ಪದೇಪದೇ ಪಕ್ಷ ಬದಲಿಸ್ತೀಯಾ ಎಂದು ನಗರಸಭೆ ಸದಸ್ಯನ ಮೇಲೆ ಹಲ್ಲೆ
ಮತದಾರರಿಗೆ ಯಾವ ಕಾರಣಕ್ಕೆ ಸಿಟ್ಟು ಬರಬಹುದು ಮತ್ತು ಹಾಗೆ ಬಂದಾಗ ತಾವೇ ಆರಿಸಿ ಕಳಿಸಿದ ಜನಪ್ರತಿನಿಧಿ ಜತೆ ಹೇಗೆ ವರ್ತಿಸಬಹುದು ಅನ್ನೋದಕ್ಕೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದ ಹಲ್ಲೆ ಪ್ರಕರಣದ ಈ ವರದಿ ಸಾಕ್ಷಿಯಂತಿದೆ
ಹರಿಹರ, ಮೇ 19: ಪದೇಪದೇ ಪಕ್ಷ ಬದಲಿಸಿದರು ಅನ್ನೋ ಕಾರಣಕ್ಕೆ ಇಲ್ಲಿನ ನಗರಸಭೆ ಸದಸ್ಯ ಹಜರತ್ ಅಲಿ ಅವರಿಗೆ ಬೆಂಕಿನಗರದ ಜನರು ಗುರುವಾರ ಹಲ್ಲೆ ನಡೆಸಿದ್ದಾರೆ. ಇಪ್ಪತ್ಮೂರನೇ ವಾರ್ಡ್ ಸದಸ್ಯ ಗುರುವಾರ ಬೆಳಗ್ಗೆ ಕ್ಷೌರ ಮಾಡಿಸಿಕೊಂಡು ವಾಪಸ್ ತೆರಳುವಾಗ ಅಡ್ಡ ಹಾಕಿದ ಕೆಲವರು ಹೊಡೆತ ಕೊಟ್ಟಿದ್ದಾರೆ.
2013ರಲ್ಲಿ ಹಜರತ್ ಅಲಿ ಕಾಂಗ್ರೆಸ್ ಟಿಕೆಟ್ ಪಡೆದು ಸದಸ್ಯರಾಗಿ ಆಯ್ಕೆಯಾಗಿದ್ದರು. ಇನ್ನು 2014ರಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೆ ಅವರನ್ನು ಬೆಂಬಲಿಸಿದ್ದರು. ಕಳೆದ ಏಪ್ರಿಲ್ 24ರಂದು ಎರಡನೇ ಅವಧಿಯಲ್ಲಿ ಅಧ್ಯಕ್ಷೆಯಾದ ಆಶಾ ಮರಿಯೋಜಿ ರಾವ್ ವಿರುದ್ಧ ಅವಿಶ್ವಾಸ ಮಂಡನೆ ಅರ್ಜಿಗೆ ಅಲಿ ಸಹಿ ಹಾಕಿದ್ದರು.[ಬಿಜೆಪಿ ಸಂಸದ ಸಿದ್ದೇಶ್ವರ ಮನೆ ಮೇಲೆ ಐಟಿ ದಾಳಿ]
ಯಾವಾಗ ಅವಿಶ್ವಾಸ ಮಂಡನೆ ಸಭೆಯ ನೋಟಿಸ್ ಜಾರಿಯಾಯಿತೋ ಆಗ ನಾಲ್ವರು ಸದಸ್ಯರು ಕಾಣೆಯಾಗಿದ್ದರು. ಆ ನಾಲ್ವರ ಪೈಕಿ ಅಲಿ ಕೂಡ ಇದ್ದರು. ಯಾವಾಗ ಅವಿಶ್ವಾಸ ಮಂಡನೆಗೆ ತಡೆಯಾಜ್ಞೆ ಸಿಕ್ಕಿತೋ ಆನಂತರವೇ ಹಜರತ್ ಅಲಿ ನಗರಕ್ಕೆ ವಾಪಸ್ ಆಗಿದ್ದರು. ಆದರೆ ಈ ಹಲ್ಲೆ ಪ್ರಕರಣವೇನೋ ರಾಜೀ ಸಂಧಾನದ ಮೂಲಕ ಸರಿಹೋಗಿದೆಯಂತೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ ಎಂಬುದು ಸದ್ಯದ ಸುದ್ದಿ.