ಎಲ್ಲಾ 17 ಜನರಿಗೂ ಸಚಿವ ಸ್ಥಾನ ಸಿಗುತ್ತೆ ಎಂದ ಬಿ.ಸಿ.ಪಾಟೀಲ್
ದಾವಣಗೆರೆ, ಜನವರಿ 26: ಜನವರಿ 30 ರೊಳಗೆ ಸಚಿವ ಸಂಪುಟ ವಿಸ್ತರಣೆ ಆಗಿಯೇ ಆಗಲಿದ್ದು, ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ. ಉಪ ಚುನಾವಣೆಯಲ್ಲಿ ಸೋತವರಿಗೂ ಕೂಡ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ಹಿರೇಕೆರೂರು ಬಿಜೆಪಿ ಶಾಸಕ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದರು.
ದಾವಣಗೆರೆಯ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಬಿ.ಸಿ.ಪಾಟೀಲ್ ಅವರು, ಸೋತವರಿಗೆ ಸಚಿವ ಸ್ಥಾನ ಇಲ್ಲಾ ಎಂಬುದು ತಪ್ಪು. ಈಗ ಸೋತವರಿಗೆ ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡಲು ಸಾಧ್ಯ. ಇದಕ್ಕಾಗಿ ಸ್ವಲ್ಪ ವಿಳಂಬ ಆಗುತ್ತದೆ ಎಂದು ಹೇಳಿದರು.
ಎಂಎಲ್ಸಿ ಮಾಡುವ ಕಾರಣಕ್ಕೆ ಸೋತವರಿಗೆ ಸದ್ಯ ಸಚಿವ ಸ್ಥಾನ ನೀಡಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಎಲ್ಲ 17 ಜನಕ್ಕೂ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿ ಅಥವಾ ಬಿಜೆಪಿ ಹೈಕಮಾಂಡ್ ಯಾವುದೇ ರೀತಿಯ ಬೇಸರ ವ್ಯಕ್ತಪಡಿಸಿಲ್ಲ ಎಂದರು.

ಇನ್ನು ಬಿಜೆಪಿಗರು ಬಹಳಷ್ಟು ಅಧಿಕಾರ ಅನುಭವಿಸಿದ್ದಾರೆ ಅವರಿಂದ ಸಚಿವ ಸ್ಥಾನ ವಾಪಸ್ ತೆಗೆದುಕೊಂಡು, ಬಿಜೆಪಿ ಸೇರ್ಪಡೆಯಾದ ಶಾಸಕರಿಗೆ ನೀಡಲಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಉತ್ತರ ನೀಡಲು ಬಿ.ಸಿ.ಪಾಟೀಲ್ ನಿರಾಕರಿಸಿದರು.
ಅದು ಅವರ ವೈಯಕ್ತಿಕ ಅಭಿಪ್ರಾಯ ಅದಕ್ಕೆ ನಾನೇನು ಉತ್ತರಿಸುವುದಿಲ್ಲ. ಅದರೆ ಜನವರಿ 30 ರೊಳಗೆ ಸಂಪುಟ ವಿಸ್ತರಣೆ ಆಗುತ್ತದೆ, ಅವರು ಕೊಟ್ಟ ಖಾತೆ ನಿರ್ವಹಣೆ ಮಾಡುತ್ತೇನೆ. ಇದೇ ಖಾತೆ ಬೇಕು ಎಂದು ನಾನು ಕೇಳಲ್ಲ ಎಂದು ತಿಳಿಸಿದರು.












Click it and Unblock the Notifications