ಅಫ್ಘನ್ನಿಂದ ಪಾರಾಗಿ ಬಂದ ದಾವಣಗೆರೆಯ ಯುವಕ ಬಿಚ್ಚಿಟ್ಟ ಭಯಾನಕ ಕಥೆ!
ದಾವಣಗೆರೆ, ಆಗಸ್ಟ್ 25: "ಬಂದೂಕಿನ ನಳಿಕೆಯಿಂದ ಹಾರುತ್ತಿದ್ದ ಗುಂಡು ಜನರ ಎದೆ ಸೀಳುತ್ತಿದ್ವು. ಕಣ್ಣಾರೆ ಕಂಡಾಗ ಒಮ್ಮೆಲೆ ಜೀವ ಹೋದ ಹಾಗೆ ಆಗುತ್ತಿತ್ತು. ನಾನು ಬದುಕುತ್ತೇನೆ ಎಂಬ ಆಸೆಯೇ ಕಮರಿ ಹೋಗಿತ್ತು. ಒಂದೆಡೆ ಉಗ್ರರ ಕೈಯಲ್ಲಿನ ಬಂದೂಕಿನಿಂದ ಸಿಡಿಯುವ ಗುಂಡುಗಳು ಪ್ರಾಣ ಬಲಿ ಪಡೆಯುತ್ತಿದ್ದರೆ, ಮತ್ತೊಂದೆಡೆ ಕಣ್ಣಾರೆ ನೋಡುವವರ ಮನದಲ್ಲಿ ಕಂಪನ. ಜೀವ ಉಳಿಯುವ ಆಸೆ ಕೈಬಿಟ್ಟರೂ ಬದುಕಿ ಬಂದಿದ್ದೇ ಪವಾಡ.''
ಇದು ತಾಲಿಬಾನ್ ಉಗ್ರರ ಕಪಿಮುಷ್ಠಿಯಲ್ಲಿರುವ ಅಫ್ಘಾನಿಸ್ತಾನದಿಂದ ಭಾರತಕ್ಕೆ ಮರಳಿರುವ ಮೂಲತಃ ದಾವಣಗೆರೆ ತಾಲೂಕಿನ ಆನೆಗೋಡು ಬಳಿಯ ಸುಲ್ತಾನಿಪುರ ಗ್ರಾಮದ ಯುವಕ ವಿನಯ್ ಹೇಳಿದ ಭಯಾನಕ ಘಟನೆಯ ಚಿತ್ರಣದ ಸ್ಯಾಂಪಲ್. ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿ ಎಸ್. ಕೆ. ಕುಮಾರಸ್ವಾಮಿ ಪುತ್ರ.

ಯಾರು ಈ ವಿನಯ್?
ಕಳೆದ ಹತ್ತು ವರ್ಷಗಳ ಹಿಂದೆ ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಇನ್ಸ್ಟ್ರುಮೆಂಟೇಷನ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದರು. ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಆರ್ಚಿ ಇಂಜಿನಿಯರಿಂಗ್ ಕಂಪೆನಿಯಲ್ಲಿ ಒಂದು ವರ್ಷ ಕೆಲಸ ಮಾಡಿ ಬಳಿಕ, ಅಂದರೆ 2013ರಲ್ಲಿ ಅಫ್ಘಾನಿಸ್ತಾನದಲ್ಲಿ ಆಟೋಮೆಷನ್ ಇಂಜಿನಿಯರಿಂಗ್ ಕೆಲಸಕ್ಕೆ ಆಯ್ಕೆಯಾಗಿದ್ದರು. ಕಂದಹಾರ್ನಲ್ಲಿ ಕೆಲಸ ಶುರು ಮಾಡಿದ ವಿನಯ್, 2017ರವರೆಗೆ ಅಲ್ಲಿಯೇ ಕೆಲಸ ಮಾಡುತ್ತಿದ್ದರು. 2018ರ ಬಳಿಕ ಕಾಬೂಲ್ನಲ್ಲಿನ ಹಮೀದ್ ಕರ್ಜೈನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವರ್ಗಾವಣೆಯಾಗಿ ಕೆಲಸ ಮಾಡುತ್ತಿದ್ದರು.

ತಾಲಿಬಾನಿಗಳ ಕಬ್ಜದ ಸುಳಿವು
ಆದರೆ ಆಗಸ್ಟ್ 14ರ ರಾತ್ರಿ ತಾಲಿಬಾನಿಗಳು ಅಫ್ಘನ್ ವಶಕ್ಕೆ ಪಡೆಯುವ ಮಾಹಿತಿ ಎಲ್ಲರಿಗೂ ಬಂದಿದೆ. ಆಗಿನಿಂದಲೇ ಎಲ್ಲರೂ ತವರಿಗೆ ಮರಳುವತ್ತಲೇ ಚಿತ್ತ ನೆಟ್ಟಿದೆ. ಈ ಕನಸು ವಿನಯ್ಗೂ ಶುರುವಾಗಿದೆ. ಒಂದು ವೇಳೆ ಉಗ್ರರ ಕೈವಶವಾದರೆ ಹೇಗೆ ಬಚಾವಾಗುವುದು ಎಂಬ ಚಿಂತೆಯೂ ಕಾಡಲಾರಂಭಿಸಿದೆ. ವಿನಯ್ ಇದ್ದ ಕ್ಯಾಂಪಿನ 50ರಿಂದ 100 ಮೀಟರ್ ದೂರದಲ್ಲಿದ್ದ ಕ್ಯಾಂಪಿನ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಆದರೆ ಅಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ತಾಲಿಬಾನಿಗಳು ಓಡಾಡುವ ದೃಶ್ಯ ಕಂಡು ಬಂದವು. ನಮಗೆ ಇದ್ದ ಒಂದೇ ಒಂದು ದಾರಿ ಅಂದರೆ ಹಮೀದ್ ಕರ್ಜೈ ಏರ್ಪೋರ್ಟ್ ಮಾತ್ರ. ಇಲ್ಲಿಂದಲೇ ಅಲ್ಲಿದ್ದವರು ಪಾರಾಗಿ ಬಂದಿದ್ದಾರೆ. ಅವರ ಜೊತೆಗೆ ದಾವಣಗೆರೆಯ ವಿನಯ್ ಸಹ ಒಬ್ಬರು.

ಅನ್ನನೂ ಇಲ್ಲ, ನೀರೂ ಇಲ್ಲ!
"ತಾಲಿಬಾನಿಗಳ ಕ್ರೌರ್ಯ, ಅಟ್ಟಹಾಸ, ರಕ್ತಪಾತ, ಹೀನಾಯ ಕೃತ್ಯಗಳನ್ನು ಕಂಡಿರುವ ವಿನಯ್ ಬೆಚ್ಚಿಬಿದ್ದಿದ್ದಾರೆ. ಕಾಬೂಲ್ನಲ್ಲಿನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಮೇಲೆ ಅಫ್ಘಾನಿಸ್ತಾನದ ಜನರು ಕೂತಿದ್ದು, ಅಲ್ಲಿಂದ ಪಾರಾಗಲು ಯತ್ನಿಸಿದ್ದು, ತಾಲಿಬಾನಿಗಳ ಬಂದೂಕಿನಿಂದ ಬರುತ್ತಿದ್ದ ಗುಂಡು ಎಂಥವರ ಎದೆಯನ್ನು ಒಮ್ಮೆಲೆ ಝಲ್ ಎನಿಸುವಂತಿತ್ತು. ಕೆಲವರು ಕೆಳಗಡೆ ಬೀಳುವುದನ್ನು ನೋಡಿದ ನನಗೆ ಶಾಕ್ ಆಯ್ತು. ಜೊತೆಗೆ ಇಂಥ ಘಟನೆಯನ್ನು ಜೀವನದಲ್ಲಿಯೇ ಕಂಡಿರಲಿಲ್ಲ," ಎನ್ನುತ್ತಾರೆ ನವೀನ್.

ತಾಲಿಬಾನಿಗಳ ಪ್ರಭಾವ ಇರಲಿಲ್ಲ
"ಇನ್ನು ಆಗಸ್ಟ್ ತಿಂಗಳ ಮೊದಲು ತಾಲಿಬಾನಿಗಳು ಅಫ್ಘನ್ನ್ನು ಈ ಮಟ್ಟಕ್ಕೆ ವಶಕ್ಕೆ ಪಡೆದು ಅನಾಹುತ ಸೃಷ್ಟಿಸುತ್ತಾರೆ ಎಂಬ ಕಲ್ಪನೆಯೇ ಇರಲಿಲ್ಲ. ಆದರೆ ಮಾರ್ಚ್ ತಿಂಗಳಿನಲ್ಲಿ ಸುಳಿವು ಸಿಕ್ಕಿತಾದರೂ ಅಸುರಕ್ಷಿತ ಭಾವನೆ ಇತ್ತು ಅಷ್ಟೇ."
"ಆಗಸ್ಟ್ 14ರ ಬಳಿಕ ನೋಡ ನೋಡುತ್ತಿದ್ದಂತೆ ಎಲ್ಲವೂ ಘಟಿಸಿ ಹೋಯ್ತು. ಅಮೆರಿಕ ಯಾವಾಗ ತನ್ನ ಸೇನೆ ಹಿಂದಕ್ಕೆ ಪಡೆಯುತ್ತಾ ಹೋಯಿತೋ ಆಗ ನಮಗೆ ಭಯ ಜಾಸ್ತಿ ಆಯ್ತು. ನನ್ನ ಜೊತೆಗಿನ 150 ಕೆಲಸಗಾರರು ಭಯಪಟ್ಟರು. ಕೀನ್ಯಾ, ದಕ್ಷಿಣ ಆಫ್ರಿಕಾ, ಕರ್ನಾಟಕದ ಹತ್ತು ಜನರು, ಗೋವಾ, ತಮಿಳುನಾಡಿನವರೂ ನನ್ನ ಜೊತೆಯಲ್ಲೇ ಇದ್ದರು," ಎಂದು ವಿನಯ್ ಹೇಳಿದ್ದಾರೆ."ಇನ್ನು ಉಗ್ರರ ಕೈಯಿಂದ ತಪ್ಪಿಸಿಕೊಂಡು ಬರಲು ಸಾಕಷ್ಟು ಸಮಸ್ಯೆಗಳು ಆದವು. ಊಟ ಇಲ್ಲ, ನೀರೂ ಇಲ್ಲ. ಅಲ್ಲಿ ಯಾರು ಕೇಳಲು ಇರಲಿಲ್ಲ. ಅವರವರ ಜೀವ ಉಳಿದರೆ ಸಾಕು ಎಂಬುದೇ ಎಲ್ಲರ ಚಿತ್ತ ಆಗಿತ್ತು. ಒಟ್ಟಿನಲ್ಲಿ ತಾನು ಬದುಕಿದ್ದೇ ಪವಾಡ ಎನ್ನುವ ವಿನಯ್ ಸತ್ತು ಬದುಕಿದ್ದೇನೆ," ಎಂದು ವಿನಯ್ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.











Click it and Unblock the Notifications