ದಾವಣಗೆರೆ ಮೇಯರ್ ಚುನಾವಣೆ; ಕದನ, ಕುತೂಹಲ
ದಾವಣಗೆರೆ, ಫೆಬ್ರವರಿ 24: ತೀವ್ರ ಕುತುಹೂಲ ಕೆರಳಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಮುಕ್ತಾಯವಾಗಿದೆ. ಪಾಲಿಕೆ ಬಿಜೆಪಿ ವಶವಾಗಿದ್ದು, ಮೇಯರ್ ಆಗಿ 25ನೇ ವಾರ್ಡ್ನ ಎಸ್. ಟಿ. ವೀರೇಶ್, ಉಪ ಮೇಯರ್ ಆಗಿ 44ನೇ ವಾರ್ಡ್ನ ಶಿಲ್ಪಾ ಜಯಪ್ರಕಾಶ್ ಆಯ್ಕೆಯಾದರು.
ಮೇಯರ್ ಸ್ಥಾನ ಸಾಮಾನ್ಯ ವರ್ಗದ ಅಭ್ಯರ್ಥಿಗೆ ಮೀಸಲಾಗಿತ್ತು. ಬಿಜೆಪಿಯಿಂದ ಎಸ್. ಟಿ. ವೀರೇಶ್, ಕಾಂಗ್ರೆಸ್ನಿಂದ 38ನೇ ವಾರ್ಡ್ನ ಗಡಿಗುಡಾಳ ಮಂಜುನಾಥ ನಾಮ ಪತ್ರ ಸಲ್ಲಿಸಿದ್ದರು.
ಉಪಮೇಯರ್ ಸ್ಥಾನ ಎಸ್ಸಿ ಮಹಿಳಾ ವರ್ಗದ ಅಭ್ಯರ್ಥಿಗೆ ಮೀಸಲಾಗಿತ್ತು. ಬಿಜೆಪಿಯಿಂದ ಶಿಲ್ಪಾ ಜಯಪ್ರಕಾಶ್, ಕಾಂಗ್ರೆಸ್ನಿಂದ 36ನೇ ವಾರ್ಡ್ನ ನಾಗರತ್ನಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದರು.
ಬುಧವಾರ ಬೆಳಗ್ಗೆ 11ಕ್ಕೆ ಚುನಾವಣೆ ಆರಂಭವಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಪರ 29, ಕಾಂಗ್ರೆಸ್ ಅಭ್ಯರ್ಥಿ ಪರ 22 ಮತ ಚಲಾವಣೆ ಗೊಂಡವು ಬಿಜೆಪಿ ಅಭ್ಯರ್ಥಿಗಳು 7 ಮತಗಳಿಂದ ಗೆಲುವು ಸಾಧಿಸಿದರು.

ಗೈರಾದ ಪಾಲಿಕೆ ಸದಸ್ಯರು
ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ನಡೆದ ಚುನಾವಣೆಗೆ ಹಲವು ಪಾಲಿಕೆ ಸದಸ್ಯರು ಗೈರಾದರು. ಜಯಮ್ಮ ಗೋಪಿನಾಯ್ಕ (ಪಕ್ಷೇತರ), ನೂರ್ಜಹಾನ (ಜೆಡಿಎಸ್), ದೇವರಮನಿ ಶಿವಕುಮಾರ್ (ಕಾಂಗ್ರೆಸ್) ಗೈರಾಗಿದ್ದರು. ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ, ಎಂಎಲ್ಸಿಗಳಾದ ಯು. ಬಿ. ವೆಂಕಟೇಶ್, ಕೆ. ಸಿ. ಕೊಂಡಯ್ಯ ಸಹ ಚುನಾವಣೆಯಿಂದ ದೂರ ಉಳಿದರು.

ಪಾಲಿಕೆ ಮತದಾರರು ಎಷ್ಟು?
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಒಟ್ಟು ಮತದಾರರು 58. ಮೇಯರ್ ಸ್ಥಾನಕ್ಕೆ ಪಡೆಯಲು ಮ್ಯಾಜಿಕ್ ನಂಬರ್ 29. ಪಾಲಿಕೆಯಲ್ಲಿ ಒಟ್ಟು ಸದಸ್ಯರು 45 ಇದ್ದು, ಕಾಂಗ್ರೆಸ್ ಕಾರ್ಪೋರೇಟರ್ ಒಬ್ಬರು ರಾಜೀನಾಮೆ ನೀಡಿದ್ದಾರೆ.
20 ಕಾಂಗ್ರೆಸ್, 17 ಬಿಜೆಪಿ, 1 ಜೆಡಿಎಸ್, 5 ಪಕ್ಷೇತರ ಸದಸ್ಯರ ಪೈಕಿ ಕಾಂಗ್ರೆಸ್ 20, ಪಕ್ಷೇತರ ಉದಯ್ ಕುಮಾರ್, ಮೋಹನ ಕೊಂಡಜ್ಜಿ 1 ಸ್ಥಾನ ಸೇರಿ ಒಟ್ಟು 22 ಮತಗಳು ಕಾಂಗ್ರೆಸ್ಗೆ ಬಿದ್ದವು.

ಬಿಜೆಪಿಗೆ ಮೇಯರ್ ಪಟ್ಟ
ಬಿಜೆಪಿ ಪರ 1 ಸಂಸದ, 1 ಎಂಎಲ್ಎ, 7 ಎಂಎಲ್ಸಿಗಳು ಚುನಾವಣೆಗೆ ಹಾಜರಾಗಿದ್ದರು. ಪಕ್ಷೇತರರ 4 ಸೇರಿ 30 ಸದಸ್ಯರ ಬಲವನ್ನು ಬಿಜೆಪಿ ಹೊಂದಿತ್ತು. ಕಾಂಗ್ರೆಸ್ ಪರವಾಗಿದ್ದ 1 ಎಂಎಲ್ಎ, 3 ಎಂಎಲ್ಸಿಗಳು ಗೈರಾದರು.
Recommended Video

ಕಾಂಗ್ರೆಸ್ನಲ್ಲಿ ಅಸಮಾಧಾನ
ಕಾಂಗ್ರೆಸ್ನ ಸದಸ್ಯ ದೇವರಮನಿ ಶಿವಕುಮಾರ್ ಬಿಜೆಪಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರಲ್ಲಿ ಅಸಮಾಧಾನ ಉಂಟಾಗಿತ್ತು. ಸೋಲಿನ ನಿರಾಸೆಯಲ್ಲಿರುವ ಕಾಂಗ್ರೆಸ್ ಸದಸ್ಯರು ಮೌನಕ್ಕೆ ಶರಣಾಗಿದ್ದರು. ಪೊಲೀಸ್ ಭದ್ರತೆಯ ನಡುವೆಯೇ ಚುನಾವಣೆ ಪೂರ್ಣಗೊಂಡಿತು.












Click it and Unblock the Notifications