ಶಿವಶಂಕರಪ್ಪರಿಗೆ ವಯಸ್ಸಾಗಿದೆ, ಈ ವಯಸ್ಸಿನಲ್ಲಿ ಬೇಕಾ?: ಬಿಜೆಪಿ ಅಭ್ಯರ್ಥಿಯ ವಿಡಿಯೋ ವೈರಲ್
ದಾವಣಗೆರೆ, ಮೇ 08: ದಾವಣಗೆರೆಯಲ್ಲಿ ಚುನಾವಣಾ ಕಣ ರಂಗೇರಿದೆ. ಆರೋಪ -ಪ್ರತ್ಯಾರೋಪ, ಟೀಕೆ - ಪ್ರತಿಟೀಕೆ ಸಾಮಾನ್ಯ. ಆದ್ರೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಬಿಜೆಪಿ ಅಭ್ಯರ್ಥಿ ಬಿ. ಜಿ. ಅಜಯ ಕುಮಾರ್ ಆಕ್ಷೇಪಾರ್ಹ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಶಿವಶಂಕರಪ್ಪರಿಗೆ ವಯಸ್ಸಾಗಿದೆ, ಈ ವಯಸ್ಸಿನಲ್ಲಿ ಬೇಕಾ? ಎಷ್ಟು ವರ್ಷ ಅಂತಾ ಅವರಿಗೆ ಅಧಿಕಾರ ಕೊಡೋದು ಎಂದು ವಿಡಿಯೋದಲ್ಲಿ ಹೇಳಿರುವ ಅಜಯ ಕುಮಾರ್ ಅವರು, ಕೆಲ ಆಕ್ಷೇಪಾರ್ಹ ಪದಗಳ ಬಳಕೆ ಮಾಡಿದ್ದಾರೆ. ಇದು ಕಾಂಗ್ರೆಸ್ ಅನ್ನು ಕೆರಳುವಂತೆ ಮಾಡಿದೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ತಮ್ಮ ವ್ಯಾಟ್ಸಪ್ನ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದು, ಹಿರಿಯರ ಬಗ್ಗೆ ಈ ರೀತಿ ಬಿಜೆಪಿ ಅಭ್ಯರ್ಥಿ ಮಾತನಾಡಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕಾಂಗ್ರೆಸ್ ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಕೆ. ಎಲ್. ಹರೀಶ್ ಬಸಾಪುರ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಹೇಳಿಕೆ ಅವರ ಸಂಸ್ಕೃತಿ ತೋರಿಸುತ್ತದೆ, ಮತದಾನ ಮಾಡುವ ಮುನ್ನ ಸಾವಿರ ಬಾರಿ ಯೋಚಿಸಿ ಎಂದು ಹೇಳಿದ್ದಾರೆ.
ಮೇ ಹತ್ತರಂದು ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ರಾಜಕೀಯ ಪಕ್ಷಗಳ ನಾಯಕರುಗಳು, ಚುನಾವಣಾ ಅಭ್ಯರ್ಥಿಗಳು ತಾವು ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಮುಂದೆ ಮಾಡಬಹುದಾದ ಕೆಲಸಗಳ ಬಗ್ಗೆ ಜನರಿಗೆ ಹೇಳುವ ಮೂಲಕ ತಮಗೆ ಯಾಕೆ ಮತದಾನ ಮಾಡಬೇಕು ಎಂದು ಮತದಾರರಿಗೆ ಮನವರಿಕೆ ಮಾಡುವುದು ಒಂದು ಉತ್ತಮ ನಡವಳಿಕೆಯನ್ನಬಹುದು. ಅಜಯ ಕುಮಾರ್ ತಮ್ಮ ಕಾರ್ಯಕರ್ತರೊಂದಿಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಹಿರಿಯ ರಾಜಕಾರಣಿಗಳ ಬಗ್ಗೆ ಅವರು ಬಳಸಿರುವ ಪದಗಳು ಅವರ ಯೋಗ್ಯತೆ ಹಾಗೂ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಹಿರಿಯರ ಬಗ್ಗೆ ಬಳಸಿರುವ ಪದಗಳು ಅತ್ಯಂತ ಖಂಡನೀಯವಾಗಿದ್ದು ದುರಹಂಕಾರಕ್ಕೆ ಚುನಾವಣೆಯಲ್ಲಿ ಸೋಲಿಸುವ ಮೂಲಕವೇ ಜನರು ಉತ್ತರಿಸಬೇಕು ಎಂದು ಹೇಳಿದ್ದಾರೆ.
ಮತ ಸೆಳೆಯಲು ಬೆಳ್ಳಿ ಗಣೇಶ ವಿಗ್ರಹ ಹಂಚಿಕೆ
ಮತದಾರರಿಗೆ ಆಮಿಷ ಒಡ್ಡಿ ಮತ ಸೆಳೆಯುವ ಉದ್ದೇಶದಿಂದ ಬೆಳ್ಳಿಯ ಗಣೇಶ ವಿಗ್ರಹ ಹಂಚುತ್ತಿದ್ದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಘಟನೆ ನಗರದ ಎಸ್ ಜೆ ಎಂ ನಗರದ 16ನೇ ಕ್ರಾಸ್ನಲ್ಲಿ ನಡೆದಿದೆ.

ಹಿರೇಕೆರೂರಿನ 22 ವರ್ಷದ ತೇಜಸ್ ಎಂಬ ಯುವಕ ಪ್ರಚಾರ ಮಾಡುತ್ತಾ ಬೆಳ್ಳಿ ಗಣೇಶ ಮೂರ್ತಿ ಹಂಚಲು ಬಂದಿದ್ದ. ಈತನ ಬಳಿ 2 ಚಿಕ್ಕ ಬೆಳ್ಳಿಯ ಗಣೇಶ ಮೂರ್ತಿಗಳು ಸಿಕ್ಕಿವೆ. ಈ ವೇಳೆ ವಿಚಾರಣೆ ನಡೆಸಿದಾಗ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತದಾರರಿಗೆ ಆಮಿಷ ಒಡ್ಡಲು ಹಂಚಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ದಕ್ಷಿಣ ವಿಭಾಗದ ಫ್ಲೈಯಿಂಗ್ ಸ್ಕ್ವಾಡ್ನ ಗಿರೀಶ್ ಅವರು, ಮಾಹಿತಿ ಪಡೆದುಕೊಂಡರು. ಗಣೇಶ ಮೂರ್ತಿಗಳನ್ನು ವಶಕ್ಕೆ ಪಡೆದು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ನೀತಿ ಸಂಹಿತೆ ಉಲ್ಲಂಘನೆ ಕೇಸ್ ದಾಖಲು
ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆ ವಿರೋಧಿಸಿ ಮೆರವಣಿಗೆ ಹಾಗೂ ಸಭೆ ನಡೆಸಿದ ಆರೋಪದ ಮೇರೆಗೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.
ನೂರಾರು ಬಿಜೆಪಿ ಕಾರ್ಯಕರ್ತರು ಬಾವುಟಗಳನ್ನು ಹಿಡಿದುಕೊಂಡು ಬಂದು ಗುಂಡಿ ವೃತ್ತದ ಬಳಿ ಗುಂಪು ಸೇರಿದರು. ಈ ವೇಳೆ ಜೈ ಶ್ರೀರಾಮ್, ಜೈ ಹನುಮಾನ್ ಎಂದು ಘೋಷಣೆ ಕೂಗುತ್ತಾ ಬಾವುಟಗಳು, ಧ್ವನಿವರ್ಧಕಗಳನ್ನು ಬಳಸಿಕೊಂಡು ಮೆರವಣಿಗೆ ನಡೆಸಿದರು. ಗುಂಡಿ ವೃತ್ತದಿಂದ ಶ್ರೀ ಸದ್ಜ್ಯೋತಿ ಮಠದ ಕಡೆ ಹೋಗುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಆ ಸಮಯದಲ್ಲಿ ಕೆಲವರು ಅಲ್ಲಿಂದ ಹೋಗಿದ್ದಾರೆ. ಉಳಿದವರು ಸದ್ಜ್ಯೋತಿ ಮಠದಲ್ಲಿ ಭಾಷಣ ಮಾಡುತ್ತಿದ್ದರು.
ಕಾರ್ಯಕ್ರಮದ ಆಯೋಜಕ ಚೇತನ್ಗೆ ಮೆರವಣಿಗೆ, ಮಠದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆದಿರುವ ಬಗ್ಗೆ ವಿಚಾರಿಸಿದಾಗ ಅನುಮತಿ ಪಡೆದಿರಲಿಲ್ಲ. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್ ಹಾಗೂ ಸದಸ್ಯ ಪ್ರಸನ್ನ ಕುಮಾರ್ ಸೇರಿದಂತೆ ಸುಮಾರು 25 ಜನಕ್ಕೂ ಹೆಚ್ಚು ಜನರು ಇದ್ದರು.
ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದು ತಿಳಿದಿದ್ದರೂ ಕೂಡ ಬಿಜೆಪಿ ಕಾರ್ಯಕರ್ತರು ಅಕ್ರಮವಾಗಿ ಗುಂಪು ಕಟ್ಟಿಕೊಂಡು, ಅನಧಿಕೃತವಾಗಿ ರಸ್ತೆ ತಡೆದು ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಮಾಡಿ ಆಂಜನೇಯ ಭಾವ ಚಿತ್ರ ಇರುವ ಬಾವುಟಗಳನ್ನು ಹಿಡಿದು ಮೆರವಣಿಗೆ ಮಾಡಿಧಾರ್ಮಿಕ ಸ್ಥಳ ಸದ್ಜ್ಯೋತಿ ಮಠವನ್ನು ದುರ್ಬಳಕೆ ಮಾಡಿಕೊಂಡು ಪ್ರಚೋದನಕಾರಿ ಭಾಷಣ ಮಾಡಿ ಚುನಾವಣೆ ಸಂಹಿತೆ ಉಲ್ಲಂಘನೆ ಮಾಡಿದ ಆರೋಪಗ ಮೇರೆಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications