Breaking; ದಾವಣಗೆರೆ ವಿಮಾನ ನಿಲ್ದಾಣ, 3 ವಾರದಲ್ಲಿ ವರದಿ
ದಾವಣಗೆರೆ, ಜೂನ್ 03; ಬೆಣ್ಣೆ ನಗರಿ ದಾವಣಗೆರೆಯ ಜನರಿಗೆ ಸಿಹಿಸುದ್ದಿ. ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಶುಕ್ರವಾರ ದಾವಣಗೆರೆ ಜಿಲ್ಲೆಯ ಉದ್ದೇಶಿತ ವಿಮಾನ ನಿಲ್ದಾಣದ ಸ್ಥಳ ಪರಿಶೀಲನೆ ನಡೆಸಿದರು.
ಹಾಲುರ್ತಿ, ಅನಗೋಡು ಮತ್ತು ಉಳುಪಿನ ಕಟ್ಟೆ ಗ್ರಾಮಗಳ ಸುತ್ತಲಿನ 357 ಎಕರೆ ಪ್ರದೇಶವನ್ನು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಮೂರು ವಾರದಲ್ಲಿ ಈ ತಂಡ ತನ್ನ ವರದಿಯನ್ನು ನೀಡಲಿದೆ.
ಸುಮಾರು 52 ಸರ್ವೆ ನಂಬರುಗಳ ಭಾಗಶಃ ಪ್ರದೇಶದಲ್ಲಿ ಮಣ್ಣಿನ ನಮೂನೆ, ಹೈಟೆನ್ ಶನ್ ವಿದ್ಯುತ್ ಮರ್ ಹಾದುಹೋಗಿರುವುದು, ಭೂಮಿಯ ಸಮತಟ್ಟು ಮುಂತಾದವುಗಳನ್ನು ವೀಕ್ಷಿಸಿದರು.

ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ಪಾಲ್ಗೊಂಡರು. "ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದ್ದು ಸಾಧ್ಯಾಸಾಧ್ಯತೆಗಳ ವರದಿಯನ್ನು 3 ವಾರದೊಳಗಾಗಿ ನೀಡಲಾಗುವುದು" ಎಂದು ತಿಳಿಸಿದರು.
ಈ ವರ್ಷದ ಜನವರಿ ತಿಂಗಳಿನಲ್ಲಿ ಕರ್ನಾಟಕ ಮೂಲಸೌಕರ್ಯ ಅಭಿವೃದ್ದಿ ನಿಗಮದ ಅಧಿಕಾರಿಗಳು ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಎರಡು ಮೂರು ಕಡೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದರು. ಬಳಿಕ ಜಿಲ್ಲಾಡಳಿತ ಭವನದಲ್ಲಿ ಸಭೆ ಸಹ ನಡೆಸಿದ್ದರು.
ಕೇಂದ್ರ ವಿಮಾನಯಾನ ಸಚಿವಾಲಯ ದಾವಣಗೆರೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಡಳಿತಕ್ಕೆ ಪತ್ರ ಬರೆದಿತ್ತು. ಈ ಹಿನ್ನಲೆಯಲ್ಲಿ ಕರ್ನಾಟಕ ಮೂಲಸೌಕರ್ಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರವಿ ನೇತೃತ್ವದಲ್ಲಿ ಅಧಿಕಾರಿಗಳು ಆಗಮಿಸಿ, ಸ್ಥಳ ವೀಕ್ಷಣೆ ಮಾಡಿದ್ದರು.
ಮಧ್ಯ ಕರ್ನಾಟಕವಾದ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ದಾವಣಗೆರೆ ಪಕ್ಕದ ಶಿವಮೊಗ್ಗದಲ್ಲಿ ಈಗಾಗಲೇ ವಿಮಾನ ನಿಲ್ದಾಣದ ಕಾಮಗಾರಿ ಭರದಿಂದ ನಡೆಯುತ್ತಿದೆ. ಇದನ್ನು ಹೊರತುಪಡಿಸಿದರೆ ದಾವಣಗೆರೆಗೆ ಸಮೀಪವಿರುವ ವಿಮಾನ ನಿಲ್ದಾಣ ಹುಬ್ಬಳ್ಳಿ.












Click it and Unblock the Notifications