ಬೊಮ್ಮಾಯಿ ನಾಯಕತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆ: ಅಮಿತ್ ಶಾ ಘೋಷಣೆ
ದಾವಣಗೆರೆ, ಸೆಪ್ಟೆಂಬರ್ 2: "ಕರ್ನಾಟಕದಲ್ಲಿ 2023ರ ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಲಾಗುವುದು. ಈ ಮೂಲಕ ಮತ್ತೆ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ," ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ದಾವಣಗೆರೆ ನಗರದ ಜಿಎಂಐಟಿಯಲ್ಲಿ ಗಾಂಧಿಭವನ, ಕೊಂಡಜ್ಜಿಯ ಪಬ್ಲಿಕ್ ಶಾಲೆಯ ಉದ್ಘಾಟನೆಯನ್ನು ಬಟನ್ ಒತ್ತುವ ಮೂಲಕ ನೆರವೇರಿಸಿ ಮಾತನಾಡಿದ ಅಮಿತ್ ಶಾ, "ಬಿ.ಎಸ್. ಯಡಿಯೂರಪ್ಪ ಸ್ವಯಂ ನಿರ್ಧಾರ ತೆಗೆದುಕೊಂಡು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಬಸವರಾಜ ಬೊಮ್ಮಾಯಿ ಸಿಎಂ ಆದರು. ಈಗ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಹಾಗೂ ರಾಜಕೀಯವಾಗಿ ಉತ್ತಮ ನಡವಳಿಕೆ, ಹೆಸರು ಹೊಂದಿರುವ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಬಿಜೆಪಿ ಕರ್ನಾಟಕದಲ್ಲಿ ಎದುರಿಸಲಿದೆ," ಎಂದು ಘೋಷಿಸಿದರು.
"ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ಎರಡು ವರ್ಷ ಒಳ್ಳೆಯ ಕೆಲಸ ಮಾಡಿದ್ದಾರೆ. ರೈತರು, ಜನರು, ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಒಳ್ಳೆಯ ಆಡಳಿತ ನೀಡಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರ ಕೊಡುಗೆ ಪಕ್ಷಕ್ಕೆ ದೊಡ್ಡದಿದೆ," ಎಂದು ಹೇಳಿದರು.

ಬಿಜೆಪಿ ಮತ್ತಷ್ಟು ಬಲಿಷ್ಠವಾಗಲಿದೆ
"ಯಡಿಯೂರಪ್ಪ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದವರು. ಅವರ ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದು, ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗಲಿದೆ. ಕರ್ನಾಟಕವು ಬೇರೆ ರಾಜ್ಯಗಳಿಗಿಂತಲೂ ಅಭಿವೃದ್ಧಿ ವಿಚಾರದಲ್ಲಿ ಉನ್ನತ ಸ್ಥಾನಕ್ಕೆ ಏರಲಿ," ಎಂದು ಹಾರೈಸಿದರು.
"ಕೊರೊನಾ ಸೋಂಕಿನಿಂದ ಪ್ರತಿಯೊಬ್ಬರು ವಿಜಯಶಾಲಿಗಳಾಗಿ ಬರುವಂತ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕತೆಗೂ ಹೊಡೆತ ಬಿದ್ದಿದೆ. ಕೇಂದ್ರ ಸರ್ಕಾರ ಇದೆಲ್ಲವನ್ನೂ ನಿಭಾಯಿಸಿಕೊಂಡು ಬಂದಿದೆ. ದೇಶಾದ್ಯಂತ ಕೋವಿಡ್ ಲಸಿಕೆ ನೀಡಿಕೆ ಕಾರ್ಯ ಜೋರಾಗಿ ನಡೆಯುತ್ತಿದೆ. ದೇಶ ಮಾತ್ರವಲ್ಲ, ಕರ್ನಾಟಕದಲ್ಲಿಯೂ ವ್ಯಾಕ್ಸಿನ್ ನೀಡಲಾಗುತ್ತಿದೆ. ಮುಂಬರುವ ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ ನೀಡುವ ಕಾರ್ಯ ಮಾಡಲಾಗುತ್ತದೆ," ಎಂದು ಭರವಸೆ ನೀಡಿದರು.
ಹೆಮ್ಮಾರಿ ಓಡಿಸಲು ಎಲ್ಲಾ ರೀತಿಯ ಕ್ರಮ
"ಕೊರೊನಾ ಎಂಬ ಮಹಾಮಾರಿ ಕೇವಲ ಭಾರತ ಮಾತ್ರವಲ್ಲ, ವಿಶ್ವವನ್ನೇ ಕಂಗೆಡಿಸಿದೆ. ಇದನ್ನು ಸಮರ್ಥವಾಗಿ ಎದುರಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕ್ರಮ ತೆಗೆದುಕೊಂಡಿದೆ. ಹೆಮ್ಮಾರಿ ಓಡಿಸಲು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಮನೆಯಿಂದ ಹೊರಲು ಸಾಧ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಾವಿರಾರು ಕೋಟಿ ರೂಪಾಯಿಯನ್ನು ಕೊರೊನಾ ಲಸಿಕೆ ನೀಡಿಕೆ ಮಾಡಲಾಗುತ್ತಿದೆ. ಚಿಕಿತ್ಸೆಯಾಗಲೀ, ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಆಗುತ್ತಿದೆ. ಜನರ ಕಣ್ಣೊರೆಸಿದೆ. ಕೊರೊನಾಕ್ಕೆ ಅನೇಕ ವಾರಿಯರ್ಸ್ ಸಾವನ್ನಪ್ಪಿದ್ದು ಬೇಸರದ ಸಂಗತಿ. ಕೊರೊನಾ ವಿರುದ್ಧದ ಹೋರಾಟದಿಂದ ಹಿಂದೆ ಸರಿಯವ ಪ್ರಶ್ನೆಯೇ ಇಲ್ಲ," ಎಂದು ಹೇಳಿದರು.

ಅಮಿತ್ ಶಾಗೆ ಅದ್ಧೂರಿ ಸ್ವಾಗತ
ಬಿಜೆಪಿಯ ಚಾಣಕ್ಯ ಅಂತಾನೇ ಕರೆಯಲ್ಪಡುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ಬೆಣ್ಣೆನಗರಿ ದಾವಣಗೆರೆಗೆ ಬರುತ್ತಿದ್ದಂತೆಯೇ ಅದ್ಧೂರಿ ಸ್ವಾಗತ ಕೋರಲಾಯಿತು. ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ಅಮಿತ್ ಶಾ ಜೊತೆ ಸಿಎಂ ಬಸವರಾಜ ಬೊಮ್ಮಾಯಿಗೂ ಸ್ವಾಗತ ಕೋರಲಾಯಿತು.
Recommended Video

ದಾವಣಗೆರೆಯಲ್ಲಿ ಬಿಗಿ ಬಂದೋಬಸ್ತ್
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಆನಂದ್ ಸಿಂಗ್, ಮುರುಗೇಶ್ ನಿರಾಣಿ ಆತ್ಮೀಯವಾಗಿ ಬರಮಾಡಿಕೊಂಡರು. ಇನ್ನು ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಚುನಾವಣಾ ಚಾಣಕ್ಯನನ್ನು ನೋಡಲು ಆಗಮಿಸಿದ್ದರು. ಬಿಗಿ ಪೊಲೀಸ್ ಏರ್ಪಡಿಸಿದ್ದ ಕಾರಣ ಒಳಗಡೆ ಯಾರನ್ನೂ ಬಿಟ್ಟಿರಲಿಲ್ಲ.
ಕೇಂದ್ರ ಸಚಿವ ಅಮಿತ್ ಶಾಗೆ ಝಡ್ ಪ್ಲಸ್ ಸೆಕ್ಯುರಿಟಿ ಇದ್ದು, ಹೆಚ್ಚಿನ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಇನ್ನು ಡ್ರೋಣ್ ಕ್ಯಾಮೆರಾ ಹಾರಾಟವನ್ನು ಜಿಲ್ಲೆಯಾದ್ಯಂತ ನಿಷೇಧ ಮಾಡಲಾಗಿತ್ತು. ಇನ್ನು ಸಚಿವ ಭೈರತಿ ಬಸವರಾಜ್ ಸ್ವಾಗತ ಕೋರಿದರು. ಕೃಷಿ ಸಚಿವ ಬಿ. ಸಿ. ಪಾಟೀಲ್, ಜಿಲ್ಲೆಯ ಬಿಜೆಪಿಯ ಎಲ್ಲಾ ಶಾಸಕರು, ಸಂಸದ ಜಿ. ಎಂ. ಸಿದ್ದೇಶ್ವರ್, ಮಹಾನಗರ ಪಾಲಿಕೆಯ ಮೇಯರ್ ಎಸ್. ಟಿ. ವೀರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮತ್ತಿತರರು ಹಾಜರಿದ್ದರು.












Click it and Unblock the Notifications