ಸಂತ ಸೇವಾಲಾಲ್ ಜನ್ಮಸ್ಥಳ ಭಾಯಗಡದಲ್ಲಿ RSS ಶಿಬಿರಕ್ಕೆ ಬಂಜಾರ ಸಮುದಾಯ ವಿರೋಧ
ದಾವಣಗೆರೆ, ಆಗಸ್ಟ್ 24: ಬಂಜಾರ ಸಮುದಾಯದ ಪವಿತ್ರ ತಾಣ, ಸಂತ ಸೇವಾಲಾಲ್ರ ಪುಣ್ಯಭೂಮಿಯಲ್ಲಿ ಆಗಸ್ಟ್ 11 ರಂದು ಆರ್ ಎಸ್ ಎಸ್ ಆಯೋಜಿಸಿರುವ ಉದ್ಯೋಗಿ ಪ್ರಾಥಮಿಕ ಶಿಕ್ಷಾ ವರ್ಗಾಕ್ಕೆ ದಿನಕಳೆದಂತೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಭಾಯಗಡ್ ಬಚಾವೋ ಬಂಜಾರ ಸ್ವಾಭಿಮಾನಿ ಉಳಿಸೋಣ ಎಂಬ ಧ್ಯೇಯವಾಕ್ಯದಡಿ ಹೋರಾಟ ಶುರುವಾಗಿದೆ.
ಈ ಶಿಬಿರ ವಿರೋಧಿಸಿ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಭಾಯಗಡ್ನಲ್ಲಿ ಬಂಜಾರರ ಸಮಾವೇಶ ನಡೆಸಲಾಗಿದೆ. ಬಂಜಾರರ ಬೋಗ್, ವಿತೀ ಮೂಲಕ ಸಮಾವೇಶಕ್ಕೆ ಚಾಲನೆ ನೀಡಲಾಗಿದೆ. ಈ ವೇಳೆ ಕುಬೇರ್ ನಾಯ್ಕ, ಮೀಟೂಬಾ, ರವಿನಾಯ್ಕ ಅವರಿಂದ ಸೇವಾಲಾಲ್, ಬಾಬಾ ಸಾಹೇಬ್ ಕುರಿತ ಹಾಡುಗಳನ್ನು ಹಾಡಲಾಯಿತು. ಬಂಜಾರ ಸಂಸ್ಕೃತಿ, ಪರಂಪರೆ ಮತ್ತು ಬದ್ದತೆಯ ಘೋಷಣೆಗಳು ಮೊಳಗಿದವು.
ಈ ಸಮಾವೇಶದಲ್ಲಿ ಹಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಭಾಯಾಗಡ್ ಕ್ಷೇತ್ರದಲ್ಲಿ ಸೇವಾಲಾಲ್ -ಮರಿಯಮ್ಮಾ ಬಿಳಿಕೆಂಪು ಧ್ವಜ ಮತ್ತು ನಮ್ಮ ರಾಷ್ಟ್ರೀಯ ಧ್ವಜ ಮಾತ್ರ ಹಾರಾಡಬೇಕು. ಇನ್ಯಾವುದೇ ಧ್ವಜ ಹಾರಾಟಕ್ಕೆ ಅವಕಾಶ ಇರಬಾರದು. ಮಹಾಮಠ ಸಮಿತಿಯ ಪರವಾನಿಗೆ ಇಲ್ಲದೇ ಕರಪತ್ರ ಮುದ್ರಿಸಿ ಪ್ರಚಾರ ಮಾಡಿದ ತಪ್ಪಿಗಾಗಿ ಆರ್ ಎಸ್ ಎಸ್ ಬಂಜಾರ ಸಮುದಾಯದ ಕ್ಷಮೆ ಯಾಚಿಸಬೇಕು. ಶಿಬಿರ ನಡೆಸಲು ಅವಕಾಶ ಕೋರಿ ಆರ್ ಎಸ್ ಎಸ್ ನೀಡಿರುವ ಪತ್ರವನ್ನು ತಿರಸ್ಕರಿಸಬೇಕೆಂದು ಸಮಾವೇಶದಲ್ಲಿ ತಿಳಿಸಿದರು.

ಸಂತ ಸೇವಾಲಾಲ್ ಜನ್ಮಸ್ಥಳ ರಾಜಕೀಯದಿಂದ ಮುಕ್ತವಾಗಿರಬೇಕು
ಸಂತ ಸೇವಾಲಾಲ್ ಜನ್ಮಸ್ಥಳ ಭಾಯಾಗಡ ಅನ್ನು ಪಕ್ಷ ರಾಜಕೀಯದಿಂದ ಮುಕ್ತಗೊಳಿಸಬೇಕು. ರಾಜಕೀಯ ಪಕ್ಷಗಳ ಮುಖಂಡರು ಅಲ್ಲಿಗೆ ಕೇವಲ ಭಕ್ತರಾಗಿ ಆಗಮಿಸಿ ಪ್ರಾರ್ಥನೆ ಮತ್ತು ಸೇವೆ ಸಲ್ಲಿಸಿ ಹೋಗುವಂತೆ ನಿಯಮ ರೂಪಿಸಬೇಕು. ಭಾಯಾಗಡ್ ವಿಶ್ವ ಬಂಜಾರರ ಪರಮೋಚ್ಚ ಧಾರ್ಮಿಕ ಕೇಂದ್ರ. ಇದರ ಜೊತೆಗೆ ಸರಕಾರದ ಯಾವುದೇ ಇಲಾಖೆ, ತಾಂಡ ಅಭಿವೃದ್ಧಿ ನಿಗಮ, ಬಂಜಾರ ಅಕಾಡೆಮಿ ಸೇರಿದಂತೆ ಯಾವುದೇ ಸಂಸ್ಥೆಗಳು ಲಿಖಿತ ಪತ್ರ, ಆದೇಶಗಳು ಮೂಲಕ ಮಹಾಮಠ ಸಮಿತಿಯ ಜೊತೆಗೆ ವ್ಯವಹರಿಸುವಂತಹ ನಿಯಮ ರೂಪಿಸಬೇಕು. ಮೌಖಿಕ ಅಥವಾ ಬೈಪಾಸ್ ಮಾಡಿ ಚಟುವಟಿಕೆಗಳನ್ನು ಸಂಘಟಿಸುವ ಪರಿಪಾಠಗಳು ನಿಲ್ಲಬೇಕು.
ಬಂಜಾರ ಸಂಸ್ಕೃತಿ, ಪರಂಪರೆಯ ಸಂರಕ್ಷಣೆ, ಬಂಜಾರರು ಮತ್ತು ತಾಂಡಗಳ ಸಮಗ್ರ ಅಭಿವೃದ್ಧಿಗಾಗಿ ಭಾಯಾಗಡ್ ಮಹಾಮಠ ಸಮಿತಿ, ಪ್ರತಿಷ್ಠಾನ ಕಾರ್ಯನಿರ್ವಹಿಸುವಂತಾಗಬೇಕು. ಭಾಯಾಗಡ್ ಮಹಾಮಠ ಸಮಿತಿ ಮತ್ತು ಪ್ರತಿಷ್ಠಾನಕ್ಕೆ ರಾಜ್ಯದ ಎಲ್ಲಾ ಬಂಜಾರ ಸಂಘಟನೆಗಳ ಮುಖಂಡರು, ಸಮಾಜದ ಸ್ವಾಮೀಜಿಯವರು, ಎಲ್ಲಾ ತಾಂಡಗಳ ನಾಯಕ್, ಡಾವೊ, ಕಾರಬಾರಿ, ನಸಾಬಿ ಸೇರಿದಂತೆ ಎಲ್ಲಾ ಆಸಕ್ತರಿಗೆ ಮುಕ್ತವಾಗಿ ಸದಸ್ಯತ್ವ ನೀಡಬೇಕು. ಪ್ರಜಾಸತ್ತಾತ್ಮಕವಾಗಿ ಎಲ್ಲಾ ಹಂತದ ಸಮಿತಿಗಳಿಗೆ ಪದಾಧಿಕಾರಿಗಳ ಆಯ್ಕೆ, ಜವಾಬ್ದಾರಿ ನೀಡುವಂತಾಗಬೇಕು.
ಭಾಯಾಗಡ್ ಮಹಾಮಠ ಸಮಿತಿ ಮತ್ತು ಪ್ರತಿಷ್ಠಾನದ ಆದಾಯ, ಖರ್ಚು, ಉಳಿತಾಯ, ಮತ್ತು ಸಾಲದ ವಿವರಗಳು ಪ್ರತಿಯೊಬ್ಬ ಬಂಜಾರರಿಗೆ ತಿಳಿಯಬೇಕಿದೆ. ಹೀಗಾಗಿ ಕಾಲಕಾಲಕ್ಕೆ ಲೆಕ್ಕಪತ್ರದ ಶ್ವೇತಪತ್ರವನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸುವ ನಿರ್ಣಯವನ್ನು ಸಮಾವೇಶದಲ್ಲಿ ಅಂಗೀಕರಿಸಲಾಯಿತು.
ಭಾಯಾಗಡ್ ನಲ್ಲಿ RSS ಶಿಬಿರ ವಿರೋಧಿಸಿ ಅಯ್ದ ಜಿಲ್ಲೆಗಳಲ್ಲಿ ಜಾಗೃತಿ ಸಭೆಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಸೆಪ್ಟೆಂಬರ್ 10 ರಿಂದ ಭಾಯಾಗಡ್ ನಲ್ಲಿ ಕಾರ್ಯಕ್ರಮ ಆಯೋಜಿಸಲು ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ತಯಾರಿ ಸಿದ್ದತೆ ಮಾಡಿಕೊಳ್ಳಬೇಕು. ಕಾರ್ಯಕ್ರಮದ ಸ್ವರೂಪ ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಬಂಜಾರ ಸಮುದಾಯದ ಮುಖಂಡರು ತಿಳಿಸಿದ್ದಾರೆ.












Click it and Unblock the Notifications