ಎನ್ಹೆಚ್-4 ಮತ್ತು ಎನ್ಹೆಚ್-173 ಸಂಪರ್ಕಿಸಲಿದೆ ಹೊಸ ರಸ್ತೆ
ದಾವಣಗೆರೆ, ಜುಲೈ 02: ರಾಷ್ಟ್ರೀಯ ಹೆದ್ದಾರಿ-173 ಮತ್ತು ರಾಷ್ಟ್ರೀಯ ಹೆದ್ದಾರಿ-4 ಸಂಪರ್ಕಿಸಲು ಹೊಸ ರಸ್ತೆ ನಿರ್ಮಾಣವಾಗಲಿದೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಮನವಿ ಸಲ್ಲಿಕೆ ಮಾಡಲಾಗಿದೆ.
ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದ್ದರು. ಆಗ ಅವರು ಆನಗೋಡು ತನಕ ರಸ್ತೆ ವಿಸ್ತರಣೆ ಮಾಡಿದರೆ ರಾಷ್ಟ್ರೀಯ ಹೆದ್ದಾರಿ-4 ಸಂಪರ್ಕಿಸಲು ಅನುಕೂಲವಾಗಲಿದೆ ಎಂದು ಮನವಿ ಸಲ್ಲಿಕೆ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-173 ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತನಕ 148 ನಿರ್ಮಾಣವಾಗಲಿದೆ. ಈ ಯೋಜನೆಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಈ ರಸ್ತೆಯನ್ನು ಆನಗೋಡು ತನಕ ವಿಸ್ತರಿಸಿದರೆ, ರಾಷ್ಟ್ರೀಯ ಹೆದ್ದಾರಿ-4 (ಪುಣೆ-ಬೆಂಗಳೂರು) ಸಂಪರ್ಕಿಸಬಹುದು.
ಯೋಜನೆಯ ವಿವರ: ಡಾ. ಪ್ರಭಾ ಮಲ್ಲಿಕಾರ್ಜುನ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿ ರಾಷ್ಟ್ರೀಯ ಹೆದ್ದಾರಿ-173 ಮೂಡಿಗೆರೆ-ಹೊಳಲ್ಕೆರೆ ರಸ್ತೆಯನ್ನು ಆನಗೋಡು ತನಕ ವಿಸ್ತರಣೆ ಮಾಡಿದರೆ ರಾಷ್ಟ್ರೀಯ ಹೆದ್ದಾರಿ-173 ಮತ್ತು ರಾಷ್ಟ್ರೀಯ ಹೆದ್ದಾರಿ-4 ಜೋಡಣೆಯಾದಂತಾಗುತ್ತದೆ. ಇದರಿಂದಾಗಿ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ವಿವರಣೆ ನೀಡಿದ್ದಾರೆ.
ಸದ್ಯ ಮೂಡಿಗೆರೆ-ಚಿಕ್ಕಮಗಳೂರು ನಡುವಿನ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಚಿಕ್ಕಮಗಳೂರು-ಕಡೂರು ಕಾಮಗಾರಿ ಪೂರ್ಣಗೊಂಡಿದೆ. ಕಡೂರು-ಹೊಸದುರ್ಗ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಮತ್ತು ಹೊಸದುರ್ಗ-ಹೊಳಲ್ಕೆರೆ ನಡುವಿನ ಕಾಮಗಾರಿ ಪ್ರಗತಿಯಲ್ಲಿದೆ.
ಹೊಳಲ್ಕೆರೆ ಮತ್ತು ಆನಗೋಡು ನಡುವಿನ ದೂರ 45 ಕಿ. ಮೀ. ಆಗಿದೆ. ಮೂಡಿಗೆರೆ-ಹೊಳಲ್ಕೆರೆ ರಸ್ತೆಯನ್ನು ಆನಗೋಡು ತನಕ ವಿಸ್ತರಣೆ ಮಾಡಿದರೆ ದಾವಣಗೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ-174 ಮತ್ತು ರಾಷ್ಟ್ರೀಯ ಹೆದ್ದಾರಿ-4 ಜೋಡಣೆಯಾಗಲಿದೆ.
ಈ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಜೋಡಣೆ ಮಾಡಿದರೆ ದಾವಣಗೆರೆ-ಚಿಕ್ಕಮಗಳೂರು ಮಾರ್ಗವಲ್ಲದೇ, ಆನಗೋಡು ಮಾರ್ಗವಾಗಿ ಚಿಕ್ಕಮಗಳೂರಿಗೆ ಕಡಿಮೆ ಅವಧಿಯಲ್ಲಿ ತೆರಳಲು ವಾಹನ ಸವಾರರಿಗೆ ಅನುಕೂಲವಾಗುತ್ತದೆ ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.
ಸಚಿವ ನಿತಿನ್ ಗಡ್ಕರಿ ಈ ವರ್ಷದ ಫೆಬ್ರವರಿಯಲ್ಲಿ ಟ್ವೀಟ್ವೊಂದನ್ನು ಮಾಡಿದ್ದರು. ಕರ್ನಾಟಕಕ್ಕೆ 400.69 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. 26 ಕಿ. ಮೀ. ಮೂಡಿಗೆರೆ-ಮೂಗ್ತಿಹಳ್ಳಿ ರಾಷ್ಟ್ರೀಯ ಹೆದ್ದಾರಿ-173 2 ಪಥದ ರಸ್ತೆಯನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಿದ್ದರು.
ಎಚ್ಹೆಚ್-173 ನಾಲ್ಕು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ. ಎನ್ಹೆಚ್-73(ಮೂಡಿಗೆರೆ), ಎನ್ಹೆಚ್-373 (ಚಿಕ್ಕಮಗಳೂರು), ಎನ್ಹೆಚ್-69 (ಕಡೂರು) ಮತ್ತು ಎನ್ಹೆಚ್-369 (ಹೊಳಲ್ಕೆರೆ) ಸಂಪರ್ಕಿಸಲಿದೆ ಎಂದು ಮಾಹಿತಿ ನೀಡಿದ್ದರು.
ಮತ್ತೊಂದು ಕಡೆ ಕೇಂದ್ರ ಸರ್ಕಾರದ ಭಾರತ್ ಮಾಲಾ ಯೋಜನೆಯಡಿ ಮಂಗಳೂರಿನ ನೆಲ್ಯಾಡಿಯಿಂದ ಮೂಡಿಗೆರೆ, ಚಿಕ್ಕಮಗಳೂರು, ಕಡೂರು, ಹೊಸದುರ್ಗ, ಹೊಳಲ್ಕೆರೆ ಮಾರ್ಗವಾಗಿ ಚಿತ್ರದುರ್ಗಕ್ಕೆ ನೂತನ ಚತುಷ್ಪಥ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗುತ್ತಿದೆ.
ನೆಲ್ಯಾಡಿ-ಚಿತ್ರದುರ್ಗ ನಡುವಿನ ಒಟ್ಟು 233 ಕಿ. ಮೀ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಸುಮಾರು 7 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರ ಪ್ಯಾಕೇಜ್-2ರಲ್ಲಿ ಆಂಧ್ರ ಪ್ರದೇಶ, ಗೋವಾ, ಕೇರಳ ಸಂಪರ್ಕಿಸುವ ಹೆದ್ದಾರಿಯೂ ನಿರ್ಮಾಣವಾಗಲಿದೆ.
ರಾಷ್ಟ್ರೀಯ ಹೆದ್ದಾರಿ-173 ಮೂಡಿಗೆರೆ, ವಸ್ತಾರೆ, ಚಿಕ್ಕಮಗಳೂರು, ಸಖರಾಯಪಟ್ಟಣ, ಕಡೂರು , ಹೊಸದುರ್ಗ ಮೂಲಕ ಸಾಗಲಿದೆ. ಪೂಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬೆಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮೂಲಕ ಸಾಗಲಿದೆ.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿ ಹೊಸ 45 ಕಿ. ಮೀ. ರಸ್ತೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದಾರೆ. ಇಲಾಖೆ ಇದಕ್ಕೆ ಒಪ್ಪಿಗೆ ನೀಡಿದರೆ. ರಾಷ್ಟ್ರೀಯ ಹೆದ್ದಾರಿ-173 ಮತ್ತು ಬೆಂಗಳೂರು-ಪುಣೆ ಹೆದ್ದಾರಿ ನಡುವೆ ಸಂಪರ್ಕ ಸಾಧ್ಯವಾಗಲಿದೆ.












Click it and Unblock the Notifications