆಗೆ ಆಗಮಿಸಲಿದ್ದಾರೆ. ಜನವರಿ 6ರಂದು ಹರಿಹರದ ವಾಲ್ಮೀಕಿ, ಕಾಗಿನೆಲೆ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಮಠಕ್ಕೆ ಭೇಟಿ ನೀಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಅವರು, ಜನವರಿ 5ರ ಸಂಜೆ ಸಿರಿಗೆರೆ ರಸ್ತೆಯ ಹೆಬ್ಬಾಳ ಟೋಲ್ ಗೇಟ್ನಲ್ಲಿ ರಾಷ್ಟ್ರಾಧ್ಯಕ್ಷರನ್ನು ಆತ್ಮೀಯವಾಗಿ ಸ್ವಾಗತಿಸಲಾಗುವುದು. ಇವರ ಜೊತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗಮಿಸಲಿದ್ದಾರೆ. ರಾತ್ರಿ 7:30ರ ಸುಮಾರಿಗೆ ಜಿಎಂಐಟಿಯಲ್ಲಿ ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಬಿಜೆಪಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ಪಾಲಿಕೆ ಸದಸ್ಯರು, ಮಾಜಿ ಶಾಸಕರು, ವಿಧಾನ ಪರಿಷತ್ ಮಾಜಿ ಸದಸ್ಯರ ಜೊತೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಪಕ್ಷ ಸಂಘಟನೆ ಕುರಿತಾಗಿ ಚರ್ಚಿಸಲಾಗುವುದು ಎಂದರು.

ಶ್ರೀಗಳ ಆಶೀರ್ವಾದ ಪಡೆಯಲಿರುವ ನಡ್ಡಾ
ಜನವರಿ 6ರಂದು ಬೆಳಗ್ಗೆ 9 ಗಂಟೆಗೆ ಜಿಎಂಐಟಿಯಿಂದ ಹೊರಡಲಿರುವ ನಡ್ಡಾ ಅವರು, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಮಠ, ಬೆಳ್ಳೂಡಿಯ ಕನಕ ಗುರು ಪೀಠ, ವಾಲ್ಮೀಕಿ ಪೀಠಕ್ಕೆ ತೆರಳಿ ಶ್ರೀಗಳಿಂದ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ 11 ಗಂಟೆಯ ಸುಮಾರಿಗೆ 10ನೇ ವಾರ್ಡ್ನ ಹೊಂಡ ಸರ್ಕಲ್ನ ದಾವನ್ ಪೇಟೆಯ ಬೂತ್ ಅಧ್ಯಕ್ಷ ಯರ್ರಿಸ್ವಾಮಿ ಅವರ ಮನೆಗೆ ಆಗಮಿಸಲಿದ್ದಾರೆ. ಹಾಗೆಯೇ ಕಾರ್ಯಕರ್ತರ ಮನೆ ಮೇಲೆ ಬಾವುಟ ಕಟ್ಟುವ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕರ್ತರ ಮನೆ ಮೇಲೆ ಬಾವುಟಗಳ ಹಾರಾಟ
ಬೂತ್ ಮಟ್ಟದಲ್ಲಿ 30 ಪೇಜ್ ಪ್ರಮುಖರ ನೇಮಕ ಮಾಡಲಾಗುವುದು. ಕನಿಷ್ಟ 25 ಬಾವುಟಗಳನ್ನು ಕಾರ್ಯಕರ್ತರ ಮನೆ ಮೇಲೆ ಕಟ್ಟುವ ಉದ್ದೇಶ ಹೊಂದಲಾಗಿದೆ. ಬೂತ್ ಸಮಿತಿ ಸಭೆಯಲ್ಲಿ ಕಾರ್ಯಕರ್ತರು, ಬೂತ್ ಮಟ್ಟದ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ. ಈ ವೇಳೆ ಸಚಿವರು, ಶಾಸಕರು, ಮುಖಂಡರು, ಕಾರ್ಯಕರ್ತರು ಹಾಜರಿರುವರು ಎಂದು ತಿಳಿಸಿದರು. ಇನ್ನು ಮಧ್ಯಾಹ್ನ 12 ಗಂಟೆಗೆ ತ್ರಿಶೂಲ್ ಕಲಾಭವನದಲ್ಲಿ ಬೂತ್ ವಿಜಯ ಅಭಿಯಾನ ಹಾಗೂ ವೃತ್ತಿಪರ ಪ್ರಭಾವಿ ಮತದಾರರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸಿಎಂ ಆಗಮಿಸುವುದು ಅನುಮಾನ
ಹಾಗೆಯೇ ಸಂಜೆ ತುಮಕೂರಿನ ಶಿರಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುವುದು ಅನುಮಾನವಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಪ್ರವಾಸದಲ್ಲಿರುವ ಕಾರಣ ಅವರು ಬರುತ್ತಿಲ್ಲ ಎಂದು ಹೇಳಿದರು.

ವಿಶೇಷ ಅರ್ಥ ಕಲ್ಪಿಸುವುದು ಬೇಡ
ನಡ್ಡಾ ಅವರು ಮಠಗಳಿಗೆ ಭೇಟಿ ನೀಡುತ್ತಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಮೊದಲಿನಿಂದಲೂ ಬಿಜೆಪಿಗೆ ಎಲ್ಲಾ ಮಠಗಳ ಬಗ್ಗೆ ಅಪಾರವಾದ ಗೌರವ ಇದೆ. ಚುನಾವಣೆಗೋಸ್ಕರ ಹೋಗುತ್ತಿಲ್ಲ. ರಾಷ್ಟ್ರ, ರಾಜ್ಯಮಟ್ಟದ ಯಾವ ನಾಯಕರೂ ಆಗಮಿಸಿದರೂ ಕೂಡ ಶ್ರೀಗಳ ಆಶೀರ್ವಾದ ಪಡೆಯುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬಂದಾಗಲೂ ಮಠಮಾನ್ಯಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಇರುತ್ತದೆ. ಶ್ರೀಗಳ ಆಶೀರ್ವಾದ ಪಡೆಯುವ ಸಲುವಾಗಿ ಮೂರು ಮಠಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಮಠಗಳು ಕೇವಲ ಹರಿಹರಕ್ಕೆ ಮಾತ್ರ ಸೀಮಿತವಲ್ಲ. ರಾಜ್ಯಾದ್ಯಂತ ಭಕ್ತಗಣ ಹೊಂದಿದ್ದು, ಈ ಕಾರಣಕ್ಕಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಡಿ. ಎಸ್. ಶಿವಶಂಕರ್, ಉಪಾಧ್ಯಕ್ಷ ಶಿವರಾಜ ಪಾಟೀಲ್, ರಾಜ್ಯ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಮಂಜಾನಾಯ್ಕ, ಸೊಕ್ಕೆ ನಾಗರಾಜ್, ಸಂಗನಗೌಡ್ರು, ಆನಂದರಾವ್ ಶಿಂಧೆ, ಮಾಧ್ಯಮ ಪ್ರಮುಖರಾದ ಹೆಚ್. ಪಿ. ವಿಶ್ವಾಸ್ ಮತ್ತಿತರರು ಹಾಜರಿದ್ದರು.











Click it and Unblock the Notifications