ನಾವೇ ಪರಿಹಾರ ಕೊಡುತ್ತೇವೆ: ಮೆಟ್ರೋ ಪಿಲ್ಲರ್ ಕುಸಿದು ಸಾವನ್ನಪ್ಪಿದ ತೇಜಸ್ವಿನಿ ಪೋಷಕರ ಆಕ್ರೋಶ
ದಾವಣಗೆರೆ, ಜನವರಿ 11: ಮೆಟ್ರೋ ಪಿಲ್ಲರ್ ನಿರ್ಮಾಣಕ್ಕೆ ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಕುಸಿದು ಬಿದ್ದ ಪರಿಣಾಮ ತಾಯಿ ಮಗ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೆಣ್ಣೂರು ಕ್ರಾಸ್ ಸಮೀಪ ನಡೆದಿದೆ. ಮೃತರು ದಾವಣಗೆರೆ ಮೂಲದವರಾಗಿದ್ದು, ಮೃತದೇಹಗಳನ್ನು ಮಂಗಳವಾರ ಬೆಂಗಳೂರಿನಿಂದ ದಾವಣಗೆರೆಗೆ ರವಾನಿಸಲಾಗಿತ್ತು.
ನಗರದ ಪಿಬಿ ರಸ್ತೆಯ ರುದ್ರಭೂಮಿಯಲ್ಲಿ ತೇಜಸ್ವಿನಿ ಹಾಗೂ ಗ್ಲಾಸ್ ಹೌಸ್ ಬಳಿಯ ರುದ್ರಭೂಮಿಯಲ್ಲಿ ವಿಹಾನ್ ಅಂತ್ಯಕ್ರಿಯೆ ಭಾವಸಾರ ಕ್ಷತ್ರಿಯ ಸಮಾಜದ ಸಂಪ್ರದಾಯದಂತೆ ಕುಟುಂಬಸ್ಥರ ಆಕ್ರಂದನದ ನಡುವೆ ನಡೆದಿದೆ.
ಮೃತ ತೇಜಸ್ವಿನಿ ತವರು ಮನೆ ದಾವಣಗೆರೆ. ಗದಗ ಮೂಲದ ಲೋಹಿತ್ ಕುಮಾರ್ ಸಲಾಖೆ ಅವರೊಂದಿಗೆ ಮದುವೆ ನಡೆದಿತ್ತು. ಪುತ್ರಿ ವಿಸ್ಮಿತಾ, ಪುತ್ರ ವಿಹಾನ್ ಜೊತೆಗಿನ ಸುಂದರ ಕುಟುಂಬವಾಗಿತ್ತು. ಆದರೆ ಬೆಂಗಳೂರಿನಲ್ಲಿ ನಡೆದ ದುರಂತ ಇಡೀ ಕುಟುಂಬಕ್ಕೆ ಆಘಾತ ಉಂಟು ಮಾಡಿದೆ. ಲೋಹಿತ್ ಕುಮಾರ್ ಹಾಗೂ ಮಗಳು ಅಪಾಯದಿಂದ ಪಾರಾದರೂ, ಮಡದಿ, ಮಗನನ್ನು ಕಳೆದುಕೊಂಡ ಲೋಹಿತ್ ಕುಮಾರ್ ದುಃಖ ಮುಗಿಲು ಮುಟ್ಟಿತ್ತು.

ದಾವಣಗೆರೆಯ ಕುಂದುವಾಡಕ್ಕೆ ಹೋಗುವ ರಸ್ತೆ ಮಧ್ಯೆ ಬರುವ ಬಸವೇಶ್ವರ ನಗರದ ನಿವಾಸಕ್ಕೆ ಮಂಗಳವಾರ ತೇಜಸ್ವಿನಿ ಹಾಗೂ ವಿಹಾನ್ ಮೃತದೇಹ ಬೆಂಗಳೂರಿನಿಂದ ತರಲಾಗಿದ್ದು, ಕುಟುಂಬಸ್ಥರ ಗೋಳಾಟಕ ರುಳು ಹಿಂಡುವಂತಿತ್ತು. ಸಂಬಂಧಿಕರು, ಕುಟುಂಬಸ್ಥರು, ಸ್ನೇಹಿತರು, ಅಕ್ಕಪಕ್ಕದ ನಿವಾಸಿಗಳು ಮೃತರ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದರು.
ತೇಜಸ್ವಿನಿ ಹಾಗೂ ವಿಹಾನ್ರನ್ನು ಕಳೆದುಕೊಂಡು ನೋವಿನಲ್ಲಿರುವ ಕುಟುಂಬಸ್ಥರು ಸರ್ಕಾರ ವಿರುದ್ಧ ಕಿಡಿಕಾರಿದರು, ರಾಜ್ಯ ಸರ್ಕಾರ ನೀಡುವ ಪರಿಹಾರ ಯಾರಿಗೆ ಬೇಕು..? ಅವರಿಗೆ ಜೀವ ತಂದುಕೊಡಲು ಆಗುತ್ತದಾ..? ಯಾರೋ ಮಾಡಿದ ತಪ್ಪಿಗೆ ನಮ್ಮ ಮಗಳು ಬಲಿಯಾದಳು. ಬದುಕಿ ಬಾಳಬೇಕಿದ್ದ ಮೊಮ್ಮಗನನ್ನು ಕಳೆದುಕೊಂಡಿದ್ದೇವೆ. ನಾವೇ ಪರಿಹಾರ ಕೊಡುತ್ತೇವೆ.
ಹೋದ ಜೀವ ತಂದುಕೊಡಲು ಆಗುತ್ತಾ..? ಕಮಿಷನ್ ಆಸೆಗೆ ಕಳಪೆ ಕಾಮಗಾರಿ ಮಾಡಿರುವುದೇ ಈ ದುರಂತಕ್ಕೆ ಕಾರಣ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ನಮಗೆ ನ್ಯಾಯ ಬೇಕು ಎಂದು ತೇಜಸ್ವಿನಿ ಸಹೋದರಿ ಹಾಗೂ ದೊಡ್ಡಪ್ಪ ಆಗ್ರಹಿಸಿದರು.
ಇನ್ನು ತೇಜಸ್ವಿನಿ ಸಹೋದರಿ ಭಾಗ್ಯ ಮಾತನಾಡಿ, "ಮೆಟ್ರೋ ಅವಘಡಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು. ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು. ಆಗ ಮಾತ್ರ ನ್ಯಾಯ ಸಿಕ್ಕಂತಾಗುತ್ತದೆ. ದುಡ್ಡು ಯಾರಿಗೆ ಬೇಕು..? ಸರ್ಕಾರ ಕೇವಲ ಕಣ್ಣೊರೆಸುವ ತಂತ್ರ ಮಾಡದೇ ತಪ್ಪು ಮಾಡಿದವರಿಗೆ ಶಿಕ್ಷೆ ಮೊದಲು ವಿಧಿಸಲಿ" ಎಂದು ಒತ್ತಾಯಿಸಿದರು.
ದೊಡ್ಡಪ್ಪ ನಾರಾಯಣ್ ಮಾತನಾಡಿ, "ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದ ಬಳಿಕ ಲೋಹಿತ್ ಕುಮಾರ್ ಘಟನೆ ಸಂಬಂಧ ದೂರು ನೀಡಲು ಗೋವಿಂದಪುರ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ದೂರು ಪಡೆಯಲು ವಿಳಂಬ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ದುಃಖದಲ್ಲಿದ್ದ ಲೋಹಿತ್ ಅವರನ್ನು ಠಾಣೆಯಲ್ಲಿ ಹೆಚ್ಚು ಹೊತ್ತು ಕೂರಿಸಿದ ಪೊಲೀಸರ ಕ್ರಮ ಸರಿಯಲ್ಲ. ಈ ಬಗ್ಗೆಯೂ ತನಿಖೆಯಾಗಬೇಕು" ಎಂದು ಆಗ್ರಹಿಸಿದರು.












Click it and Unblock the Notifications