ಪರೀಕ್ಷೆಗೆ ಹೆದರಿ ಮನೆಯಲ್ಲಿ ಕುಳಿತ ವಿದ್ಯಾರ್ಥಿನಿ; ಧೈರ್ಯ ತುಂಬಿ ಪರೀಕ್ಷೆ ಬರೆಸಿದ ಬಿಇಒ
ದಾವಣಗೆರೆ, ಜುಲೈ 19: ಎಸ್ಎಸ್ಎಲ್ಸಿ ಪರೀಕ್ಷೆಗೆ ಹೆದರಿ ಮನೆಯಲ್ಲೇ ಕುಳಿತ ವಿದ್ಯಾರ್ಥಿನಿಯನ್ನು ಕರೆದುಕೊಂಡು ಬಂದು ಕ್ಷೇತ್ರ ಶಿಕ್ಷಣಾಧಿಕಾರಿ ಪರೀಕ್ಷೆ ಬರೆಸಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ನಡೆದಿದೆ.
ಸಂತೆಬೆನ್ನೂರಿನಲ್ಲಿ ರಜಿಯಾಭಾನು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಹೋಗದೇ ಹೆದರಿ ಮನೆಯಲ್ಲೇ ಕುಳಿತಿದ್ದಳು. ಈ ಮಾಹಿತಿ ಸಿಕ್ಕ ತಕ್ಷಣ ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ವಿದ್ಯಾರ್ಥಿನಿಯ ಮನೆಗೆ ತೆರಳಿದ್ದಾರೆ.
ಪರೀಕ್ಷೆಗೆ ಹಾಜರಾಗದ ಬಗ್ಗೆ ಬಾಲಕಿ ಪೋಷಕರಿಂದ ಮಾಹಿತಿ ಪಡೆದಿದ್ದು, ಆಕೆ ಭಯದಿಂದ ಮನೆಯಲ್ಲೇ ಉಳಿದಿದ್ದಾಗಿ ತಿಳಿಸಿದ್ದಾರೆ. ಆಗ ಮಂಜುನಾಥ್ರವರು ರಜಿಯಾಭಾನುಗೆ ಬುದ್ಧಿವಾದ ಹೇಳಿ ಧೈರ್ಯ ತುಂಬಿದ್ದಾರೆ. ಆಕೆಯನ್ನು ಪರೀಕ್ಷೆ ಬರೆಯಲು ಒಪ್ಪಿಸಿ ತಾವೇ ತಮ್ಮ ವಾಹನದಲ್ಲಿ ಸಂತೆಬೆನ್ನೂರಿನ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಆಕೆಯಿಂದ ಪರೀಕ್ಷೆ ಬರೆಯಿಸಿದ್ದಾರೆ.

ಪರೀಕ್ಷೆ ಬರೆದ ಕೋವಿಡ್ ಸೋಂಕಿತ ವಿದ್ಯಾರ್ಥಿ
ಇನ್ನು, ಚನ್ನಗಿರಿ ತಾಲೂಕಿನ ದೊಡ್ಡ ಹೆಬ್ಬಳಗೆರೆ ಗ್ರಾಮದ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರೌಢಶಾಲೆಯ ಅಖಿಲ್ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಆತ ಕೂಡ ಪರೀಕ್ಷೆಯಿಂದ ವಂಚಿತವಾಗುವ ಸಾಧ್ಯತೆ ಇತ್ತು. ಆತ ಕಳೆದ ಬಾರಿಯ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಫೇಲಾಗಿದ್ದು, ಈ ಬಾರಿ ಪರೀಕ್ಷೆ ಕಟ್ಟಿದ್ದ. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಆತನಿಗೆ ಧೈರ್ಯ ಹೇಳಿ ಕೋವಿಡ್ ನಿಯಮಗಳ ಪ್ರಕಾರ ಆತನನ್ನು ಸಂತೆಬೆನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆಯನ್ನು ಬರೆಸಿದ್ದಾರೆ.
ಇದು ದಾವಣಗೆರೆ ಜಿಲ್ಲೆಯಲ್ಲಿ ಮೊದಲ ಕೋವಿಡ್ ಸೋಂಕಿತ ವಿದ್ಯಾರ್ಥಿ ಪರೀಕ್ಷೆ ಬರೆದ ಘಟನೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.












Click it and Unblock the Notifications