Arvind Kejriwal : ದಾವಣಗೆರೆಯಲ್ಲಿಂದು ಎಎಪಿ ಪ್ರಚಾರ- ಅರವಿಂದ್ ಕೇಜ್ರಿವಾಲ್ ಭಾಗಿ!
ಕರ್ನಾಟಕ ವಿಧಾನಸಭೆ ಚುನಾವಣೆ ಬೆನ್ನಲ್ಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ದಾವಣಗೆರೆಗೆ ಭೇಟಿ ನೀಡಲಿದ್ದಾರೆ.
ದಾವಣಗೆರೆ ಮಾರ್ಚ್ 4: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ರಂಗು ಹೆಚ್ಚಾಗಿದ್ದು ಪ್ರಬಲ ಪಕ್ಷಗಳ ಹಿರಿಯ ನಾಯಕರು ಪ್ರಚಾರದಲ್ಲಿ ಭಾಗಿಯಾಗುವ ಮೂಲಕ ಮತಭೇಟೆ ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಇಂದು ರಾಜ್ಯಕ್ಕೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್ ಭೇಟಿ ನೀಡಲಿದ್ದಾರೆ.
ಇಬ್ಬರು ನಾಯಕರು ಕರ್ನಾಟಕದ ರಾಜಕೀಯದಲ್ಲಿ ಪ್ರಾಮಾಣಿಕತೆ ಮತ್ತು ಸಮಗ್ರತೆಯನ್ನು ತರಲು ಕೆಲಸ ಮಾಡಲು ಎಲ್ಲಾ 224 ಕ್ಷೇತ್ರಗಳ ಪಕ್ಷದ ರಾಜ್ಯ ಪದಾಧಿಕಾರಿಗಳು ಮತ್ತು ಬ್ಲಾಕ್ ಹಾಗೂ ವೃತ್ತ ಸಮಿತಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಸಹವರ್ತಿ ಭಗವಂತ್ ಮಾನ್ ಅವರೊಂದಿಗೆ ಇಂದು ದಾವಣಗೆರೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ರಾಜ್ಯದಲ್ಲಿ ಮಾತನಾಡಲಿದ್ದಾರೆ. ಈ ವೇಳೆ ರಾಜ್ಯದ ಜನರಿಗೆ ಪ್ರಮುಖ ಯೋಜನೆಗಳು ಮತ್ತು ಖಾತರಿಗಳನ್ನು ಘೋಷಿಸಲಾಗುವುದು ಎಂದು ರಾಜ್ಯ ಎಎಪಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದ್ದಾರೆ.

ರಾಜ್ಯದಲ್ಲಿ ಎಎಪಿ ಮೊದಲ ಪ್ರಚಾರ
ಈ ಕಾರ್ಯಕ್ರಮ ರಾಜ್ಯ ವಿಧಾನಸಭೆ ಚುನಾವಣೆಗೆ ಎಎಪಿ ನಡೆಸುತ್ತಿರುವ ಮೊದಲ ಪ್ರಚಾರವಾಗಿದ್ದು, ಇದರಲ್ಲಿ ಕೇಜ್ರಿವಾಲ್, ಭಗವಂತ್ ಮಾನ್ ಮತ್ತು ವಿವಿಧ ಎಎಪಿ ನಾಯಕರು ಭಾಗವಹಿಸಲಿದ್ದಾರೆ. ಜನವರಿಯಲ್ಲಿ ಎಎಪಿ ನಾಯಕ ಅತಿಶಿ ಮರ್ಲೆನಾ ಅವರು ಚುನಾವಣೆಯಲ್ಲಿ ರಾಜ್ಯಾದ್ಯಂತ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಮತ್ತು ಮಾರ್ಚ್ ಮೊದಲ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಘೋಷಿಸಿದರು.
ಬೆಂಗಳೂರು ನಗರ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಮಂಗಳವಾರ ಬಿಜೆಪಿಗೆ ಸೇರ್ಪಡೆಗೊಳ್ಳಲು ಪಕ್ಷವನ್ನು ತೊರೆದಿರುವ ಬೆನ್ನಲ್ಲೆ ಕೇಜ್ರಿವಾಲ್ ಅವರು ಚುನಾವಣಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ರಾವ್ ಐಪಿಎಸ್ಗೆ ರಾಜೀನಾಮೆ ನೀಡಿ ಕಳೆದ ವರ್ಷ ಏಪ್ರಿಲ್ನಲ್ಲಿ ಎಎಪಿ ಸೇರಿದ್ದರು. ಇತ್ತೀಚೆಗೆ ಅವರನ್ನು ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಹೀಗಾಗಿ ಎಎಪಿಯ ಕಾರ್ಯಾಧ್ಯಕ್ಷ ರವಿಚಂದ್ರ ನೆರಬೆಂಚಿ ಹಾಗೂ ಹಿರಿಯ ನಾಯಕರು ಪಕ್ಷದ ಸಂಘಟನೆಯನ್ನು ಕಟ್ಟುವತ್ತ ಗಮನಹರಿಸುತ್ತಿದ್ದಾರೆ.
ದೆಹಲಿಯ ಆಡಳಿತದ ಮಾದರಿ ತರಲು ಚಿಂತನೆ
ರಾಜ್ಯದಲ್ಲಿ ದೆಹಲಿಯ ಆಡಳಿತದ ಮಾದರಿಯಲ್ಲಿ ಎಎಪಿ ಪರ್ಯಾಯ ಆಲೋಚನೆಗಳನ್ನು ಪ್ರಾರಂಭಿಸುತ್ತದೆ. ಆಪ್ ನಾಯಕ ಬ್ರಿಜೇಶ್ ಕಾಳಪ್ಪ ಶುಕ್ರವಾರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪದೇ ಪದೇ ಕರ್ನಾಟಕಕ್ಕೆ ಬಂದು ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಚುನಾವಣಾ ಭಾಷಣ ಮಾಡುತ್ತಾರೆ ಎಂದಿದ್ದಾರೆ.

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂಬಂತೆ ಮಾತನಾಡುತ್ತಿದ್ದಾರೆ. ಆದರೆ ಈಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಮತ್ತಿತರರ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮಾತನಾಡಿಲ್ಲ.
ಈಗ ಅವರ ಪಕ್ಷದ ಮತ್ತೊಬ್ಬ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಕಮಿಷನ್ ಪಡೆಯುತ್ತಿದ್ದಾಗ ಸಾಕ್ಷಿ ಸಮೇತ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಸುಮಾರು ₹8 ಕೋಟಿ ದಾಖಲೆ ಇಲ್ಲದ ನಗದು ಪತ್ತೆಯಾಗಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಧೈರ್ಯವಿದ್ದರೆ ಈ ಬಗ್ಗೆ ಪ್ರತಿಕ್ರಿಯಿಸಲಿ ಎಂದು ಅವರು ಹೇಳಿದರು.












Click it and Unblock the Notifications